ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದ ಯಶ್ 'ಸೀಕ್ರೆಟ್ ಆಫ್ ಸಕ್ಸಸ್'
Recommended Video
''ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಕಮ್ಮಿ. ಕನ್ನಡ ಚಿತ್ರಗಳು ನೂರು ಕೋಟಿ ಸೇರಲು ಸಾಧ್ಯವಿಲ್ಲ. ಕನ್ನಡ ಚಿತ್ರಗಳಿಗೆ ದೇಶದಾದ್ಯಂತ ಡಿಮ್ಯಾಂಡ್ ಇಲ್ಲ'' ಎಂದು ಗೊಣಗುತ್ತಿದ್ದ, ಸದಾ ಕೊರಗುತ್ತಿದ್ದ ಸ್ಯಾಂಡಲ್ ವುಡ್ ನಿರ್ಮಾಪಕರಿಗೆ ಕನ್ನಡ ಚಿತ್ರರಂಗದ 'ಅಸಲಿ' ಮಾರ್ಕೆಟ್ ನ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಪರಿಚಯ ಮಾಡಿದವರು ರಾಕಿಂಗ್ ಸ್ಟಾರ್ ಯಶ್.
'ಕಿರಾತಕ' ಚಿತ್ರದಿಂದ ನಿರ್ಮಾಪಕರ ಪಾಲಿಗೆ ಚಿನ್ನದ ಗಣಿ ಆಗಿರುವ ಯಶ್, ತಮ್ಮ ಲೇಟೆಸ್ಟ್ 'ಕೆ.ಜಿ.ಎಫ್' ವರೆಗೂ ಯಶಸ್ಸಿನ ರಾಯಭಾರಿ. ಗಾಂಧಿನಗರದ ಸದ್ಯ ಗೆಲ್ಲುವ ಕುದುರೆಯಾಗಿರುವ ಯಶ್ ಗಿಂದು ಜನ್ಮದಿನದ ಸಡಗರ.
ತಮ್ಮ ಹುಟ್ಟುಹಬ್ಬವನ್ನು ಯಶ್ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕೆಲವೇ ಕೆಲವು ವರ್ಷಗಳ ಹಿಂದೆಯಷ್ಟೇ ಸಾಮಾನ್ಯ ಹುಡುಗನಾಗಿ, ಅವಕಾಶಕ್ಕೋಸ್ಕರ ನಿರ್ಮಾಪಕರ ಮನೆಗೆ ಅಲಿಯುತ್ತಿದ್ದ ನವೀನ್ ಕುಮಾರ್ ಗೌಡ, ಇಂದು 'ಸ್ಯಾಂಡಲ್ ವುಡ್ ಸುಲ್ತಾನ್' ಆಗಿರುವುದರ ಹಿಂದೆ ಒಂದು ರೋಚಕ ಕಥೆ ಇದೆ.
ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ 'ಯಶ್', ಯಶಸ್ಸಿನ ಬೆನ್ನತ್ತಿದ್ದು ಹೇಗೆ.? ರಾಕಿ ಭಾಯ್ ಸೀಕ್ರೆಟ್ ಆಫ್ ಸಕ್ಸಸ್ ಏನು.? ಇಲ್ಲಿದೆ ನೋಡಿ...

ಖುಲಾಯಿಸಿದ ಯಶ್ ಅದೃಷ್ಟ
ಒಂದ್ಕಾಲದಲ್ಲಿ, 'ಒಂದು ಚಾನ್ಸ್ ಕೊಡಿ ಸಾರ್', ಅಂತ ಸೀರಿಯಲ್ ನಲ್ಲಿ ಅವಕಾಶಕ್ಕೋಸ್ಕರ ಎಲ್ಲರನ್ನ ಬೇಡುತ್ತಿದ್ದ 'ಯಶ್', 'ಜಂಭದ ಹುಡುಗಿ'ಯ ಕೃಪೆಯಿಂದ ಬೆಳ್ಳಿತೆರೆ ಮೇಲೆ ಎಂಟ್ರಿಕೊಟ್ಟೇಬಿಟ್ಟರು. ಅಲ್ಲಿಂದ ಶುರುವಾಗಿದ್ದೇ 'ಯಶ್' ಯಶಸ್ಸಿನ ನಾಗಲೋಟ. 'ನಂದಗೋಕುಲ'ದಲ್ಲಿ ಜೋಡಿಯಾಗಿದ್ದ ರಾಧಿಕಾ ಪಂಡಿತ್ ಜೊತೆ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟಿಸಿದ್ದ ಯಶ್, ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಬಾಚಿಕೊಂಡಿದರು. ಅಲ್ಲಿಂದ, ಯಶ್ ಅದೃಷ್ಟವೇ ಬದಲಾಗಿ ಹೋಯ್ತು.

