Darshan: ಆಟೋ ಏರಿ ಹಣ ಕೊಟ್ರೆ, ಬೇಡ ಸರ್, ನಮ್ ಬಾಸ್ ಸಿನ್ಮಾಗೆ ಒಳ್ಳೆ ಸಂಭಾಷಣೆ ಬರೀರಿ ಎಂದ ಅಭಿಮಾನಿ
ಅಭಿಮಾನ ಅನ್ನೋದೇ ಹಾಗೆ. ಒಮ್ಮೆ ಬಂದ್ರೆ ಮುಗೀತು. ನೆಚ್ಚಿನ ನಟನನ್ನು ಹೃದಯದಲ್ಲಿ ಇಟ್ಟುಕೊಂಡು ಅಭಿಮಾನಿಗಳು ಆರಾಧಿಸುತ್ತಾರೆ. ನೆಚ್ಚಿನ ನಟನಿಗಾಗಿ ತನು, ಮನ, ಧನ ಅರ್ಪಿಸಲು ಅಭಿಮಾನಿಗಳು ಸಿದ್ಧರಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗವಿದೆ. ಅಂತಹ ದರ್ಶನ್ ವೀರಾಭಿಮಾನಿಯೊಬ್ಬರ ಬಗ್ಗೆ ಸಂಭಾಷಣೆಕಾರ ಮಾಸ್ತಿ ಹೇಳಿದ ವಿಚಾರ ವೈರಲ್ ಆಗ್ತಿದೆ.
'ಕಾಟೇರ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾಸ್ತಿ ಒಂದು ಘಟನೆಯನ್ನು ನೆನಪಿಸಿಕೊಂಡರು. ದರ್ಶನ್ ಮೇಲೆ ಅವರ ಅಭಿಮಾನಿಗಳ ಪ್ರೀತಿ, ಅಭಿಮಾನ ಏನು ಎಂಬುದನ್ನು ಸಾರಿ ಹೇಳಿದರು. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟಿಸಿದ್ದಾರೆ. 60ರ ದಶಕದ ಹಳ್ಳಿಯೊಂದರ ಕತೆ ಚಿತ್ರದಲ್ಲಿದೆ. ರಾಕ್ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡ್ತಿದ್ದು ಶೀಘ್ರದಲ್ಲೇ ಟೀಸರ್ ರಿಲೀಸ್ ಆಗುತ್ತಿದೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಭಾಷಣೆಕಾರ ಮಾಸ್ತಿ, "ಕಾಟೇರ ಸಿನಿಮಾ ಹಾಗೂ ದರ್ಶನ್ ಸರ್ ಬಗ್ಗೆ ಮಾತನಾಡುವ ಮುನ್ನ ಅವರ ಅಭಿಮಾನಿಗಳ ಬಗ್ಗೆ ಹೇಳಬೇಕು. ಈ ಸಿನಿಮಾದಲ್ಲಿ ಕೆಲಸ ಮಾಡ್ತೀದ್ದೀನಿ, ಸಂಭಾಷಣೆ ಬರೀತಿದ್ದೀನಿ ಅಂದಾಗ ಒಂದಷ್ಟು ಪರಿಚಯಗಳು ಜಾಸ್ತಿ ಆಯಿತು. ಒಮ್ಮೆ ಆಟೋಗಾಗಿ ಕಾಯುತ್ತಾ ನಿಂತಿದ್ದೆ. ನಾನು ಆಟೋ ಹತ್ತಿದೆ. ನನಗೆ ಗೊತ್ತಾಯ್ತು, ಆಟೋ ಚಾಲಕ ದರ್ಶನ್ ಸರ್ ಅಭಿಮಾನಿ, ಸೆಲೆಬ್ರೆಟಿ ಅಂತ"
"ಆಟೋದಲ್ಲಿ ಪ್ರಯಾಣಿಸುತ್ತಿದ್ದಂತೆ 50 ರೂ. ಮೀಟರ್ ಓಡಿತು. ಹೋಗಿ ಇಳಿದ ಮೇಲೆ ಹಣ ಕೊಡಲು ಹೋದಾಗ ಇಟ್ಕೊಳ್ಳಿ ಸರ್ ಬೇಡ ಅಂತ ಆತ ಹೇಳಿದ. ಇಲ್ಲಪ್ಪ ತಗೋ ಎಂದೆ, ಬಲವಂತ ಮಾಡಲಿ ಹೋದೆ. ಏನು ಬೇಡ ಸರ್, ನಮ್ ಬಾಸ್ಗೆ ಚಿತ್ರಕ್ಕೆ ಸಂಭಾಷಣೆ ಚೆನ್ನಾಗಿ ಬರೀರಿ ಎಂದು ಆತ ಹೇಳಿದ. ಇಲ್ಲ ಸರ್ ಇಟ್ಕೊಳ್ಳಿ, ನೀವು ಸಂಭಾಷಣೆ ಬರೀತ್ತಿದ್ದೀರಾ? ಪೆನ್ನು, ಪೇಪರ್ಗೆ ಬೇಕಾಗುತ್ತದೆ ಅಂದ್ರು. ಇದು ದರ್ಶನ್ ಸರ್ ಅಭಿಮಾನಿಗಳ ಪ್ರೀತಿ. ಅಂತಹ ಅಭಿಮಾನಿಗಳನ್ನು ರಂಜಿಸಿದರೆ ಅದಕ್ಕಿಂತ ದೊಡ್ಡ ಸಕ್ಸಸ್ ಮತ್ತೊಂದಿಲ್ಲ" ಎಂದು ಮಾಸ್ತಿ ಹೇಳಿದ್ದರು.
