ಕನ್ನಡ ಚಿತ್ರೋದ್ಯಮದ ಚಟುವಟಿಕೆ ಮತ್ತೆ ಬಿರುಸಿನಿಂದ ಪ್ರಾರಂಭ
ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಹೋರಾಟ ಪ್ರಾರಂಭವಾದಂದಿನಿಂದ ನಿಂತುಹೋಗಿದ್ದ ಚಟುವಟಿಕೆಗಳು ಇಂದಿನಿಂದ ಭರದಿಂದ ಸಾಗಿವೆ.
ಕೆಲ ಚಿತ್ರಮಂದಿರಗಳು ಮೂರು ವಾರಗಳ ದಿಗ್ಬಂಧನವನ್ನು ಉಲ್ಲಂಘಿಸಿ ಚಿತ್ರಪ್ರದರ್ಶನವನ್ನು ಮುಂದುವರಿಸಿದ್ದನ್ನು ವಿರೋಧಿಸಿ ಕನ್ನಡ ಚಿತ್ರ ನಿರ್ಮಾಪಕರು ಮತ್ತು ಕಲಾವಿದರು ಮುಖ್ಯಮಂತ್ರಿ ಧರ್ಮಸಿಂಗ್ ನೀಡಿದ ಭರವಸೆಯ ಮೇರೆಗೆ ಅನಿರ್ದಿಷ್ಟ ಕಾಲಾವಧಿ ಮುಷ್ಕರ ಮತ್ತು ಉಪವಾಸ ಸತ್ಯಾಗ್ರಹವನ್ನು ಸಂಪೂರ್ಣ ಕೈಬಿಟ್ಟಿದ್ದು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಚಿತ್ರೋದ್ಯಮದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ದರ್ಮಸಿಂಗ್ ಭರವಸೆ ನೀಡಿದ್ದಾರೆ.
ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ ಪಾಟೀಲ್ ಅವರು, ಮುಖ್ಯಮಂತ್ರಿಗಳು ಸಮಸ್ಯೆಯ ಪರಿಹಾರಕ್ಕೆ ಕೆಲ ಸಮಯದ ಕಾಲಾವಧಿಯನ್ನು ಕೇಳಿದ್ದು, ಈ ಹಿನ್ನೆಲೆಯಲ್ಲಿ ಬಂದ್ ನಿರ್ಣಯವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾಗಿ ತಿಳಿಸಿದರು.
ಶಿಷ್ಯ ಚಿತ್ರದ ಹಾಡುಗಳ ಧ್ವನಿಮುದ್ರಣ ಮಾರ್ಸ್ ಸ್ಟುಡಿಯೋದಲ್ಲಿ ಸಾಗಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಚಲ ಚಿತ್ರದ ಡಬ್ಬಿಂಗ್ ಮುಂದುವರಿದಿದ್ದು, ಗುನ್ನ, ಸಿರಿಚಂದನ, ಯಶವಂತ ಚಿತ್ರದ ಚಿತ್ರೀಕರಣ ಕೂಡ ಭರದಿಂದ ಸಾಗಿವೆ.
ಕನ್ನಡೇತರ ಚಿತ್ರಗಳ ಮೇಲಿನ ದಿಗ್ಬಂಧನದ ಕಾಲಾವಧಿ ಕುರಿತಂತೆ ಒಮ್ಮತ ತರಲು ಚಿತ್ರೋದ್ಯಮದ ಮುಖಂಡರನ್ನು ಮಾತುಕತೆಗೆ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಸದ್ಯದಲ್ಲಿಯೇ ಕರೆಯಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
(ಪಿಟಿಐ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications