2020: ಕನ್ನಡ ಚಿತ್ರರಂಗದಲ್ಲಿ ವಿವಾದಗಳಿಂದ ಸುದ್ದಿಯಾದ ನಟ-ನಟಿಯರು
ಇತರೆ ಕೆಲವು ಚಿತ್ರರಂಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಕಡಿಮೆಯೆಂದೇ ಹೇಳಬೇಕು. ಪರಸ್ಪರ ಸಹಕಾರದ ಅಧಾರದಲ್ಲಿ ಕನ್ನಡ ಸಿನಿರಂಗ ಸಾಗುತ್ತಿದೆ. ಇದಕ್ಕೆ ಹಿರಿಯರು ಹಾಕಿಕೊಟ್ಟ ಮಾದರಿಯೇ ಪ್ರಮುಖ ಕಾರಣ.
ಆದರೆ ವರ್ಷ 2020 ಕನ್ನಡ ಸಿನಿರಂಗದ ಪಾಲಿಗೆ ಉತ್ತಮ ವರ್ಷವಾಗಿರಲಿಲ್ಲ. ಕೊರೊನಾ ಲಾಕ್ಡೌನ್ ನಿಂದಾಗಿ ಚಿತ್ರೀಕರಣ, ಚಿತ್ರಮಂದಿರಗಳು ಬಂದ್ ಆಗಿ ಹಲವಾರು ಸಿನಿಮಾ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂತು.
ಲಾಕ್ಡೌನ್ ಸಮಸ್ಯೆಯಿಂದ ಚಿತ್ರರಂಗ ನಲುಗುತ್ತಿರುವಾಗಲೇ ಗುಮ್ಮನಂತೆ ಬಂದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಕನ್ನಡ ಚಿತ್ರರಂಗವನ್ನು ಮುಜುಗರಕ್ಕೆ ಈಡು ಮಾಡಿತು. ಡ್ರಗ್ಸ್ ಪ್ರಕರಣ, ಡಬ್ಬಿಂಗ್ ಇತರೆ ಕೆಲವು ಗುಮ್ಮಗಳು ಕನ್ನಡ ಚಿತ್ರರಂಗವನ್ನು ಕಾಡಿದವು. ಈ ವರ್ಷ ವಿವಾದಕ್ಕೆ ಈಡಾದ ಕೆಲವು ನಟ-ನಟಿಯರ ಪಟ್ಟಿ ಇಲ್ಲಿದೆ.

ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ
ಕೊರೊನಾ ಲಾಕ್ಡೌನ್ನ ಪ್ರಾರಂಭಿಕ ಹಂತದಲ್ಲಿ ನಟಿ ಶರ್ಮಿಳಾ ಮಾಂಡ್ರೆ ತೀವ್ರ ಸುದ್ದಿಗೆ ಬಂದರು. ಅವರು ಪ್ರಯಾಣಿಸುತ್ತಿದ್ದರು ಎನ್ನಲಾದ ಐಶಾರಾಮಿ ಕಾರು ಏಪ್ರಿಲ್ 4 ರ ನಸುಕಿನ ಸಮಯದಲ್ಲಿ ಮೌಂಟ್ ಕಾರ್ಮಲ್ ಮುಂಭಾಗ ಅಪಘಾತಕ್ಕೆ ಈಡಾಗಿತ್ತು. ಕಾರಿನಲ್ಲಿದ್ದವರೆಲ್ಲರೂ ಅಲ್ಲಿಂದ ಕೂಡಲೇ ಜಾಗ ಖಾಲಿ ಮಾಡಿ, ಆಸ್ಪತ್ರೆಯಲ್ಲಿ ಬೇರೆ ಹೆಸರಿನೊಂದಿಗೆ ಚಿಕಿತ್ಸೆ ಪಡೆದಿದ್ದರು. ಕಾರಿನಲ್ಲಿ ಕೊರೊನಾ ಪಾಸ್ ಒಂದು ಸಹ ಸಿಕ್ಕಿತ್ತು. ಇವೆಲ್ಲವೂ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಅಂತಿಮವಾಗಿ ಈ ಅಪಘಾತ ಪ್ರಕರಣದಲ್ಲಿ ಡಾನ್ ಥಾಮಸ್ ಅನ್ನು ಆರೋಪಿಯನ್ನಾಗಿಸಿ ಚಾರ್ಜ್ ಶೀಟ್ ಸಲ್ಲಿಸಲಾಯಿತು. ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್ ದೊರಕಿತು. ನಂತರ ಡ್ರಗ್ಸ್ ಪ್ರಕರಣದಲ್ಲೂ ಶರ್ಮಿಳಾ ಹೆಸರು ಕೇಳಿಬಂತು, ಆದರೆ ಅದು ಕೇವಲ ಗಾಳಿಸುದ್ದಿಯಾಗಿ ಮಾತ್ರವೇ ಉಳಿಯಿತು.

ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ದ್ವಿವೇದಿ ಬಂಧನ
ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಕೊಳ್ಳುವ ಮೂಲಕ ಸುದ್ದಿಗೆ ಬಂದರು. ರಾಜ್ಯದ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿಯನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 3 ರಂದು ಬಂಧಿಸಿದರು. ಅಂದಿನಿಂದ ಈವರೆಗೆ ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಟಿ ರಾಗಿಣಿ ಡ್ರಗ್ಸ್ ಮಾರಾಟಕ್ಕೆ ಸಹಕಾರ ನೀಡುತ್ತಿದ್ದರು ಎಂಬ ಆರೋಪ ಇದೆ. ಪ್ರಕರಣದ ತನಿಖೆ ಚಾಲ್ತಿಯಲ್ಲಿದೆ.

ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಬಂಧನ
ರಾಗಿಣಿ ದ್ವಿವೇದಿ ಬಳಿಕ ನಟಿ ಸಂಜನಾ ಗಲ್ರಾನಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದರು. ಸಂಜನಾ ಗೆ ಡ್ರಗ್ಸ್ ಜಾಲದೊಂದಿಗೆ ನಂಟಿದೆ ಎಂದು ಆರೋಪಿಸಲಾಗಿತ್ತು. ಸಂಜನಾ ಶ್ರೀಲಂಕಾದ ಕಸಿನೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರಗಳು, ವಿಡಿಯೋಗಳು ಹರಿದಾಡಿದವು. ಸಂಜನಾ, ಮುಸ್ಲಿಂ ವೈದ್ಯರೊಬ್ಬರನ್ನು ಮದುವೆಯಾಗಿ, ಮತಾಂತರವಾಗಿದ್ದಾರೆ ಎಂಬೆಲ್ಲಾ ಆರೋಪಗಳು ಕೇಳಿಬಂದವು. ಡಿಸೆಂಬರ್ 11 ರಂದು ಸಂಜನಾಗೆ ಜಾಮೀನು ದೊರೆತಿದೆ. ಡ್ರಗ್ಸ್ ಪ್ರಕರಣದ ತನಿಖೆ ಜಾರಿಯಲ್ಲಿಯೇ ಇದೆ.

ವಿವಾದದ ಕೇಂದ್ರವಾಗಿದ್ದ ಇಂದ್ರಜಿತ್ ಲಂಕೇಶ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ವರ್ಷ ಸಾಕಷ್ಟು ಸುದ್ದಿಯಲ್ಲಿದ್ದರು. 'ಚಿರಂಜೀವಿ ಸರ್ಜಾ ಅವರಿಗೆ ಡ್ರಗ್ಸ್ ಸೇವನೆಯ ಚಟವಿತ್ತು' ಎಂಬರ್ಥದ ಹೇಳಿಕೆ ನೀಡಿದ್ದರು. ನಂತರ ಹೇಳಿಕೆಗೆ ಕ್ಷಮೆ ಕೋರಿದರಾದರೂ. 'ಕನ್ನಡ ಸಿನಿಮಾ ರಂಗದಲ್ಲಿ ಹಲವಾರು ನಟ-ನಟಿಯರು ಡ್ರಗ್ಸ್ ವ್ಯಸನಿಗಳು' ಎಂದು ಹೇಳಿದ್ದರು, ಇದು ಭಾರಿ ವಿವಾದಕ್ಕೆ ಕಾರಣವಾಯಿತು. ಆ ನಂತರ ಡ್ರಗ್ಸ್ ಪ್ರಕರಣ ತನಿಖೆ ತೀವ್ರ ಗೊಳ್ಳಲು ಇಂದ್ರಜಿತ್ ಲಂಕೇಶ್ ಪ್ರಮುಖ ಕಾರಣರೆನಿಸಿದರು, ತಾವು ಸಿಸಿಬಿಗೆ ಮಾಹಿತಿ ನೀಡುವುದಾಗಿಯೂ ಹೇಳಿ, ಅಂತೆಯೇ ಸಿಸಿಬಿಯ ವಿಚಾರಣೆಯನ್ನೂ ಸಹ ಎದುರಿಸಿದರು ನಿರ್ದೇಶಕ ಇಂದ್ರಜಿತ್ ಲಂಕೇಶ್.

ಹಲವು ನಟ-ನಟಿಯರ ಪಾಲಿಗೆ ವಿಲನ್ ಆದ ಪ್ರಶಾಂತ್ ಸಂಬರ್ಗಿ
ಸಿನಿಮಾ ರಂಗಕ್ಕೆ ನೇರ ಸಂಬಂಧ ಇಲ್ಲದೇ ಇದ್ದರೂ ಸಹ, ಕೆಲವು ಹಿಂದಿ ಸಿನಿಮಾಗಳ ವಿತರಣೆ ಮಾಡಿದ್ದ ಪ್ರಶಾಂತ್ ಸಂಬರ್ಗಿ ಈ ವರ್ಷ ಕನ್ನಡ ಸಿನಿಮಾರಂಗದ ವಿವಾದಗಳ ಕೇಂದ್ರ ವ್ಯಕ್ತಿ. ಡ್ರಗ್ಸ್ ಪ್ರಕರಣ ಹಾಗೂ ಇತರೆ ಕೆಲವು ವಿಷಯಗಳ ಬಗ್ಗೆ ಪ್ರಶಾಂತ್ ಸಂಬರ್ಗಿ ಹಲವು ಹೇಳಿಕೆಗಳನ್ನು ನೀಡಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವಾಗಿಯೂ ಪುಂಖಾನು-ಪುಂಖವಾಗಿ ಹೇಳಿಕೆಗಳನ್ನು ನೀಡಿದ್ದರು ಪ್ರಶಾಂತ್ ಸಂಬರ್ಗಿ. ಸಂಜನಾ-ರಾಗಿಣಿ ವಿರುದ್ಧವೂ ಸಹ ಸಾಕಷ್ಟು ನಿಂದನಕಾರಿ ಹೇಳಿಕೆಗಳನ್ನು ನೀಡಿದ್ದರು.

ವಿಚಾರಣೆಗೆ ಹಾಜರಾಗಿದ್ದ ದಿಗಂತ್ ಮತ್ತು ಐಂದ್ರಿತಾ ರೇ
ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂತು. ಇಬ್ಬರೂ ಸಹ ಸಿಸಿಬಿ ವಿಚಾರಣೆ ಎದುರಿಸಿದರು. ದಿಗಂತ್ ಅವರು ಸಿಸಿಬಿ ಮೇಲೆ ಸ್ವಾಮೀಜಿ ಅವರಿಂದ ಒತ್ತಡ ಹೇರಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂತು. ವಿಚಾರಣೆ ಬಳಿಕ ದಿಗಂತ್-ಐಂದ್ರಿತಾ ರೇ ಬಹುತೇಕ ಕ್ಲೀನ್ ಚಿಟ್ ಪಡೆದುಕೊಂಡರು.

ವಿಚಾರಣೆಗೆ ಹಾಜರಾಗಿದ್ದ ಲೂಸ್ ಮಾದ ಯೋಗಿ
ಲೂಸ್ ಮಾದಾ ಯೋಗಿ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದರು. ವಿಚಾರಣೆ ನಂತರ ಸುದ್ದಿಗೋಷ್ಠಿ ನಡೆಸಿದ್ದ ಯೋಗಿ, 'ನಾನು ಈ ವರೆಗೆ ಡ್ರಗ್ಸ್ ಸೇವಿಸಿಲ್ಲ. ಕುಡಿತ, ಸಿಗರೇಟಿನ ಚಟವಿತ್ತು, ಆದರೆ ಸಂದರ್ಶನವೊಂದರಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿದ್ದ ಕಾರಣದಿಂದ ನನ್ನ ಮೇಲೆ ಅನುಮಾನಗೊಂಡು ವಿಚಾರಣೆಗೆ ಕರೆದಿದ್ದರು ಅಷ್ಟೆ' ಎಂದು ಹೇಳಿದರು.

ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಹೆಸರು
ನಿರೂಪಕಿ ಅನುಶ್ರೀ ಹೆಸರು ಸಹ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂತು. ಮಂಗಳೂರಿನಲ್ಲಿ ಡ್ರಗ್ಸ್ ಜೊತೆ ಬಂಧಿತನಾದ ನಟ, ನೃತ್ಯ ನಿರ್ದೇಶಕನೊಬ್ಬ ಅನುಶ್ರೀ ಹೆಸರು ಹೇಳಿದ್ದ. ಅನುಶ್ರೀಗೆ ಮಂಗಳೂರು ಪೊಲೀಸರು ನೊಟೀಸ್ ನೀಡಿ ವಿಚಾರಣೆ ನಡೆಸಿದರು. ಅನುಶ್ರೀಯನ್ನು ಬಂಧಿಸಲಾಗುತ್ತದೆ ಎನ್ನಲಾಗಿತ್ತು ಆದರೆ ಹಾಗಾಗಲಿಲ್ಲ. ನಟಿ ಅನುಶ್ರೀ ಅವರು ಹಲವು ರಾಜಕೀಯ ನಾಯಕರಿಂದ ಪೊಲೀಸರ ಮೇಲೆ ಪ್ರಭಾವ ಬೀರಿಸಿದ್ದಾರೆ ಎನ್ನಲಾಯಿತು. ಆದರೆ ಎಲ್ಲಾ ಆರೋಪಗಳನ್ನು ಅನುಶ್ರೀ ತಳ್ಳಿ ಹಾಕಿದರು.

ವಿವಾದಕ್ಕೆ ಕಾರಣವಾದ ಚಂದನ್ ಶೆಟ್ಟಿ ಹಾಡು
ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದ ರ್ಯಾಪ್ ಹಾಡೊಂದು ವಿವಾದಕ್ಕೆ ಕಾರಣವಾಯಿತು. ಕೋಲುಮಂಡೆ ಹಾಡಿನ ರೀಮಿಕ್ಸ್ ಹಾಡನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಹಾಡಿನಲ್ಲಿ ಅವರೂ ನಟಿಸಿದ್ದರು. ಆದರೆ ಆ ಹಾಡಿನಿಂದ ಶಿವಶರಣೆ ಶಂಕಮ್ಮ ಹಾಗೂ ಮಲೆ ಮಾದಪ್ಪನಿಗೆ ಅಪಚಾರವಾಗಿದೆ ಎಂದು ಆರೋಪಿಸಿ ಚಂದನ್ ಶೆಟ್ಟಿ ವಿರುದ್ಧ ದೂರು ಸಹ ನೀಡಲಾಯಿತು. ಅಂತಿಮವಾಗಿ ಚಂದನ್ ಶೆಟ್ಟಿ ಕ್ಷಮೆ ಕೋರಿ, ಹಾಡನ್ನು ಹಿಂಪಡೆದು, ಹಲವು ತಿದ್ದುಪಡಿಗಳೊಟ್ಟಿಗೆ, ವಿಡಿಯೋ ಡಿಲೀಟ್ ಮಾಡಿ ಮರು ಬಿಡುಗಡೆ ಮಾಡಿದರು.

ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಕಿರಿಕ್
ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಜನಾ ಸಹ ಸುದ್ದಿಗೆ ಬಂದರು. ಆಕೆ ಮತ್ತು ಅವರ ಕೆಲವು ಗೆಳತಿಯರು ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ, ಗುಂಪೊಂದು ಅವರ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆಯಿತು. ಕವಿತಾ ರೆಡ್ಡಿ ಎಂಬುವರು ಸಂಯುಕ್ತಾ ಅವರ ಗೆಳತಿ ಮೇಲೆ ಹಲ್ಲೆ ಮಾಡಿದರು. ಯುವಕರ ಗುಂಪೊಂದು ಸಂಯುಕ್ತಾ ವಿರುದ್ಧ ಘೋಷಣೆಯನ್ನು ಕೂಗಿ, ದಾಂಧಲೆ ನಡೆಸಿದರು. ಸಂಯುಕ್ತಾ ಹಾಗೂ ಗೆಳತಿಯರನ್ನು ಪಾರ್ಕ್ನಲ್ಲಿ ಕೂಡಿಹಾಕಲಾಗಿತ್ತು, ಇದೆಲ್ಲವನ್ನೂ ಇನ್ಸ್ಟಾಗ್ರಾಂ ನಲ್ಲಿ ಲೈ ಮಾಡಿದ್ದರು ಸಂಯುಕ್ತಾ. ಆ ನಂತರ ಕವಿತಾ ರೆಡ್ಡಿ ಸಂಯುಕ್ತಾ ಹಾಗೂ ಗೆಳೆಯರಿಗೆ ಬಹಿರಂಗ ಕ್ಷಮೆ ಕೇಳಿದರು.

ಜಗ್ಗೇಶ್ ಮತ್ತು ಪ್ಯಾನ್ ಇಂಡಿಯಾ ಸಿನಿಮಾ
ಕೆಲವು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಡಬ್ಬಿಂಗ್ ವಿವಾದ ಈ ವರ್ಷವೂ ಮುಂದುವರೆಯಿತು. ಆದರೆ ಈ ಬಾರಿ ನಟ ಜಗ್ಗೇಶ್ ಡಬ್ಬಿಂಗ್ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಸಹ ವಿರೋಧಿಸಿದ್ದು, ಕೆಲವು ನಟರ ಅಭಿಮಾನಿಗಳ ಕಣ್ಣು ಕೆಂಪಗೆ ಮಾಡಿತು. ಆದರೆ ಜಗ್ಗೇಶ್ ಅವರು ತಮ್ಮ ಹೇಳಿಕೆಗೆ ಬದ್ಧವಾಗಿಯೇ ಇದ್ದು, 'ಪ್ಯಾನ್ ಇಂಡಿಯಾ' ಸಿನಿಮಾಗಳನ್ನು ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ನಟರ ಅಭಿಮಾನಿಗಳ ಪೋಸ್ಟ್ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ತೆಲುಗು ನಟನಿಂದ ವಿಷ್ಣುವರ್ಧನ್ ಬಗ್ಗೆ ಅವಹೇಳನ
ವರ್ಷದ ಅಂತ್ಯದ ವೇಳೆಗೆ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಎಂಬಾತ ಸಂದರ್ಶನವೊಂದರಲ್ಲಿ ಕೆಟ್ಟದಾಗಿ ಅವಹೇಳನ ಮಾಡಿದ್ದು ಭಾರಿ ವಿವಾದ ಹುಟ್ಟುಹಾಕಿತು. ಕನ್ನಡಿಗರು ಆ ನಟನ ಮೇಲೆ ತೀವ್ರ ಆಕ್ರೋಶ ಹೊರಹಾಕಿದರು. ಕನ್ನಡದ ಸ್ಟಾರ್ ನಟರೂ ಸಹ ವಿಜಯ್ ರಂಗರಾಜು ವಿರುದ್ಧ ಸಿಟ್ಟು ಹೊರಹಾಕಿದರು, ಅಂತಿಮವಾಗಿ ವಿಜಯ್ ರಂಗರಾಜು, ಕಣ್ಣೀರು ಸುರಿಸುತ್ತಾ, ಮಂಡಿಯೂರಿ ಕನ್ನಡಿಗರ ಕ್ಷಮೆ ಕೇಳಿದರು.


Click it and Unblock the Notifications