'ಅಣ್ತಮ್ಮ' ಯಶ್
'ರಾಕಿ', 'ತಮಸ್ಸು', 'ಮೊದಲಾಸಲ', 'ಗೋಕುಲ', 'ರಾಜಧಾನಿ' ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅಷ್ಟೇನು ಹೆಸರು ಮಾಡದ ಯಶ್, 'ಕಿರಾತಕ' ಚಿತ್ರದಿಂದ ಏಕ್ದಂ ಸ್ಟಾರ್ ಆಗ್ಬಿಟ್ಟರು. ಮಂಡ್ಯ ಭಾಷೆಯಲ್ಲಿ 'ಅಣ್ತಮ್ಮ'ರನ್ನ ಸೆಳೆದ ಯಶ್ ಮತ್ತಷ್ಟು 'ಲಕ್ಕಿ'ಯಾಗಿದ್ದು ಲಕ್ಕಿ ಸ್ಟಾರ್ ರಮ್ಯಾ ಜೊತೆಯಾದ್ಮೇಲೆ..!

ಅಂಬಿ ಜೊತೆ ಯಶ್ 'ಡ್ರಾಮಾ'
'ಡ್ರಾಮಾ' ಚಿತ್ರದಿಂದ ಯೋಗರಾಜ್ ಭಟ್ ಕ್ಯಾಂಪ್ ಸೇರಿದ ಯಶ್, ಅಂಬಿ ಮಾಮನ ಅಚ್ಚು ಮೆಚ್ಚಿನ ನಟನಾದರು. ಅಲ್ಲಿಂದಲೇ ಗಾಂಧಿನಗರದಲ್ಲಿ ಯಶ್ 'ಗೂಗ್ಲಿ' ಬಾಲ್ ಹಾಕೋಕೆ ಶುರು ಹಚ್ಚಿಕೊಂಡರು. 'ಡ್ರಾಮಾ' ಚಿತ್ರದ ಸಣ್ಣ ಪಾತ್ರದಲ್ಲಿ ಅಂಬಿ ಕಾಣಿಸಿಕೊಂಡಿದ್ದಕ್ಕೆ ಚಿತ್ರಕ್ಕೆ ಅತಿ ಹೆಚ್ಚು ಹೈಪ್ ಸಿಕ್ತು. ಹಾಗೆ, 'ಡ್ರಾಮಾ' ಚಿತ್ರದಿಂದ ಯಶ್ ವೃತ್ತಿ ಬದುಕ್ಕಲ್ಲಿ ಮೊಟ್ಟ ಮೊದಲ ಬಾರಿಗೆ ಬಿಗ್ ಓಪನ್ನಿಂಗ್ ಕೂಡ ಸಿಕ್ತು. ಯಶ್ ಗೆ ಇಷ್ಟು ಸಾಕಾಗಿತ್ತು, ಯಶಸ್ಸಿನ ಫಾರ್ಮುಲಾವನ್ನ ಕಂಡುಹಿಡಿದುಕೊಳ್ಳುವುದಕ್ಕೆ!

ಶಂಕ್ರಣ್ಣ ಬಂದು ಬಿಟ್ಟರು.!
'ಅಂಬಿ' ಫಾರ್ಮುಲಾ ಸಕ್ಸಸ್ ಆಗ್ತಿದ್ದ ಹಾಗೆ, ಕರಾಟೆ ಕಿಂಗ್ ಶಂಕರ್ ನಾಗ್ ರನ್ನ ಯಶ್ ಹಿಡಿದುಕೊಂಡರು. 'ಗೂಗ್ಲಿ' ಚಿತ್ರದಲ್ಲಿ ಶಂಕ್ರಣ್ಣನ 'ಸಾಂಗ್ಲಿಯಾನ' ರೂಪದಲ್ಲಿ ಎಂಟ್ರಿಕೊಟ್ಟ ಯಶ್ ಚಪ್ಪಾಳೆ ಗಿಟ್ಟಿಸಿಕೊಂಡರು. ತೆರೆಮೇಲೆ 'ಶಂಕರಣ್ಣ'ನನ್ನ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗೋಕೆ ಇಷ್ಟು ಸಾಕಲ್ವಾ.?!

