ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಎಂಧಿರನ್ ಎತ್ತಂಗಡಿ
ನಾಡಿನಾದ್ಯಂತ ಇಂದು (ನ.1) ಸಡಗರ, ಸಂಭ್ರಮದಿಂದ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಬೆಂಗಳೂರಿನ ಸುಲ್ತಾನ್ ಪಾಳ್ಯದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಮಾತ್ರ ತಮಿಳು ಚಿತ್ರ ರಾಜಾರೋಷವಾಗಿ ಪ್ರದರ್ಶನ ಕಾಣುತ್ತಿತ್ತು. ಈ ಸುದ್ದಿ ಕರವೇ ಕಿವಿಗೆ ಬಿದ್ದಿದ್ದೆ ತಡ ಕರವೇ ಕಾರ್ಯಕರ್ತರು (ಪ್ರವೀಣ್ ಶೆಟ್ಟಿ ಬಳಗ)ಪುಷ್ಪಾಂಜಲಿ ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಘಟನೆ ಇಂದು ನಡೆದಿದೆ.
ಅನ್ಯಭಾಷಾ ಚಿತ್ರಗಳು ಕನ್ನಡ ರಾಜ್ಯೋತ್ಸವದಂದೂ ರಾಜಧಾನಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಪ್ರದರ್ಶನ ಕಾಣುತ್ತಿರುವುದು ಹಲವು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿದೆ. ರಜನಿಕಾಂತ್ ಎಂಬ ಕಾರಣಕ್ಕೆ 'ಎಂಧಿರನ್' ಚಿತ್ರಕ್ಕೆ ಯಾರು ವಿರೋಧಿಸುವುದಿಲ್ಲ ಎಂಬ ಅಸಡ್ಡೆಯ ಕಾರಣವೋ ಏನೋ ಚಿತ್ರಮಂದಿರದ ಮಾಲೀಕರು ಕ್ಯಾರೆ ಎನ್ನದೆ ತಮಿಳು ಚಿತ್ರಕ್ಕೆ ಜೈ ಎಂದಿದ್ದರು.
ಪುಷ್ಪಾಂಜಲಿ ಚಿತ್ರಮಂದಿರದ ಮೇಲೆ ದಾಳಿ ನಡೆಸಿದ ಕರವೇ ಕಾರ್ಯಕರ್ತರು , ಬಳಿಕ ತಮಿಳು ಚಿತ್ರಪ್ರದರ್ಶನವನ್ನು ಖಂಡಿಸಿ ಪ್ರತಿಭಟಿಸಿದರು. ಪ್ರತಿಭಟನೆಗೆ ಮಣಿದ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಈಗ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ 'ಡೆಡ್ಲಿ 2' ಕನ್ನಡ ಚಿತ್ರ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











