ಸತ್ಯಾನಂದ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆಯಾಜ್ಞೆ
ನಿರ್ಮಾಪಕ ಮತ್ತು ನಿರ್ದೇಶಕ ಮದನ್ ಪಟೇಲ್ ಅವರು ಮಹತ್ವಾಕಾಂಕ್ಷೆಯಿಂದ ಕೈಗೆತ್ತಿಕೊಂಡಿದ್ದ 'ಸತ್ಯಾನಂದ' ಚಿತ್ರಕ್ಕೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವಾಗುವವರೆಗೆ ಚಿತ್ರೀಕರಣ ನಡೆಸದಿರಲು ನ್ಯಾಯಾಲಯ ನಿರ್ಮಾಪಕರಿಗೆ ಆದೇಶಿಸಿದೆ.
ಸತ್ಯಾನಂದ ಚಿತ್ರದಲ್ಲಿನ ಪ್ರಮುಖ ಪಾತ್ರ ತನ್ನ ಪಾತ್ರವನ್ನೇ ಹೋಲುತ್ತದೆ ಮತ್ತು ಇದರಿಂದ ತನಗೆ ಮಾನಹಾನಿಯಾಗುತ್ತದೆ ಎಂದು ಆರೋಪಿಸಿ ಬಿಡದಿ ಧ್ಯಾನಪೀಠಂ ಆಶ್ರಮದ ವಿವಾದಾತ್ಮಕ ಸ್ವಾಮೀಜಿ ನಿತ್ಯಾನಂದ ಅವರು ತಡೆಯಾಜ್ಞೆ ಕೋರಿ ತಮ್ಮ ವಕೀಲರ ಮುಖಾಂತರ ಅರ್ಜಿ ಸಲ್ಲಿಸಿದ್ದರು. ನಿತ್ಯಾನಂದರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ತಾತ್ಕಾಲಿಕವಾಗಿ ಯಾವುದೇ ಚಟುವಟಿಕೆ ನಡೆಸದಂತೆ ಆಜ್ಞೆ ನೀಡಿದೆ.
ಇದರ ಜೊತೆಗೆ ಚಿತ್ರದ ನಿರ್ಮಾಪಕ ಮದನ್ ಪಟೇಲ್ ಮತ್ತು ಪ್ರಮುಖ ಭೂಮಿಕೆಯಲ್ಲಿರುವ ಸತ್ಯಾನಂದ ಪಾತ್ರಧಾರಿ ರವಿ ಚೇತನ್ ಅವರಿಗೆ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ. ಅವರಿಗೆ ತಮ್ಮ ಅಹವಾಲನ್ನು ಸಲ್ಲಿಸಲು ಅವಕಾಶ ನೀಡಿದ್ದು, ತಡೆಯಾಜ್ಞೆ ತೆರವಾಗುವವರೆಗೆ ಸತ್ಯಾನಂದ ಚಿತ್ರದ ಯಾವುದೇ ದೃಶ್ಯಗಳ ಚಿತ್ರೀಕರಣ ನಡೆಸುವಂತಿಲ್ಲ.
ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದ ನಿತ್ಯಾನಂದ ಅವರು ಜೈಲು ಸೇರಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಧ್ಯಾನಪೀಠಂನಲ್ಲಿ ತಮ್ಮ ಎಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಸಂಪೂರ್ಣ ಇತ್ಯರ್ಥವಾಗಿಲ್ಲ. ದೇಶವಿದೇಶಗಳಲ್ಲಿ ಅಪಾರ ಭಕ್ತಗಣವನ್ನು ಹೊಂದಿರುವ ನಿತ್ಯಾನಂದ ಅವರು ಸತ್ಯಾನಂದ ಚಿತ್ರದಿಂದಾಗಿ ಸಹಜವಾಗಿ ವಿಚಲಿತರಾಗಿದ್ದರು. ಮಾರ್ಚ್ 6ರಂದು ಸತ್ಯಾನಂದ ಸೆಟ್ಟೇರಿದ ಎರಡು ದಿನಗಳಲ್ಲಿಯೇ ನಿತ್ಯಾನಂದ ನೋಟೀಸ್ ಜಾರಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮದನ್ ಪಟೇಲ್, ಕುಂಬಳಕಾಯಿ ಕಳ್ಳ ಎಂದರೆ ಹೆಗಲೇಕೆ ಮುಟ್ಟಿ ನೋಡಿಕೊಳ್ಳುತ್ತೀರಿ. ತಾಕತ್ ಇದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಿ. ಚಿತ್ರೀಕರಣ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಸತ್ಯಾನಂದ ಚಿತ್ರದ ಮೂಲಕ ದೇವ ಮಾನವನ ಎಲ್ಲ ಸತ್ಯಗಳನ್ನು ಬಯಲು ಮಾಡುವುದಾಗಿ ಎಂದು ಸವಾಲು ಹಾಕಿದ್ದರು. ಈಗ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಲಾಗಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ ರವಿ ಚೇತನ್ ಅವರ ಚೆಹರೆ ಕೂಡ ನಿತ್ಯಾನಂದ ಅವರನ್ನು ಹೋಲುತ್ತದೆ.


Click it and Unblock the Notifications











