ಒರಿಜಿನಲ್ ಸಿನಿಮಾವನ್ನು ಮೀರಿಸಿ ಕನ್ನಡದಲ್ಲಿ ಬ್ಲಾಕ್ಬಸ್ಟರ್ ಹಿಟ್ ಆದ 10 ರೀಮೆಕ್ ಸಿನಿಮಾಗಳು
ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಮೇಲೆ ರೀಮೆಕ್ ಸಿನಿಮಾಗಳ ಸಂಖ್ಯೆ ಕಮ್ಮಿ ಆಗಿದೆ. ಕೆಲ ವರ್ಷಗಳ ಹಿಂದೆ ಕನ್ನಡದಲ್ಲಿ ಸಾಕಷ್ಟು ರೀಮೆಕ್ ಸಿನಿಮಾಗಳು ನಿರ್ಮಾಣ ಆಗುತ್ತಿದ್ದವು. ಅದರಲ್ಲಿ ಕೆಲವು ನಮ್ಮದೇ ಸಿನಿಮಾಗಳು ಎನ್ನುವ ಮಟ್ಟಕ್ಕೆ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ರೀಮೆಕ್ ಸಿನಿಮಾಗಳೇ ಸಾಕಷ್ಟು ನಟರಿಗೆ ದೊಡ್ಡ ಬ್ರೇಕ್ ಕೊಟ್ಟಿರುವುದು ಇದೆ.
ನಟ ರವಿಚಂದ್ರನ್ ಸಾಕಷ್ಟು ರೀಮೆಕ್ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಆದರೆ ಕತೆ ರೀಮೆಕ್ ಮಾಡಿದರು, ಸ್ವಂತ ಟ್ಯೂನ್ಗಳನ್ನು ಮಾಡಿಸಿ ಆಲ್ಬಮ್, ಸಿನಿಮಾ ಹಿಟ್ ಮಾಡುತ್ತಿದ್ದರು. ಕೆಲವೊಮ್ಮೆ ಸಿನಿಮಾ ಕಥೆಯಲ್ಲಿ ಬದಲಾವಣೆ ಮಾಡಿಕೊಂಡು ರೀಮೆಕ್ ಮಾಡಿದವರು ಇದ್ದಾರೆ. ಎಷ್ಟೋ ಸಲ ಮೂಲ ಚಿತ್ರವನ್ನು ಮೀರಿಸುವಂತೆ ರೀಮೆಕ್ ಸಿನಿಮಾಗಳನ್ನು ಕನ್ನಡದಲ್ಲಿ ಸಕ್ಸಸ್ ಕಂಡಿವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಟನೆಯ 'ಯಜಮಾನ'.

ತಮಿಳಿನ 'ವಾನತ್ತೆಪೋಲ' ಚಿತ್ರವನ್ನು 23 ವರ್ಷಗಳ ಹಿಂದೆ ಕನ್ನಡಕ್ಕೆ ತರಲಾಗಿತ್ತು. ವಿಜಯ್ ಕಾಂತ್ ನಟನೆಯ ಈ ಸಿನಿಮಾ ತಮಿಳಿನಲ್ಲಿ ಹಿಟ್ ಆಗಿತ್ತು. ಆದರೆ ಕನ್ನಡದಲ್ಲಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿ ಎಲ್ಲರ ಹುಬ್ಬೇರಿಸಿತ್ತು. ಆರ್. ಶೇಷಾದ್ರಿ ಹಾಗೂ ರಾಧಾ ಭಾರತಿ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದರು. 4 ಜನ ಸಹೋದರರ ಅನುಬಂಧದ ಕತೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ವಿಷ್ಣು ಡಬಲ್ ರೋಲ್ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಚಿತ್ರದ ಹಾಡುಗಳನ್ನು ಇವತ್ತಿಗೂ ಕನ್ನಡ ಸಿನಿರಸಿಕರು ಮರೆತ್ತಿಲ್ಲ.
ಅದಾಗಲೇ ಮಲಯಾಳಂನಲ್ಲಿ ಬಂದು ಹೋಗಿದ್ದ 'ಮಣಿ ಚಿತ್ರತ್ತಾಳ್' ಕಥೆಯನ್ನು ಒಂದಷ್ಟು ಬದಲಾವಣೆ ಮಾಡಿ ಕನ್ನಡಕ್ಕೆ ತರಲಾಗಿತ್ತು. ವಿಷ್ಣುವರ್ಧನ್, ಸೌಂದರ್ಯ ನಟನೆಯ 'ಆಪ್ತಮಿತ್ರ' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಈ ಹಾರರ್ ಸಿನಿಮಾ ಸತತ ಒಂದು ವರ್ಷ ಪ್ರದರ್ಶನ ಕಂಡು ಧೂಳೆಬ್ಬಿಸಿತ್ತು. 'ಆಪ್ತಮಿತ್ರ' ಮುಂದೆ ತಮಿಳು, ಹಿಂದಿಯಲ್ಲಿ ರೀಮೆಕ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೇ ಚಿತ್ರ ಮುಂದೆ 'ಆಪ್ತರಕ್ಷಕ' ಚಿತ್ರಕ್ಕೂ ಪ್ರೇರಣೆಯಾಗಿತ್ತು. ಸಿನಿಮಾಗಳು ಸೋತು ಕಂಗೆಟ್ಟಿದ್ದ ನಿರ್ಮಾಪಕ ದ್ವಾರಕೀಶ್ಗೆ 'ಆಪ್ತಮಿತ್ರ' ಭಾರೀ ಲಾಭ ತಂದುಕೊಟ್ಟಿತ್ತು.
ಕಿಚ್ಚ ಸುದೀಪ್ ಕರಿಯರ್ಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ 'ಹುಚ್ಚ'. ತಮಿಳಿನಲ್ಲಿ ಚಿಯಾನ್ ವಿಕ್ರಂ ನಟಿಸಿದ್ದ 'ಸೇತು' ಸಿನಿಮಾ ಸಕ್ಸಸ್ ಕಂಡಿತ್ತು. ಆದರೆ 'ಹುಚ್ಚ' ಅದನ್ನು ಮೀರಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸುದೀಪ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಕಿಚ್ಚ ಎನ್ನುವ ಪಾತ್ರದಲ್ಲಿ ನಟಿಸಿದ್ದ ಸುದೀಪ್ ಮುಂದೆ ಆ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ಓಂ ಪ್ರಕಾಶ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಅದಾಗಲೇ 'ಮುಂಗಾರು ಮಳೆ' ಸಿನಿಮಾ ಮಾಡಿ ಗೆದ್ದಿದ್ದ ಗಣೇಶ್, ತಮಿಳಿನ 'ಕಾದಲ್' ರೀಮೆಕ್ನಲ್ಲಿ ನಟಿಸಿದ್ದರು. ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ' ಸಿನಿಮಾ ಬರೆದ ದಾಖಲೆಗಳು ಕಣ್ಣ ಮುಂದಿದೆ. ಆ ಸಿನಿಮಾ ನಟಿ ಅಮೂಲ್ಯ ಅವರಿಗೂ ದೊಡ್ಡ ಬ್ರೇಕ್ ಕೊಟ್ಟಿತ್ತು. ಹೊಸ ಟ್ಯೂನ್ಗಳನ್ನು ಹಾಕಿ ಸಂಗೀತ ನಿರ್ದೇಶಕ ಮನೋಮೂರ್ತಿ ಸಕ್ಸಸ್ ಕಂಡಿದ್ದರು. 'ಚೆಲುವಿನ ಚಿತ್ತಾರ' ಕನ್ನಡದ ಎವರ್ಗ್ರೀನ್ ಸಿನಿಮಾಗಳ ಲಿಸ್ಟ್ ಸೇರಿದೆ. ಈ ಸಿನಿಮಾದಿಂದ ಗಣೇಶ್ಗೆ ಗೋಲ್ಡನ್ ಸ್ಟಾರ್ ಬಿರುದು ಸಿಕ್ಕಿತ್ತು.
ತಮಿಳಿನಲ್ಲಿ 49 ವರ್ಷಗಳ ಹಿಂದೆ ಬಂದು ಹೋಗಿದ್ದ 'ರಕ್ತ ಕಣ್ಣೀರ್' ಚಿತ್ರವನ್ನು 2003ರಲ್ಲಿ ಉಪೇಂದ್ರ ರೀಮೆಕ್ ಮಾಡಿದ್ದರು. ಒಂದ್ಕಾಲದಲ್ಲಿ ಇದು ಸೂಪರ್ ಹಿಟ್ ನಾಟಕ ಆಗಿತ್ತು. ನಂತರ ಎಂ. ಆರ್ ರಾಧ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ಸಾಧು ಕೋಕಿಲ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಉಪೇಂದ್ರ ಹೀರೊ ಆಗಿ ನಟಿಸೋದು ಮಾತ್ರವಲ್ಲದೇ ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಮೋಹನನಾಗಿ ಉಪ್ಪಿ ನಟನೆಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಡೈಲಾಗ್ಗಳಂತೂ ಒಂದಕ್ಕಿಂತ ಒಂದು ಸೂಪರ್. ಕಾಂತ ಆಗಿ ರಮ್ಯಾಕೃಷ್ಣ ಚಿತ್ರದಲ್ಲಿ ನಟಿಸಿದ್ದರು. 2003ರಲ್ಲಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.