ಡಾ. ರಾಜ್ಕುಮಾರ್ ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ಇವತ್ತಿಗೂ ದೊಡ್ಮನೆ ಅಭಿಮಾನಿಗಳನ್ನು ಅದೇ ಪ್ರೀತಿಯಿಂದ ನೋಡುತ್ತಿದೆ. ಇನ್ನು ವಿಷ್ಣುವರ್ಧನ್, ಅಂಬರೀಶ್ ಹೀಗೆ ಎಲ್ಲರೂ ಅಭಿಮಾನಿಗಳ ಜೊತೆ ಆತ್ಮೀಯವಾಗಿ ಇರುತ್ತಿದ್ದರು. ನಿಜ ಹೇಳಬೇಕು ಅಂದರೆ ಭಾರತೀಯ ಚಿತ್ರರಂಗದ ಬೆಳವಣಿಗೆಗೆ ಅಭಿಮಾನಿಗಳ ಬೆಂಬಲ ಬಹಳ ದೊಡ್ಡದು.
ಚಿತ್ರರಂಗದಲ್ಲಿ ವಹಿವಾಟು ಹೆಚ್ಚಾಗಲೂ ಕೂಡ ಅಭಿಮಾನಿಗಳೇ ಕಾರಣ. ಅಕ್ಕಪಕ್ಕದ ಇಂಡಸ್ಟ್ರಿಯಲ್ಲೂ ಸಹ ಸ್ಟಾರ್ ನಟರು ತಮ್ಮ ಅಭಿಮಾನಿಗಳನ್ನು ಬೆಳೆಸುತ್ತಾ ಬರ್ತಿದ್ದಾರೆ. ಅಭಿಮಾನಿ ಸಂಘಗಳ ಮೂಲಕ ಸಾಕಷ್ಟು ಸಮಾಜಮುಖಿ ಕೆಲಸಗಳು ನಡೀತಿದೆ. ರಜನಿಕಾಂತ್, ಚಿರಂಜೀವಿ ರೀತಿಯ ಸ್ಟಾರ್ ನಟರ ನೂರಾರು ಅಭಿಮಾನಿ ಸಂಘಗಳು ಇವತ್ತಿಗೂ ಬಹಳ ಆಕ್ವೀವ್ ಆಗಿವೆ. ನಟ ದರ್ಶನ್ ಕೂಡ ಅಂತದ್ದೇ ವೀರಾಭಿಮಾನಿಗಳ ಬಳಗ ಸೃಷ್ಟಿಕೊಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟುಹಬ್ಬ ಎನ್ನುವಂತೆ ಆಚರಿಸುತ್ತಾರೆ. ಇನ್ನು ದರ್ಶನ್ ಸಿನಿಮಾ ರಿಲೀಸ್ ಆದರೆ ಅಂದೇ ಅವರಿಗೆ ದಸರಾ, ದೀಪಾವಳಿ.
ಆ ಘಟನೆ ಬಗ್ಗೆ ಫಿಲ್ಮೀಬೀಟ್ಗೆ ಪ್ರತಿಕ್ರಿಯಿಸಿದ ಸಂಭಾಷಣೆಕಾರ ಮಾಸ್ತಿ, "ಬಸವೇಶ್ವರ ನಗರದಲ್ಲಿ ಅಂದು ಆ ಘಟನೆ ನಡೀತು. ದರ್ಶನ್ ಸರ್ ಅಭಿಮಾನಿಗಳು ನಿಜಕ್ಕೂ ಗ್ರೇಟ್. ಅವರ ಮೇಲಿನ ಅಭಿಮಾನಿಗಳಿಗಿರುವ ಅಗಾಧ ಪ್ರೀತಿ ಬಣ್ಣಿಸೋಕೆ ಸಾಧ್ಯವಿಲ್ಲ" ಎಂದಿದ್ದಾರೆ. 'ಕಾಟೇರ' ಸಿನಿಮಾ ಹಾಗೂ ಸಂಭಾಷಣೆ ಬಗ್ಗೆ ಬಹಳ ಭರವಸೆಯಿಂದ ಇದ್ದಾರೆ.
'ಕಾಟೇರ' ಸಿನಿಮಾ ವಿಚಾರಕ್ಕೆ ಬಂದರೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. 3 ಹಾಡುಗಳು ಸೇರಿ 20 ದಿನ ಚಿತ್ರೀಕರಣ ಬಾಕಿಯಿದೆ. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಶ್ರೀನಿವಾಸ್ ಮೂರ್ತಿ, ಅವಿನಾಶ್, ಜಗಪತಿ ಬಾಬು ಹಾಗೂ ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











