ಧರ್ಮಸಿಂಗ್ ಭರವಸೆ, ರಾಜ್ ನೇತೃತ್ವ ದ ಉಪವಾಸ ಸತ್ಯಾಗ್ರಹ ರದ್ದು
ಬೆಂಗಳೂರು : ಮೂರು ವಾರಗಳ ಒಪ್ಪಂದವನ್ನು ಉಲ್ಲಂಘಿಸಿ ಕನ್ನಡೇತರ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಎದುರು ಇಂದಿನಿಂದ (ಡಿ.1) ಕೈಗೊಳ್ಳಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು ಕನ್ನಡ ಚಿತ್ರೋದ್ಯಮ ಕೈಬಿಟ್ಟಿದೆ.
ಚಿತ್ರೋದ್ಯಮದ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ನೀಡಿದ ಭರವಸೆಯ ಮೇರೆಗೆ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಗಿದೆ. ಆದರೆ ಚಿತ್ರೋದ್ಯಮದ ಬಂದ್ ಮುಂದುವರಿದಿದೆ ಎಂದು ನಿರ್ಮಾಪಕರ ವಲಯ ತಿಳಿಸಿದೆ. ಎಸ್.ವಿ. ರಾಜೇಂದ್ರಸಿಂಗ್ ಬಾಬು, ಶಿವರಾಜ್ಕುಮಾರ್, ರಾಘವೇಂದ್ರ, ಬಸಂತಕುಮಾರ್ ಪಾಟೀಲ್ ಮುಂತಾದವರು ಮಂಗಳವಾರ ರಾತ್ರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಶ್ವಾಸನೆ ದೊರೆತಿದೆ.
ರಾಜ್ ನೇತೃತ್ವದಲ್ಲಿನ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಕೂಡ ಮುಖ್ಯಮಂತ್ರಿ ಧರ್ಮಸಿಂಗ್ ಚಿತ್ರೋದ್ಯಮಕ್ಕೆ ಮನವಿ ಮಾಡಿಕೊಂಡಿದ್ದರು.
ಈ ನಡುವೆ ಚಿತ್ರೋದ್ಯಮದ ಬಿಕ್ಕಟ್ಟನ್ನು ತಿಳಿಗೊಳಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀವ್ರ ಪ್ರಯತ್ನಗೊಳಿಸಿದ್ದು , ರಾಜೀಸೂತ್ರವೊಂದನ್ನು ರಚಿಸಿದೆ. ಮೂರು ವಾರಗಳ ಬದಲಿಗೆ ಎರಡು ವಾರಗಳ ನಿಷೇಧಕ್ಕೆ ವಾಣಿಜ್ಯಮಂಡಳಿ ಸಿದ್ಧಪಡಿಸಿರುವ ಸೂತ್ರವನ್ನು ನಿರ್ಮಾಪಕರ ವಲಯ ಕೂಡ ಒಪ್ಪಿಕೊಂಡಿದೆ ಎನ್ನಲಾಗಿದೆ. ಒಪ್ಪಂದ ಉಲ್ಲಂಘಿಸಿರುವ ಚಿತ್ರಮಂದಿರಗಳನ್ನು ಮಂಡಳಿಯಿಂದ ಕಿತ್ತೊಗೆಯಲು ಹಾಗೂ ಮುಂದಿನ ದಿನಗಳಲ್ಲಿ ಈ ಚಿತ್ರಮಂದಿರಗಳಿಗೆ ಯಾವುದೇ ಚಿತ್ರ ನೀಡದಿರಲು ಮಂಡಳಿ ನಿರ್ಧರಿಸಿದೆ.
ವರನಟ ರಾಜ್ಕುಮಾರ್ ನೇತೃತ್ವದಲ್ಲಿ ವೀರ್ ಝಾರಾ ಚಿತ್ರ ಪ್ರದರ್ಶಿಸುತ್ತಿರುವ ಕಾವೇರಿ ಚಿತ್ರಮಂದಿರದೆದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಯಬೇಕಿತ್ತು .
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications