ಮಾತುಕತೆ ಪ್ರಗತಿ, ಇನ್ನೈದು ದಿನದಲ್ಲಿ ಬಿಕ್ಕಟ್ಟು ಪರಿಹಾರ -ಗಂಗರಾಜು
ಬೆಂಗಳೂರು : ಪರಭಾಷಾ ಚಿತ್ರಗಳ ಬಿಡುಗಡೆಗೆ ಸಂಬಂಧಿಸಿದಂತೆ ಕನ್ನಡ ಚಿತ್ರೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟು ನಾಲ್ಕೈದು ದಿನಗಳಲ್ಲಿ ಬಗೆಹರಿಯುವ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಗಂಗರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ಮಂಡಳಿಗಳೊಂದಿಗೆ ಕನ್ನಡ ಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಮಾತುಕತೆ ನಡೆಸಲಾಗುತ್ತಿದೆ. ಬಿಕ್ಕಟ್ಟು ಇನ್ನು ಐದು ದಿನಗಳಲ್ಲಿ ಬಗೆಹರಿಯಲಿದೆ ಎಂದು ಸೋಮವಾರ ಬೆಂಗಳೂರು ಪ್ರೆಸ್ಕ್ಲಬ್ ಏರ್ಪಡಿಸಿದ್ದ ಸಂದರ್ಶನದಲ್ಲಿ ಗಂಗರಾಜು ಹೇಳಿದರು.
ಕನ್ನಡೇತರ ಚಿತ್ರಗಳ ಮೇಲೆ ಏಳು ವಾರಗಳ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಕಚ್ಚಾ ವಸ್ತುಗಳ ಸರಬರಾಜು ನಿಲ್ಲಿಸುವ ಬಾಲಿವುಡ್, ತೆಲುಗು ಹಾಗೂ ತೆಲುಗು ಚಿತ್ರರಂಗದ ಬೆದರಿಕೆ ಅಂಜಬೇಕಿಲ್ಲ . ಕಚ್ಚಾವಸ್ತು ಪೂರೈಕೆ ಸಮಸ್ಯೆಯೇನೂ ಅಲ್ಲ ಎಂದು ಗಂಗರಾಜು ಹೇಳಿದರು.
ಗಂಗರಾಜು ಅವರೊಂದಿಗೆ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸಾ.ರಾ.ಗೋವಿಂದು ಕೂಡ ಪ್ರೆಸ್ಕ್ಲಬ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ವರನಟ ಡಾ.ರಾಜ್ಕುಮಾರ್ ಹಾಗೂ ಸಂಸದ ಅಂಬರೀಷ್ ಅವರು ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸುವ ಕುರಿತು ಗೋವಿಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಪರಭಾಷಾ ವಿರೋಧಿಗಳಲ್ಲ . ಅಳಿವಿನ ಅಂಚಿನಿಂದ ಕನ್ನಡ ಚಿತ್ರೋದ್ಯಮವನ್ನು ರಕ್ಷಿಸಿಕೊಳ್ಳಲು ಕನ್ನಡೇತರ ಚಿತ್ರಗಳ ಬಿಡುಗಡೆಗೆ 7 ವಾರಗಳ ನಿಷೇಧ ಹೇರಲಾಗಿದೆ ಎಂದು ಸಾ.ರಾ.ಗೋವಿಂದು ಸ್ಪಷ್ಟಪಡಿಸಿದರು.
ಈ ನಡುವೆ ಚಿತ್ರೋದ್ಯಮದ ವಿವಿಧ ವರ್ಗಗಳ ನಾಯಕರೊಡನೆ ನಟ ಹಾಗೂ ಸಂಸದ ಅಂಬರೀಷ್ ಮಾತುಕತೆ ಮುಂದುವರೆಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications