ಕರ್ನಾಟಕ ಚಲನಚಿತ್ರ ಪ್ರಶಸ್ತಿಯಲ್ಲಿ ಹಗರಣ
ಬೆಂಗಳೂರು, ಡಿ. 03 : 2008 ಮತ್ತು 2009ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪ್ರಕಟಿಸಿ ಕ್ಷಣದಲ್ಲೇ ಹಿಂದೆ ಪಡೆದಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಭಾರ್ಗವ ಅವರು ಇಂದು ಪ್ರಶಸ್ತಿಗಳನ್ನು ಪ್ರಕಟಿಸಿದರು. ಜೀವಮಾನ ಸಾಧನೆಗಾಗಿ ಕೆಎಸ್ಆರ್ ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿದೆ.
ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ನೀಡುವುದಾಗಿ ಭಾರ್ಗವ ಹೇಳಿದರು. ಕೆಎಸ್ಆರ್ ದಾಸ್ ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರ ಆರೋಪವಾಗಿತ್ತು. ಇದನ್ನು ಭಾರ್ಗವ ಅವರು ಕೂಡ ನಂತರ ಒಪ್ಪಿಕೊಂಡರು.
ಕಬ್ಬಡ್ಡಿ, ಜೋಶ್ ಮತ್ತು ಶಂಕರ ಪುಣ್ಯಕೋಟಿ ಮೊದಲ ಮೂರು ಅತ್ಯುತ್ತಮ ಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. ಅತ್ಯುತ್ತಮ ನಟನಾಗಿ ಯೋಗೀಶ್ ಆಯ್ಕೆಯಾಗಿದ್ದರೆ ಅತ್ಯುತ್ತಮ ನಟಿಯಾಗಿ ರಾಧಿಕಾ ಪಂಡಿತ್ ಮತ್ತೊಂದು ಪ್ರಶಸ್ತಿಯನ್ನು ಪಡೆದಿದ್ದಾರೆ. ಮುಖಪುಟ ಚಿತ್ರ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಯಾಗಿದೆ. ಚೈತನ್ಯಾ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ.


Click it and Unblock the Notifications











