ಮಾರಿ ಕಣ್ಣು ಹೋರಿ ಮ್ಯಾಲೆ, ತಾಯಿ ಕಣ್ಣು ಹಣದ್ ಮ್ಯಾಲೆ!
ತಮ್ಮ ಮಕ್ಕಳನ್ನು ಅತ್ಯಂತ ಜೋಪಾನವಾಗಿ ಶೂಟಿಂಗ್ ಸೆಟ್ಗೆ ಕರೆದುಕೊಂಡು ಹೋಗಿ ಯಾವುದೇ ಸಭ್ಯತೆ ಮೀರದಂತೆ ಅಭಿನಯಿಸಿದ ನಂತರ ಅಷ್ಟೇ ಜೋಪಾನವಾಗಿ ಕರೆದುಕೊಂಡು ವಾಪಸ್ ಬರುವ ಜಮಾನಾ ಎಂದೋ ಹೋಗಿದೆ
ಕೋಳಿ ಚಿನ್ನದ ಮೊಟ್ಟೆ ಇಡುವವರೆಗೆ ಚಿನ್ನದಂಥ ಕೋಳಿಯೇ. ಚಿನ್ನದ ಮೊಟ್ಟೆಯಿಂದ ಜೇಬನ್ನು ಹೇಗೆ ಭರ್ತಿ ಮಾಡಿಕೊಳ್ಳಬೇಕೆಂದು ಮಾಲೀಕನಿಗೆ ಖಂಡಿತ ಗೊತ್ತಿರುತ್ತದೆ. ಆದರೆ, ಚಿನ್ನದ ದುರಾಸೆಗೆ ಬಿದ್ದು ಕೋಳಿಯನ್ನೇ ದಾಳವಾಗಿ ಬಳಸಲು ಪ್ರಾರಂಭಿಸಿದರೆ? ಒಂದು ಕೋಳಿಯೇ ನಾಶವಾಗುತ್ತದೆ ಅಥವ ಕೋಳಿಯನ್ನೇ ಆತ ನಾಶ ಮಾಡುತ್ತಾನೆ.
ಚಿತ್ರರಂಗದಲ್ಲಿ ಇದು ಅಕ್ಷರಶಃ ಸತ್ಯ. ಯೌವ್ವನ ತುಂಬಿರುವಾಗಲೇ ತಮ್ಮ ಕರುಳಕುಡಿಯ ರೇಟನ್ನು ಯದ್ವಾತದ್ವಾ ಏರಿಸಿ ಹಣ ಹೇಗೆ ಬಾಚಿಕೊಳ್ಳಬೇಕೆಂಬ ತಂತ್ರ ಅನೇಕ ಪಾಲಕರು ರೂಪಿಸಿಕೊಂಡಿರುತ್ತಾರೆ.
ತಮ್ಮ ಮಕ್ಕಳನ್ನು ಅತ್ಯಂತ ಜೋಪಾನವಾಗಿ ಶೂಟಿಂಗ್ ಸೆಟ್ಗೆ ಕರೆದುಕೊಂಡು ಹೋಗಿ ಯಾವುದೇ ಸಭ್ಯತೆ ಮೀರದಂತೆ ಅಭಿನಯಿಸಿದ ನಂತರ ಅಷ್ಟೇ ಜೋಪಾನವಾಗಿ ಕರೆದುಕೊಂಡು ವಾಪಸ್ ಬರುವ ಜಮಾನಾ ಎಂದೋ ಹೋಗಿದೆ ಅಥವ ಕಡಿಮೆಯಾಗಿದೆ. ಇದು ಕಾಂಪಿಟೀಷನ್ ಕಾಲ ಸ್ವಲ್ಪ ಎಕ್ಸ್ಪೋಸ್ ಮಾಡಿದರೂ ಏನು ತಪ್ಪು ಅಂತ ತಿರುಗಿ ಪ್ರಶ್ನೆ ಎಸೆಯುವ ಅಮ್ಮಂದಿರೇ ಎಲ್ಲೆಂದರಲ್ಲಿ ಸಿಗುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಜ್ವಲಂತ ಉದಾಹರಣೆಗಳೇ ಎಲ್ಲೆಂದರಲ್ಲಿ ಸಿಗುತ್ತವೆ. ರಾಧಿಕಾ, ಸುಮನ್ ರಂಗನಾಥ್, ಮೀರಾ ಜಾಸ್ಮಿನ್, ಶ್ರುತಿ, ಸುಧಾರಾಣಿ, ಮಾಲಾಶ್ರೀ ಮುಂತಾದವರೆಲ್ಲ ಅಪ್ಪಅಮ್ಮಂದಿರೆಲ್ಲ ಹೂಡಿದ ದಾಳಗಳೇ. ಎಕ್ಸ್ಪೋಸಿಂಗ್ಗೆ ಕುಮ್ಮಕ್ಕು ನೀಡದಿದ್ದರೂ ಅವರ ನಟನೆಯ ಪರ್ವಕಾಲದಲ್ಲಿ ರೇಟನ್ನು ಯದ್ವಾತದ್ವಾ ಏರಿಸಿ ಕೆಲವರ ಕರಿಯರನ್ನೇ ಹಾಳುಗೆಡವಿದ್ದಾರೆ.
