ಯಶ್- ಅಣ್ಣಾವ್ರ ಮುಖಾಮುಖಿ ಹೇಗಿತ್ತು? ರಾಕಿನ ರಸಿಕರ ರಾಜ ಚಿತ್ರರಂಗಕ್ಕೆ ಸ್ವಾಗತಿಸಿದ್ರಾ?
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಕೆಲಸಗಳ ನಿಮಿತ್ತ ಯಶ್ ವಿದೇಶದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಸ್ವಂತ ಪರಿಶ್ರಮದಿಂದ ಸೂಪರ್ ಸ್ಟಾರ್ ಆಗಿ ಬೆಳೆದವರು ಯಶ್.
ಮೈಸೂರಿನ ನವೀನ್ಕುಮಾರ್ ಗೌಡ ಮುಂದೆ ನ್ಯಾಷನಲ್ ಸ್ಟಾರ್ ಯಶ್ ಆಗಿ ಬೆಳೆದಿದ್ದೇ ರೋಚಕ. ಇವತ್ತು ರಾಕಿ ಕಾಲ್ಶೀಟ್ಗಾಗಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಕಾಯುತ್ತಿದ್ದಾರೆ. ತಮ್ಮದೇ ಯಶಸ್ಸಿನ ಹಾದಿ ಸೃಷ್ಟಿಸಿಕೊಂಡು ನಡೆದು ಬಂದವರು ಯಶ್. ರಂಗಭೂಮಿಯಲ್ಲಿ ನಟನೆಯ ಪಟ್ಟುಗಳನ್ನು ಕಲಿತ ನವೀನ್ ಕುಮಾರ್ ಬಳಿಕ ಕಿರುತೆರೆ ಪ್ರವೇಶಿದರು. ಅಲ್ಲಿಂದ ಮುಂದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಯಶ್ ಹೀರೊ ಆಗಬೇಕು ಎನ್ನವ ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಂಗಳೂರಿನ ಆರಂಭದ ದಿನಗಳಲ್ಲಿ ಉಳಿದುಕೊಳ್ಳಲು ಜಾಗವಿಲ್ಲದೇ ಮೆಜೆಸ್ಟಿಕ್ ಬಸ್ಸ್ಟಾಪ್ನಲ್ಲಿ ರಾತ್ರಿ ಕಳೆದ ದಿನಗಳು ಇವೆ. ಇದೆಲ್ಲದರ ನಡುವೆ ಯಶ್ ಒಮ್ಮೆ ಡಾ. ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಭೇಟಿ ಎನ್ನುವುದಕ್ಕಿಂತ ಅದು ಬರೀ ಮುಖಾಮುಖಿ.
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಯಶ್ ಈ ವಿಚಾರವನ್ನು ಹಂಚಿಕೊಂಡಿದ್ದರು. ನವೀನ್ ಕುಮಾರ್ ಬೆನಕ ತಂಡದ್ದಲ್ಲಿದ್ದ ಸಮಯದಲ್ಲಿ ಖ್ಯಾತ ನಿರ್ದೇಶಕ ನಾಗಭರಣ ಗರಡಿಯಲ್ಲಿ ಪಳಗಿದ್ದರು. ನಟನಾಗಬೇಕು ಎಂದು ಬೆಂಗಳೂರಿಗೆ ಬಂದ ಆರಂಭದಲ್ಲಿ ನಾಗಾಭರಣ ಅವರ ಮಗಳ ಮದುವೆಗೆ ಯಶ್ ಹೋಗಿದ್ದರು. ಅಲ್ಲಿ ಬೆನಕ ಕಿಟ್ಟಿ, ನವೀನ್ ಕುಮಾರ್ನ ನೋಡಿ "ಯಾಕೋ ಹೀಗೆಲ್ಲಾ ಬೆಂಗಳೂರು ಅಂತ ಬಂದ್ರೆ ಏನೂ ಮಾಡೋಕೆ ಆಗೊಲ್ಲ. ಊರಿಗೆ ಹೋಗು ನಾಲ್ಕೈದು ವರ್ಷ ಬಿಟ್ಟು ಬಾ ಎನ್ನುತ್ತಿದ್ದರಂತೆ. ಆದರೆ ಯಶ್ ಮಾತ್ರ ಯಾಕೆ ಆಗೊಲ್ಲ ಎನ್ನುತ್ತಿದ್ದರಂತೆ. ಕೂಡಲೇ ಅಲ್ಲಿ ಅಣ್ಣಾವ್ರು ಬಂದಿದ್ದರಂತೆ.