ಬೆಂಕಿ ಡೈಲಾಗ್ಸ್.!
''ಅಣ್ತಮ್ಮ, ಇಲ್ಲಿ ಯಾರು ಹೀರೋಗಳನ್ನ ಹುಟ್ಹಾಕಲ್ಲ. ನಮಗೆ ನಾವೇ ಹೀರೋ ಆಗ್ಬೇಕು'', ''ಹೀರೋಗಳು ಯಾವತ್ತಿದ್ರೂ ಲೇಟಾಗಿ, ಲೇಟೆಸ್ಟ್ ಆಗಿ ಎಂಟ್ರಿಕೊಡ್ಬೇಕು'', ''ಕಾಲೆಳೆಯೋರು ಯಾವತ್ತಿದ್ರೂ ಕಾಲು ಕೆಳಗಿರ್ತಾರೆ, ಪ್ರೀತಿ ಅಭಿಮಾನ ಇಟ್ಟಿರುವ ಜನರು ಹೃದಯದಲ್ಲಿರುತ್ತಾರೆ'', ಹೀಗೆ ಬೆಂಕಿಯುಂಡೆಯಂತಹ ಡೈಲಾಗ್ ಗಳಿಂದ ಆಡಿಕೊಂಡವರ ಬಾಯಿಗೆ ಬೀಗ ಜಡಿದ ಯಶ್, 'ನಮಗೆ ನಾವೇ ಹೀರೋ ಆಗ್ಬೇಕು' ಅಂತ ಎದೆತಟ್ಟಿಕೊಂಡಿದ್ದು ಮಾತ್ರವಲ್ಲ. ಬಾಕ್ಸಾಫೀಸ್ ನಲ್ಲೂ ''ನಾನೇ ಹೀರೋ'' ಅಂತ 'ರಾಜಾಹುಲಿ' ಮೂಲಕ ಪ್ರೂವ್ ಮಾಡಿದರು.

ಡಾ.ರಾಜ್ ಅಭಿಮಾನಿ
ಇನ್ನೂ 'ಗಜಕೇಸರಿ' ಸಿನಿಮಾ, ರಾಜಣ್ಣನ ಅಭಿಮಾನಿಗಳನ್ನ ಆಕರ್ಷಿಸಿದ್ದು, ಚಿತ್ರದಲ್ಲಿ ಯಶ್ ಅಣ್ಣಾವ್ರ ಅಭಿಮಾನಿಯಾಗಿದ್ದಕ್ಕೆ! 'ಗಂಧದ ಗುಡಿ' ಚಿತ್ರದಲ್ಲಿದ್ದ ಥೇಟ್ ಡಾ.ರಾಜ್ ರಂತೆ ಕಾಣಿಸಿಕೊಂಡಿದ್ದ ಯಶ್, ಚಿತ್ರಮಂದಿರದಲ್ಲಿ ಎಲ್ಲರ ಶಿಳ್ಳೆ ಗಿಟ್ಟಿಸಿದ್ದು ಸುಳ್ಳಲ್ಲ. 'ಅಣ್ಣಾವ್ರ'ರನ್ನ ಅನುಕರಣೆ ಕೂಡ ಮಾಡಿದ್ದ ಯಶ್, ಚಿತ್ರದ ನಂತ್ರ ದೊಡ್ಮನೆ ಕುಟುಂಬಕ್ಕೂ ಹತ್ತಿರವಾದರು.

ಡಾ.ವಿಷ್ಣು ಅಭಿಮಾನಿ
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಯಶ್, ಸಾಹಸಸಿಂಹ ಡಾ.ವಿಷ್ಟುವರ್ಧನ್ ಭಕ್ತ. 'ರಾಮಾಚಾರಿ' ಅನ್ನುವ ಹೆಸರಿಟ್ಟುಕೊಂಡು, ವಿಷ್ಣು ಟಾಟ್ಯೂವನ್ನ ಎದೆಮೇಲೆ ಅಚ್ಚಾಗಿಸಿಕೊಂಡು, ಸಾಹಸಸಿಂಹ ನಂತೆ 'ಹಾವಿನ ದ್ವೇಷ' ಹಾಡಲ್ಲಿ ರೌದ್ರಾವತಾರ ಮೆರೆದಿರುವ ಯಶ್ ಗೆ 'ಅಭಿನವ ಭಾರ್ಗವ'ನ ಅಭಿಮಾನಿಗಳು ಫಿದಾ ಆದರು. ತೆರೆಮೇಲೆ ಕಣ್ಮರೆಯಾಗಿದ್ದ ಸಾಹಸಸಿಂಹನನ್ನ ಚಿತ್ರದಲ್ಲಿ 'ರಾಮಾಚಾರಿ'ಯಾಗಿ ವಿಜೃಂಭಿಸಿರುವುದಕ್ಕೆ 'ವಿಷ್ಣು ದಾದಾ' ಬಳಗ ಚಿತ್ರಮಂದಿರಕ್ಕೆ ಪದೇ ಪದೇ ಭೇಟಿಕೊಟ್ಟರು.