ಮೀರಾ ಜಾಸ್ಮಿನ್ ಉದಾಹರಣೆಯನ್ನೇ ತೆಗೆದುಕೊಂಡರೆ ಅವರ ತಾಯಿ ಮಾಡಿದ ಹಣದಾಸೆಗೆ ತಮ್ಮ ಕರಿಯರನ್ನೇ ಹಾಳು ಮಾಡಿಕೊಳ್ಳಬಾರದೆಂಬ ಜಾಣ್ಮೆಯಿಂದ ತಾಯಿಯಿಂದಲೇ ದೂರವಾಗಿ ತನ್ನ ಚಿತ್ರಜೀವನವನ್ನು ರೂಪಿಸಿಕೊಳ್ಳಬೇಕಾಯಿತು.
ಇದು ಒಂದು ಬಗೆಯದಾದರೆ. ತಮ್ಮ ಕರುಳಕುಡಿಯನ್ನು ದಾಳ ಮಾಡುವುದು ಮಾತ್ರವಲ್ಲ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಅತಿಯಾಗಿ ಮೈದೋರುವಂತೆ ಒತ್ತಾಯಿಸುವ, ಪ್ರತಿಯೊಂದು ಭಂಗಿಗೂ ಒಂದೊಂದು ರೇಟನ್ನು ಫಿಕ್ಸ್ ಮಾಡುವ ಮಹಾತಾಯಿಯರದು ಇನ್ನೊಂದು ಬಗೆ. ಇತ್ತೀಚೆಗೆ ಧಣಿ ಕನ್ನಡ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ನಟಿಸಿದ ನಟಿ ವಿನುತಾ ತನ್ನ ತಾಯಿಯ ದುರಾಸೆಗೆ ಮೈಮಾರಿಕೊಳ್ಳಲು ಹೋಗಿ ಪೊಲೀಸರ ಅತಿಥಿಯಾದ ಚಿತ್ರ ಕಣ್ಣಮುಂದೇ ಇದೆ.
ಕನ್ನಡ ಚಿತ್ರರಂಗದಲ್ಲಿ ಒಂದಾನೊಂದು ಕಾಲದಲ್ಲಿ ಪಡ್ಡೆಹುಡುಗರ ಮೈಬಿಸಿಯಾಗುವಂತೆ ನರ್ತಿಸಿದ್ದ ಕ್ಯಾಬರೆ ನರ್ತಕಿ ಅನುರಾಧಾ ತನ್ನ ಮಗಳು ಅಭಿನಯಶ್ರೀಯನ್ನು ಹಣದಾಸೆಗೆ ಬೇಕುಬೇಡದಂದೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವರದಿ ಬಂದಿವೆ. ಕರಿಯ ಚಿತ್ರದಲ್ಲಿ ದರ್ಶನ್ ಜೊತೆ ಮಾತಾಡು ಸಾಕು ಮೌನ ಬಿಸಾಕು ಎಂದು ಹಾಡಿ ನಲಿದಿದ್ದ ಅಭಿನಯಶ್ರೀ ಈಗ ಅಮ್ಮನಿಗೆ ನೀನು ಮಾಡ್ತಿರೋದು ಸಾಕು ಎಂದು ಪ್ರಲಾಪಿಸುವಂತೆ ಆಗಿದೆ.