ದೊಡ್ಮನೆ ಬ್ಯಾನರ್ನಲ್ಲಿ ಸಾಮಾನ್ಯವಾಗಿ ರೀಮೆಕ್ ಸಿನಿಮಾಗಳನ್ನು ಮಾಡುತ್ತಿರಲಿಲ್ಲ. ಆದರೆ ತಮಿಳಿನ 'ನಾಡೋಡಿಗಳ್' ಚಿತ್ರವನ್ನು ಬಹಳ ಮೆಚ್ಚಿ ಪುನೀತ್ ರಾಜ್ಕುಮಾರ್ ಕನ್ನಡಕ್ಕೆ ತಂದಿದ್ದರು. ಕೆ. ಮಾದೇಶ್ ನಿರ್ದೇಶನದ ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಪಾರ್ವತಮ್ಮ ರಾಜ್ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದರು. ವಿ. ಹರಿಕೃಷ್ಣ ಸಂಗೀತ ಹಾಡುಗಳು ಸೂಪರ್ ಹಿಟ್ ಆಗಿತ್ತು.
ತೆಲುಗಿನ 'ಭದ್ರ' ಚಿತ್ರವನ್ನು ದರ್ಶನ್ 'ಗಜ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಬಾಕ್ಸಾಫೀಸ್ ಸುಲ್ತಾನ್ ಎನ್ನುವ ಬಿರುದು ದರ್ಶನ್ಗೆ ಸಿಕ್ಕಿತ್ತು. ಅದೇ ರೀತಿ ತೆಲುಗಿನ 'ಡಾರ್ಲಿಂಗ್' ಚಿತ್ರವನ್ನು 'ಬುಲ್ ಬುಲ್' ಹೆಸರಿನಲ್ಲಿ ಒಂದಷ್ಟು ಬದಲಾವಣೆ ಜೊತೆಗೆ ಕನ್ನಡಕ್ಕೆ ತರಲಾಗಿತ್ತು. ಈ ಸಿನಿಮಾ ಕೂಡ ಸಕ್ಸಸ್ ಕಂಡಿತ್ತು. ನಟಿ ರಚಿತಾ ರಾಮ್ಗೆ ಬ್ರೇಕ್ ಕೊಟ್ಟಿತ್ತು. ಒಂದರ ಹಿಂದೊಂದರಂತೆ ಸಿನಿಮಾಗಳು ಸೋತಾದ ದರ್ಶನ್ ಅವರಿಗೆ ಈ ಎರಡು ಸಿನಿಮಾಗಳು ಗೆಲುವಿನ ಟಾನಿಕ್ ನೀಡಿದ್ದು ಸುಳ್ಳಲ್ಲ.
ನಿಜ ಹೇಳಬೇಕು ಅಂದರೆ ರೀಮೆಕ್ ಸಿನಿಮಾ ಮಾಡಿ ಗೆಲ್ಲೋದು ಅಷ್ಟು ಸುಲಭ ಅಲ್ಲ. ಅದರಲ್ಲೂ ಕನ್ನಡ ಪ್ರೇಕ್ಷಕರನ್ನು ಒಪ್ಪಿಸೋದು ಕಷ್ಟದ ಮಾತು. ಆದರೆ ಕೆಲವೊಮ್ಮೆ ಈ ಹಾದಿನಲ್ಲಿ ಫಿಲ್ಮ್ ಮೇಕರ್ಸ್ ಗೆದ್ದಿದ್ದಾರೆ. ಯಶ್ ನಟನೆಯ 'ರಾಜಾಹುಲಿ' ಕೂಡ ತಮಿಳು ಸಿನಿಮಾ ರೀಮೆಕ್. ಆದರೆ ಕನ್ನಡದಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಸುದೀಪ್ ನಟನೆಯ 'ಮೈ ಆಟೋಗ್ರಾಫ್', ರವಿಚಂದ್ರನ್ ನಟನೆಯ 'ರಾಮಾಚಾರಿ', 'ಕನಸುಗಾರ' ಸಿನಿಮಾಗಳನ್ನು ಕೂಡ ಇದೇ ಸಾಲಿಗೆ ಸೇರಿಸಬಹುದು.


Click it and Unblock the Notifications