ಯಶ್ ಸೀಕ್ರೆಟ್ ಆಫ್ ಸಕ್ಸಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್... ರೆಬೆಲ್ ಸ್ಟಾರ್ ಅಂಬರೀಷ್ ಗೆ, ಕಿಚ್ಚ ಸುದೀಪ್... ಸಾಹಸ ಸಿಂಹ ವಿಷ್ಣುವರ್ಧನ್ ಗೆ ಮಾತ್ರ ಬ್ರ್ಯಾಂಡ್ ಆದ್ಹಾಗೆ ಆಗದೆ, ಅಂಬರೀಷ್, ಶಂಕರ್ ನಾಗ್, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್... ಹೀಗೆ ಸಾಲಾಗಿ ಎಲ್ಲರಿಗೂ ತಮ್ಮ ಚಿತ್ರದ ಮೂಲಕ ಸಲಾಂ ಹೊಡೆದಿರುವ ಯಶ್, 'ಸೀನಿಯರ್'ಗಳ ಆಶೀರ್ವಾದದಿಂದ, ಎಲ್ಲಾ ಅಭಿಮಾನಿಗಳ ಪ್ರೀತಿಯಿಂದ ಮುನ್ನುಗುತ್ತಿದ್ದಾರೆ. ಇದೇ ಅವರ ಸೀಕ್ರೆಟ್ ಆಫ್ ಸಕ್ಸಸ್.

'ಕೆ.ಜಿ.ಎಫ್' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್.!
ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತಿಕೊಂಡು ಬಂದ ಯಶ್ ಇದೀಗ 'ಕೆ.ಜಿ.ಎಫ್' ಮೂಲಕ ಮತ್ತೊಂದು ಲೆವೆಲ್ ಗೆ ಹೋಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 'ಕೆ.ಜಿ.ಎಫ್' ಚಿತ್ರವನ್ನ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಿ, ಕನ್ನಡ ಚಿತ್ರರಂಗದ ಮಾರ್ಕೆಟ್ ಬೌಂಡರಿಯನ್ನು ವಿಸ್ತರಣೆ ಮಾಡುವಲ್ಲಿ ಯಶ್ ನಿಜಕ್ಕೂ ಯಶಸ್ವಿ ಆಗಿದ್ದಾರೆ. ತಮ್ಮ ಬೆಳವಣಿಗೆಯ ಜೊತೆಗೆ ಕನ್ನಡ ಚಿತ್ರರಂಗದ ಬೆಳವಣಿಗೆಗೂ ಯಶ್ ಕಾರಣಕರ್ತರಾಗಿದ್ದಾರೆ. ಕನ್ನಡ ಚಿತ್ರಗಳಿಗೆ ಕಲೆಕ್ಷನ್ ಕಮ್ಮಿ ಅಂತ ಕೊರಗುತ್ತಿದ್ದವರಿಗೆ 'ಕೆ.ಜಿ.ಎಫ್' ಮೂಲಕ ಸುಮಾರು 250 ಕೋಟಿ ರೂಪಾಯಿ ಬಾಚಿ, ಯಶ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಯಶಸ್ಸಿನ ಏಣಿಯ ಎತ್ತರೆತ್ತರಕ್ಕೆ ಏರುತ್ತಿರಲಿ...
'ಗಾಡ್ ಫಾದರ್' ಇಲ್ಲದೆ ಗಾಂಧಿನಗರಕ್ಕೆ ಬಂದ ಯಶ್, ಎಲ್ಲಾ ದಿಗ್ಗಜರನ್ನು ಆರಾಧಿಸಿ, ಎಲ್ಲರ ಆಶೀರ್ವಾದದಿಂದ ಯಶಸ್ಸು ಪಡೆದಿದ್ದಾರೆ. ಯಶ್ ಹೀಗೆ ಯಶಸ್ಸಿನ ಏಣಿಯ ಎತ್ತರೆತ್ತರಕ್ಕೆ ಏರುತ್ತಿರಲಿ ಅನ್ನೋದೇ ಅಭಿಮಾನಿಗಳ ಆಶಯ.


Click it and Unblock the Notifications