ಇದ್ದಕ್ಕಿದಂತೆ ತಿರುಗಿ ನೋಡಿದರೆ ಅಲ್ಲಿ ಡಾ. ರಾಜ್ಕುಮಾರ್ ಬಂದು ನಿಂತಿದ್ದರಂತೆ. ಸದಾ ಎಲ್ಲರನ್ನು ನೋಡಿ ಕೈ ಜೋಡಿಸಿ ನಮಸ್ಕರಿಸುತ್ತಿದ್ದ ಅಣ್ಣಾವ್ರು ಅಂದು ನವೀನ್ ಕುಮಾರ್ ಕಡೆಗೂ ನೋಡಿದ್ದರಂತೆ. ನವೀನ್ ಕೂಡ ಅಣ್ಣಾವ್ರನ್ನು ನೋಡಿ ಮೈರೋಮಾಂಚನಗೊಂಡು ಕೈ ಜೋಡಿಸಿ ನಮಸ್ಕರಿಸಿದ್ದರಂತೆ. ಡಾ. ರಾಜ್ ಅತ್ತ ಹೋಗುತ್ತಿದ್ದಂತೆ ಬೆನಕ ಕಿಟ್ಟಿ ಅವರು "ಏನೋ ನಿನ್ನ ಅದೃಷ್ಟ. ಎಷ್ಟೋ ವರ್ಷ ಇಲ್ಲಿದ್ದವರೇ ಅಣ್ಣಾವ್ರನ್ನು ನೋಡೋಕೆ ಆಗುವುದಿಲ್ಲ. ಬಂದಕೂಡಲೇ ಅವ್ರು ನಿನಗೆ ಸ್ವಾಗತ ಕೋರಿದಂತೆ ಇತ್ತಲ್ಲ, ಇಂಡಸ್ಟ್ರಿಗೆ ಅಂದ್ರು. ಅದ್ಯಾವ ಗಳಿಗೆಯಲ್ಲಿ ಅವ್ರು ಹಾಗೆ ಹೇಳಿದ್ರೋ, ನಿಜವಾಗಿಯೂ ಅಣ್ಣಾವ್ರ ಆಶೀರ್ವಾದ ಇತ್ತು ಎನಿಸುತ್ತೆ. ಇವತ್ತು ಇಲ್ಲಿದ್ದೀನಿ" ಎಂದು ಯಶ್ ವಿವರಿಸಿದ್ದರು.
'ಜಂಭದ ಹುಡ್ಗಿ' ಚಿತ್ರದಲ್ಲಿ ನಟಿಸುವ ಮುನ್ನ ಯಶ್ 'ಉತ್ತರಾಯಣ', 'ಸಿಲ್ಲಿ-ಲಲ್ಲಿ', 'ನಂದಗೋಕುಲ', 'ಪ್ರೀತಿ ಇಲ್ಲದ ಮೇಲೆ', 'ಮಳೆಬಿಲ್ಲು', 'ಶಿವ' ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದರು. ಅದೇ ಸಮಯದಲ್ಲಿ ನಟಿ ರಾಧಿಕಾ ಪಂಡಿತ್ ಪರಿಚಯವೂ ಆಗಿತ್ತು. 2008ರಲ್ಲಿ 'ಮೊಗ್ಗಿನ ಮನಸು' ಚಿತ್ರದಲ್ಲಿ ಹೀರೊ ಆಗಿ ಕಾಣಿಸಿಕೊಂಡರು. ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ.

'ಕಿರಾತಕ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ ಹೀಗೆ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟರು. ಮಿ. ಅಂಡ್ ಮಿಸ್ಸೆಸ್ ರಾಮಾಚಾರಿ ಬ್ಲಾಕ್ಬಸ್ಟರ್ ಹಿಟ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇನ್ನು 'KGF' ಸರಣಿ ಸಿನಿಮಾಗಳಲ್ಲಿ ರಾಕಿ ಭಾಯ್ ಆಗಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಗೊತ್ತೇಯಿದೆ. ಸದ್ಯ 'ಟಾಕ್ಸಿಕ್' ಎನ್ನುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಮಾಡಿದ್ದಾರೆ.


Click it and Unblock the Notifications