ಆ ಅಂಟೆ ಅಲಾಪುರಂ ಎಂಬ ಮಾದಕ ಹಾಡಿಗೆ ಹುಚ್ಚೆದ್ದು ಕುಣಿದಾಡುವಂತೆ ನರ್ತಿಸಿದ ಈ ಚೆಲುವಿಗೆ ಅಮ್ಮನ ನೆರಳು ಸಾಕು ಬೇಕಾಗಿದೆ. ಮಗಳನ್ನು ಶೂಟಿಂಗ್ ಸ್ಥಳಗಳಲ್ಲೆಲ್ಲಾ ಹಿಂಬಾಲಿಸುವುದು ಮಾತ್ರವಲ್ಲದೆ ಎಕ್ಸ್ಪೋಸಿಂಗ್ಗೆ ಸಂಬಂಧಪಟ್ಟಂತೆ ಧಾರಾಳಿಯಾಗಿರುವಂತೆ ಒತ್ತಾಯ ಹೇಳುತ್ತಿರುವುದು ಅಭಿನಯಶ್ರೀಗೆ ಇರುಸುಮುರುಸಾಗಿದೆ.
ಅತ್ಯಂತ ಅಶ್ಲೀಲ ಭಂಗಿಗಳಿಗೆ ಪೋಸ್ ನೀಡುವಂತೆ ಒತ್ತಾಯಿಸುವ ಅನುರಾಧ ಒಂದೊಂದು ಭಂಗಿಗೆ ಒಂದೊಂದು ರೇಟನ್ನು ನಿಗದಿಪಡಿಸುತ್ತಾರಂತೆ. ದೃಶ್ಯವೊಂದರಲ್ಲಿ ಸಿಗರೇಟು ಸೇದಬೇಕೆಂದು ನಿರ್ದೇಶಕರೊಬ್ಬರು ಹೇಳಿದಾಗ ಅಭಿ ರೇಟು ಇದ್ದಕ್ಕಿದ್ದಂತೆ ಏರಿತು. ಅವಕಾಶ ಸಿಕ್ಕರೆ ಸಾಕು ಮೈಮೇಲೆ ಎಳೆಯೂ ಬಟ್ಟೆಯಿಲ್ಲದಂತೆ ಚಿತ್ರಿಸಲು ಹಾತೊರೆಯುವ ನಿರ್ದೇಶಕರಿರುವಾಗ ಇಂಥ ತಾಯಂದಿರು ಸಿಕ್ಕರೆ ಅಂಥವರಿಗೆ ಹಬ್ಬದೂಟ.
ಇವು ಕೇವಲ ಒಂದೆರಡು ಉದಾಹರಣೆಗಳಷ್ಟೇ. ಇಂಥ ಹಣದ ಮದ ತುಂಬಿರುವ ತಾಯಂದಿರು ಇಡೀ ಚಿತ್ರರಂಗದಲ್ಲಿ ಎಲ್ಲೆಂದರಲ್ಲಿ ಸಿಗುತ್ತಾರೆ. ಇಂಥ ವಿಷಯಗಳಲ್ಲಿ ಗಾಳಿ ಬಂದತ್ತ ತೂರಿಕೊ ಎಂದು ಮಗಳಿಗೇ ತಾಯಿ ಒತ್ತಾಯಿಸುವುದು ಸಭ್ಯತೆಯ ಲಕ್ಷಣವೇ?
ಕರಿಯ ಚಿತ್ರದ ನಾಯಕಿ ಅಭಿನಯಶ್ರೀ ಚಿತ್ರಪಟ


Click it and Unblock the Notifications











