ಕನ್ನಡೇತರಚಿತ್ರಲಾಬಿಗೆ ಬೆಂಗಳೂರಿಗೆ ಬಚ್ಚನ್,ಚಿರು, ರಜನಿ, ಐಶ್ವರ್ಯ
ಬೆಂಗಳೂರು : ರಾಜ್ಯದಲ್ಲಿ ಏಳು ವಾರಗಳ ನಂತರ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂಬ ಸರಕಾರದ ನೀತಿಯನ್ನು ವಿರೋಧಿಸಿ ಚಲನಚಿತ್ರ ಮಂದಿರ ಮಾಲೀಕರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲು ಬಾಲಿವುಡ್ ಪಾಳಯ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಅಮಿತಾ ಬಚ್ಚನ್, ಶಾರುಖ್ ಖಾನ್, ಹೃತಿಕ್ ರೋಷನ್, ಚಿರಂಜೀವಿ, ರಜನಿಕಾಂತ್, ಐಶ್ವರ್ಯ ರೈ, ಮತ್ತಿತರ ನಟನಟಿಯರೊಂದಿಗೆ ಈ ಬಗೆಗೆ ಮಾತು ಕತೆಗಳು ನಡೆಯುತ್ತಿದ್ದು, ನಗರದಲ್ಲಿ ಸಂಘಟಿಸಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಚಿತ್ರಮಂದಿರ ಮಾಲೀಕರ ಸಂಘದ ಮೂಲಗಳು ತಿಳಿಸಿವೆ.
ಬಂದ್ ವಿಫಲ : ಸಿನಿಮಾ ಬಂದ್ ಎಂದಿದ್ದರೂ, ಚಿತ್ರಮಂದಿರಗಳು ಪ್ರದರ್ಶನ ಮುಂದುವರೆಸಿವೆ. ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯುತ್ತಿಲ್ಲ. ಶುಕ್ರವಾರ ಚಲನಚಿತ್ರ ಮಾಲೀಕರ ಸಂಘ ಕರೆ ನೀಡಿದ್ದ ರಾಜ್ಯ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಕನ್ನಡ ವಿರೋಧಿ ಚಿತ್ರಮಂದಿರಗಳ ವಿರುದ್ದ ನಗರದಲ್ಲಿ ಶನಿವಾರ ಕನ್ನಡ ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ಆಯೋಜಿಸಿವೆ.
ಇಂದ್ರಜಿತ್ ಬಂಡು : ಸರಕಾರದ ಧೋರಣೆಯಿಂದ ಪರಭಾಷಾ ಚಿತ್ರಗಳನ್ನು ನಿರ್ಮಿಸುವ ಕನ್ನಡ ನಿರ್ಮಾಪಕರಿಗೆ ತೊಂದರೆಯಾಗಲಿದೆ. ಕೂಡಲೇ ಈ ತೀರ್ಮಾನವನ್ನು ವಾಪಸ್ಸು ಪಡೆಯುವಂತೆ ಚಲನ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ತೆರೆಕಂಡು ಏಳು ವಾರಗಳ ಕಾಲ ಕನ್ನಡೇತರ ಚಿತ್ರಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸುವಂತಿಲ್ಲ ಎನ್ನುವ ನಿಲುವಿನಿಂದಾಗಿ ತಮ್ಮ ‘ಮೊನಾಲಿಸ’ ಚಿತ್ರದ ತೆಲುಗು ಡಬ್ಬಿಂಗ್ ಅವತರಣಿಕೆಯನ್ನು ಆಂಧ್ರದಲ್ಲಿ ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿಲ್ಲ . ಚಿತ್ರದ ಕ್ಲಿಪ್ಪಿಂಗ್ಗಳನ್ನು ಟೀವಿಯಲ್ಲಿ ಪ್ರದರ್ಶಿಸಲೂ ಆಗುತ್ತಿಲ್ಲ . ಇದರಿಂದ ಸುಮಾರು 50 ಲಕ್ಷ ರುಪಾಯಿ ನಷ್ಟವಾಗಿದೆ ಎಂದು ಇಂದ್ರಜಿತ್ ದೂರಿದರು.
ಚಿತ್ರೋದ್ಯಮದಲ್ಲಿ ಕೆಲಸವಿಲ್ಲದೆ ಖಾಲಿ ಇರುವವರು ಕನ್ನಡೇತರ ಚಿತ್ರಗಳ ವಿರುದ್ಧ ದನಿ ಎತ್ತುತ್ತಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications