ರಾಜಾನಂದ್ ಮನೆ ಮೇಲೆ ಕಲ್ಲು ಮಳೆ
ಅಭಿಮಾನ ಹುಚ್ಚಾದಾಗ ಹೀಗಾಗುತ್ತೆ- ಮೈಸೂರಿನ ಹಿರಿಯ ನಟ ರಾಜಾನಂದ್ಗೆ ಮೊದಲೇ ಹುಷಾರಿಲ್ಲ. ಅಂಥಾದ್ದರಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಅಂತ ಹೇಳಿಕೊಂಡ ಕೆಲವು ಕಿಡಿಗೇಡಿಗಳು ಕಳೆದ ಕೆಲವು ದಿನಗಳಿಂದ ಇವರ ಮನೆಯ ಮೇಲೆ ಕಲ್ಲು ತೂರಿ, ಗೋಳು ಹೊಯ್ದುಕೊಳ್ಳುತ್ತಿದ್ದಾರೆ.
ಪತ್ರಿಕೆಯಾಂದರಲ್ಲಿ ರಾಜಾನಂದ್ ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ತಮ್ಮ ಮತ್ತು ವಿಷ್ಣುವರ್ಧನ್ ನಡುವೆ ವೈಮನಸ್ಸು ಇತ್ತು ಎಂದು ರಾಜಾನಂದ್ ನೇರವಾಗಿ ಹೇಳಿದ್ದರು. ಅಭಿಮಾನಿ ಬಂಧುಗಳಿಗೆ ಅಷ್ಟೇ ಸಾಕು. ತುಡುಗು ಬುದ್ಧಿಯ ಹುಡುಗರು ರಾಜಾನಂದ್ ಮನೆಯ ಮೇಲೆ ಕಲ್ಲಿನ ಮಳೆಗರೆಯಲು ಶುರುವಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಮನೆಯ ಫೋನ್ ರಿಂಗುಟ್ಟಿದರೆ ರಾಜಾನಂದ್ ಬೀಪಿ ತೀರಾ ಏರುತ್ತದೆ. ಯಾಕೆಂದರೆ, ಬರುತ್ತಿರುವ ಬಹುತೇಕ ಕರೆಗಳು ಜೀವ ಬೆದರಿಕೆ ಒಡ್ಡುತ್ತಿವೆ.
ಮೊದಲೇ ಅನಾರೋಗ್ಯದಿಂದ ನರಳುತ್ತಿರುವ ನನ್ನನ್ನು ಹೀಗೆ ಚುಚ್ಚಿ ಚುಚ್ಚಿ ಕೊಲ್ಲುತ್ತಿದ್ದಾರೆ. ಇದು ನ್ಯಾಯವೇ ಅಂತ ದುಃಖ ತೋಡಿಕೊಂಡಿರುವ ರಾಜಾನಂದ್, ತಮ್ಮ ಹಾಗೂ ವಿಷ್ಣುವರ್ಧನ್ ನಡುವೆ ದ್ವೇಷ ಇದೆ ಅಂತ ನಾನು ಹೇಳೇ ಇಲ್ಲ. ಇದ್ದಿದ್ದು ವೈಮನಸ್ಸು. ನಾನೂ ಕೂಡ ಅವರ ಅಭಿಮಾನಿಯಾಗಿದ್ದವನು. ಹಾಸಿಗೆ ಹಿಡಿದಾಗಿನಿಂದ ಒಂದು ಸಲ ಅವರನ್ನು ನೋಡಬೇಕು ಅಂತ ಆಸೆ ಇಟ್ಟುಕೊಂಡಿರುವವನು. ಯಾವಾಗ ಅವರನ್ನು ನೋಡುವೆನೋ ಎಂದು ತವಕಿಸುತ್ತಿರುವವನು. ಅಂಥಾದರಲ್ಲಿ ನನ್ನನ್ನು ಅಪಾರ್ಥ ಮಾಡಿಕೊಂಡು ಜನ ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಅಂತ ರಾಜಾನಂದ್ ಅಲವತ್ತುಕೊಳ್ಳುತ್ತಾರೆ.
‘ಹೃದಯವಂತ’ ವಿಷ್ಣು ಹೃದಯ ಯಾಕೋ ರಾಜಾನಂದ್ ವಿಷಯದಲ್ಲಿ ಇನ್ನೂ ಕರಗಿಲ್ಲ. ಅದು ಬೇಗ ಕರಗಿ, ಹುಚ್ಚು ಅಭಿಮಾನಿಗಳ ಆವುಟಕ್ಕೆ ಪೂರ್ಣವಿರಾಮ ಹಾಕಲಿ ಅನ್ನೋದು ದಟ್ಸ್ಕನ್ನಡ ಹಾರೈಕೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











