ರವಿಚಂದ್ರನ್ಗೆ ಅವಮಾನ : ಗಣೇಶ್ ಕಚೇರಿ ಧ್ವಂಸ!
ಬೆಂಗಳೂರು : ನಟ ರವಿಚಂದ್ರನ್ಗಾದ ಅವಮಾನವನ್ನು ಅವರ ಅಭಿಮಾನಿಗಳು ಉಗ್ರವಾಗಿ ಖಂಡಿಸಿದ್ದಾರೆ. ಈ ಮಧ್ಯೆ ‘ಯುಗಾದಿ’ ಚಿತ್ರದ ನಿರ್ಮಾಪಕ ಗಣೇಶ್ ಅವರ ಕಚೇರಿಯನ್ನು ಶನಿವಾರ ಧ್ವಂಸಗೊಳಿಸಿದ್ದಾರೆ.
ನೂರಾರು ರವಿಚಂದ್ರನ್ ಅಭಿಮಾನಿಗಳು ಎನ್ನಲಾಗುವ ಒಂದು ಗುಂಪು, ನಿರ್ಮಾಪಕ ಗಣೇಶ್ರ ಕಚೇರಿಗೆ ನುಗ್ಗಿ, ಚಿತ್ರೀಕರಣದ ಸಲಕರಣೆ ಮತ್ತು ಬಲ್ಪುಗಳನ್ನು ಪುಡಿಪುಡಿ ಮಾಡಿದ್ದಾರೆ. ಗಾಂಧಿನಗರದ ಐದನೇ ಕ್ರಾಸ್ನಲ್ಲಿ ಗಣೇಶ್ ಅವರ ಕಚೇರಿ ಇದೆ.
ಇದು ಪೂರ್ವ ನಿಯೋಜಿತ ಕೃತ್ಯ. ನನಗೆ ಈ ಘಟನೆಯಿಂದ ಸುಮಾರು 15ಲಕ್ಷ ನಷ್ಟವಾಗಿದೆ. ವಿಚಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಿಟ್ಟು ನ್ಯಾಯ ಕೇಳುತ್ತೇನೆ ಎಂದು ಗಣೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಣೇಶ್ ಮತ್ತು ಪ್ರವೀಣ್ ಕುಮಾರ್, ‘ಯುಗಾದಿ’ ಚಿತ್ರದ ನಿರ್ಮಾಪಕರು. ಊಟಿಯಲ್ಲಿ ನಡೆದ ಚಿತ್ರೀಕರಣದಲ್ಲಿ ರವಿಚಂದ್ರನ್ಗೆ ಪ್ರವೀಣ್ಕುಮಾರ್ ಪ್ರಾಣ ಬೆದರಿಕೆ ಹಾಕಿ, ಅವಾಚ್ಯ ಪದಗಳಿಂದ ಬೈದರು. ರವಿಚಂದ್ರನ್ಗಾದ ಅವಮಾನ ವಿರೋಧಿಸಿ ಅಭಿಮಾನಿಗಳು ನಡೆಸಿದ ಪ್ರತಿಭಟನೆ, ಈ ಸ್ವರೂಪ ಪಡೆಯಿತು ಎನ್ನಲಾಗಿದೆ.
ಸಂಭಾವನೆ ಕೊಟ್ಟಿಲ್ಲ : ಯುಗಾದಿ ನಿರ್ಮಾಪಕರ ವರ್ತನೆ ಕೀಳು ಮಟ್ಟದ್ದು. ಚಿತ್ರದ ಪೂರ್ತಿ ಸಂಭಾವನೆ ನನಗಿನ್ನೂ ಬಂದಿಲ್ಲ. ಇಂಥ ನಿರ್ಮಾಪಕರ ಚಿತ್ರಗಳಲ್ಲಿ ನಾನಿನ್ನು ನಟಿಸುವುದಿಲ್ಲ ಎನ್ನುವ ರವಿಚಂದ್ರನ್, ತಮಗಾದ ಅವಮಾನವನ್ನು ವಾಣಿಜ್ಯ ಮಂಡಳಿ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.
(ಏಜನ್ಸೀಸ್)


Click it and Unblock the Notifications











