Year Ender 2024: ಈ ವರ್ಷ ಜೈಲು ಕಂಬಿ ಎಣಿಸಿದ ತಾರೆಯರು ಇವರು
ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಈ ವರ್ಷವನ್ನು ಒಮ್ಮೆ ಹಿಂತಿರುಗಿ ನೋಡಬೇಕು. ಚಿತ್ರರಂಗದ ಮಟ್ಟಿಗೆ ಈ ವರ್ಷ ಭಾರೀ ಚರ್ಚೆಯಲ್ಲಿತ್ತು. ಸಿನಿಮಾ ತಾರೆಯರು ಗಂಭೀರ ಪ್ರಕರಣಗಳಲ್ಲಿ ಸಿಲುಕಿ ಸೆರೆವಾಸವನ್ನು ಅನುಭವಿಸುವಂತಾಯಿತು. ಒಂದು ದಿನದಿಂದ 5 ತಿಂಗಳವರೆಗೆ ಜೈಲುವಾಸ ಅನುಭವಿಸಿದವರು ಇದ್ದಾರೆ.
ಕಾನೂನು ಎಲ್ಲರಿಗೂ ಒಂದೇ. ಅದು ಬಡವನಾಗಲಿ, ಶ್ರೀಮಂತನಾಗಲಿ, ಸಿನಿಮಾ ತಾರೆಯೇ ಆಗಿರಲಿ, ದೇಶದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ತಾರೆಯರು ಸಾಮಾನ್ಯವಾಗಿ ಬಹಳ ಪ್ರಭಾವಿಗಳಾಗಿರುತ್ತಾರೆ. ಆದರೆ ಯಾವುದಾದರೂ ಪ್ರಕರಣದಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದರೆ ಕಥೆ ಮುಗೀತು.

ಈ ವರ್ಷ ತಾರೆಯರು ಮೈಮೇಲೆ ಎಳೆದುಕೊಂಡ ವಿವಾದಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಕರ್ನಾಟಕದ ರೇಣುಕಾಸ್ವಾಮಿ ಹ* ಪ್ರಕರಣ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಗಿದ್ದು ಗೊತ್ತೇಯಿದೆ. ಇನ್ನು ತೆಲುಗು ನಟ ಅಲ್ಲು ಅರ್ಜುನ್ ಕ್ರಿಮಿನಲ್ ಪ್ರಕರಣದಲ್ಲಿ ಜೈಲಿಗೆ ಹೋಗುವಂತಾಗಿದೆ. ಇನ್ನು ಖ್ಯಾತ ಡ್ಯಾನ್ಸ್ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಕೂಡ ಜೈಲು ಕಂಬಿ ಎಣಿಸಿದರು.
141 ದಿನ ಜೈಲಿನಲ್ಲಿ ದರ್ಶನ್
ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ನಟ ದರ್ಶನ್ ಜೂನ್ 11ರಂದು ಬಂಧನವಾಗಿದ್ದರು. ಬಳಿಕ ವಿಚಾರಣೆ ಎದುರಿಸಿದರು. ಪ್ರಕರಣದಲ್ಲಿ ಎ2 ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರುವಂತಾಯಿತು. ಅಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಗೊತ್ತಾದ ಬಳಿಕ ಬಳ್ಳಾರಿ ಜೈಲಿಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಕೊನೆಗೆ ಆರೋಗ್ಯ ಸಮಸ್ತೆ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದು ದರ್ಶನ್ ಹೊರ ಬಂದರು. ಒಟ್ಟು 141 ದಿನ ದರ್ಶನ್ ಜೈಲಿನಲ್ಲಿ ಕಳೆದರು.

ನಟಿ ಪವಿತ್ರಾ ಗೌಡ ಸೆರೆವಾಸ
ಅಂದಹಾಗೆ ರೇಣುಕಾಸ್ವಾಮಿ ಪ್ರಕರಣದಲ್ಲೇ ನಟಿ ಪವಿತ್ರಾ ಗೌಡ ಕೂಡ ದರ್ಶನ್ ಜೊತೆ ಜೈಲು ಸೇರುವಂತಾಗಿತ್ತು. ಪವಿತ್ರಾಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು. ಅದು ದರ್ಶನ್ಗೆ ಗೊತ್ತಾಗಿ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬುದ್ಧಿಕಲಿಸಲು ಮುಂದಾಗಿದ್ದರು. ಆದ ಆತನ ಪ್ರಾಣವೇ ಹೋಗಿತ್ತು. 179 ದಿನಗಳ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆಕೆ ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದರು.
ಜಾನಿ ಮಾಸ್ಟರ್ಗೆ ಜೈಲು ಶಿಕ್ಷೆ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಜೈಲು ಸೇರಿದ್ದರು. ತಮ್ಮ ತಂಡದಲ್ಲೇ ಇದ್ದ ಯುವತಿಯ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತ ಯುವತಿ ದೂರಿದ್ದರು. ಈ ಸಂಬಂಧ ಡ್ಯಾನ್ಸ್ ಮಾಸ್ಟರ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಜೈಲು ಸೇರಿದ್ದ ಜಾನಿ ಮಾಸ್ಟರ್ ಬಳಿಕ ಷರತ್ತುಬದ್ಧ ಜಾಮೀನು ಪಡೆದು ಹೊರಬಂದರು.
ಅಲ್ಲು ಅರ್ಜುನ್ಗೂ ಸಂಕಷ್ಟ
ತೆಲುಗು ನಟ ಅಲ್ಲು ಅರ್ಜುನ್ ಇತ್ತೀಚೆಗೆ ಜೈಲು ಸೇರುವಂತಾಗಿತ್ತು ಮಧ್ಯಂತರ ಜಾಮೀನು ಪಡೆದರೂ ಕೂಡ ಒಂದು ರಾತ್ರಿ ಚಂಚಲಗೂಡ್ ಜೈಲಿನಲ್ಲಿರುವಂತಾಯಿತು. 'ಪುಷ್ಪ'-2 ಸಿನಿಮಾ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಪುತ್ರ ಆಸ್ಪತ್ರೆಯಲ್ಲಿದ್ದಾನೆ. ಅಲ್ಲು ಅರ್ಜುನ್ ಸರಿಯಾದ ಭದ್ರತೆ ಇಲ್ಲದೇ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದೇ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.
ಕಂಬಿ ಎಣಿಸಿದ ನಟಿ ಕಸ್ತೂರಿ
ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನಟಿ ಕಸ್ತೂರಿ ಶಂಕರ್ ಕೂಡ ಸಂಕಷ್ಟ ಎದುರಿಸಿದ್ದರು. ಅವಹೇಳನಕಾರಿ ಹೇಳಿಕೆ ಸಂಬಂಧ ಹೈದರಾಬ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬಳಿಕ ಚೆನ್ನೈಗೆ ಆಕೆಯನ್ನು ಕರೆತರಲಾಗಿತ್ತು. ವಿಚಾರಣಾಧೀನ ಕೈದಿಯಾಗಿ ಕಸ್ತೂರಿ ಬಳಿಕ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದರು.


Click it and Unblock the Notifications











