ಮಂದಾಕಿನಿಯನ್ನೂ ಬಿಡದ 'ಎ' ಸರ್ಟಿಫಿಕೇಟ್ ಭೂತ
ಮಾದೇಶ' ಹಾಗೂ ಸೆನ್ಸಾರ್ ಮಂಡಳಿ ನಡುವಿನ ವಿವಾದ ಬಗೆಹರಿದ ಬೆನ್ನಲ್ಲೇ ರಮೇಶ್ ಸುರ್ವೆ ನಿರ್ದೇಶನದ ಮಂದಾಕಿನಿ' ಚಿತ್ರ ಹಾಗೂ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ನಡುವೆ ಈಗ ಜಟಾಪಟಿ ಆರಂಭವಾಗಿದೆ. ತಮ್ಮ ಚಿತ್ರಕ್ಕೆ ಯಾಕೆ ಎ' ಸರ್ಟಿಫಿಕೇಟ್ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿರುವ ರಮೇಶ್ ಸುರ್ವೆ, ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ವಿರುದ್ಧ ಕಿಡಿ ಕಾರಿದ್ದಾರೆ. ಸಿನಿಮಾವನ್ನು ಮತ್ತೆರಡು ಬಾರಿ ವೀಕ್ಷಣೆ ಮಾಡಿದರೂ ಅದಕ್ಕೆ passed revised 'A' ಕೊಟ್ಟಿರುವ ಬಗ್ಗೆ ತಾವು ಕೋರ್ಟ್ ಮೆಟ್ಟಿಲೇರುವುದಾಗಿ ಸುರ್ವೆ ತಿಳಿಸಿದ್ದಾರೆ.
ಆಗಿದ್ದೇನು?
ದುನಿಯಾ' ಚಿತ್ರದ ನಟಿ ರಶ್ಮಿ ಅಭಿನಯದ ಮಂದಾಕಿನಿ ಚಿತ್ರವನ್ನು ಸೆನ್ಸಾರ್ ಮಂಡಳಿ ಮೊದಲನೇ ಸಲ ವೀಕ್ಷಿಸಿ, ಅದಕ್ಕೆ ಎ' ಸರ್ಟಿಫಿಕೇಟ್ ನೀಡುವುದಾಗಿ ತಿಳಿಸಿದೆ. ಆದರೆ ಅದನ್ನು ಒಪ್ಪದ ಚಿತ್ರದ ನಿರ್ದೇಶಕರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮರುವೀಕ್ಷಣೆಗೆ ಒತ್ತಡ ಹೇರಿದ್ದರು. ಈ ಸಂಬಂಧ ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಿ, ಮತ್ತೆ ಎ' ಕೊಡಲಾಗಿತ್ತು. ಅದನ್ನೂ ಒಪ್ಪದಿದ್ದಾಗ ಡಾ. ಶ್ರೀಧರ್ ಮತ್ತಿತರರೊಂದಿಗೆ ಸೆನ್ಸಾರ್ ಬಳಗ ಇನ್ನೊಮ್ಮೆ ಪರಿಶೀಲಿಸಿತು. ಅಷ್ಟಾದರೂ ಸಿನಿಮಾದಲ್ಲಿ ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಸಾಕಷ್ಟು ದೃಶ್ಯಗಳಿವೆ ಎಂದು ತೀರ್ಮಾನಿಸಿ, passed revised 'A' ಕೊಟ್ಟು ಸುಮ್ಮನಾಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುರ್ವೆ ಬಳಗ, ಸಿನಿಮಾ ಬಿಡುಗಡೆಯಾದ ಮರುದಿನವೇ ಪ್ರೇಕ್ಷಕರ ಅಭಿಪ್ರಾಯದ ಮೇರೆಗೆ ಕೋರ್ಟ್ ಮೆಟ್ಟಿಲೇರುವುದಾಗಿ ಪರೋಕ್ಷವಾಗಿ ಸೆನ್ಸಾರ್ ಮಂಡಳಿ ವಿರುದ್ಧ ತಿರುಗಿಬಿದ್ದಿದ್ದಾರೆ.
ನಿರ್ಮಾಪಕರು ಏನೆನ್ನುತ್ತಾರೆ?
ಸಿನಿಮಾರಂಗದ ಬಗ್ಗೆ ನನಗೇನೂ ಗೊತ್ತಿಲ್ಲ. ವರ್ಷ ಕಳೆದರೂ ಚಿತ್ರ ಬಿಡುಗಡೆ ಆಗಿಲ್ಲ. ಈಗಾಗಲೇ ಬಜೆಟ್ ಮೂರು ಕೋಟಿ ಮೀರಿದೆ. ಎ' ಸರ್ಟಿಪಿಕೇಟ್ ಕೊಟ್ಟಿರುವ ಬಗ್ಗೆ ನನಗೂ ಅಸಮಾಧಾನ ಇದೆ. ಇಲ್ಲಿಯವೆರೆಗೆ ಎಂತೆಂಥಾ ಚಿತ್ರಗಳು ಬಂದಿದ್ದರೂ ಅವುಗಳಿಗೆಲ್ಲಾ ಯು/ಎ' ಕೊಡಲಾಗಿದೆ. ಅದಕ್ಕಿಂಥ ಹೆಚ್ಚಾಗಿ ನಿರ್ದೇಶಕರು ಹೊಸ ಪ್ರಯೋಗ ಮಾಡಲು ಹೋಗಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದೇ ನನ್ನ ಕೊನೆಯ ಸಿನಿಮಾ. ಮೊದಲನೇ ಬಾರಿಗೆ ಸಿಕ್ಕಾಪಟ್ಟೆ ನೋವು ಅನುಭವಿಸಿಬಿಟ್ಟೆ. ಇನ್ನು ಮುಂದೆ ಈ ಸಿನಿಮಾರಂಗದ ಸಹವಾಸವೇ ಸಾಕು ಎನ್ನಿಸುವಷ್ಟು ಬೇಸರ ಆಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಶ್ರೀನಿವಾಸ್.
ಸೆನ್ಸಾರ್ ಚಂದ್ರಶೇಖರ್ ಹೇಳೋದೇನು?
ಸಿನಿಮಾದಲ್ಲಿ ಸಾಕಷ್ಟು ಅಸಭ್ಯ, ಆಕ್ಷೇಪಣಾರ್ಹ ದೃಶ್ಯಗಳಿವೆ. ಅವೆಲ್ಲವನ್ನೂ ಕಟ್ ಮಾಡಿದರೂ ಯು/ಎ' ಕೊಡಲು ಅಸಾಧ್ಯ. ನಮಗೂ ಕೆಲವು ನಿಯಮ ಕಾನೂನು, ಕಟ್ಟಳೆಗಳಿವೆ. ಅವನ್ನು ಮೀರಿ ಯಾರದ್ದೋ ಒತ್ತಾಯಕ್ಕೆ ಮಣಿಯಲು ಆಗುವುದಿಲ್ಲ.
ಅಂಥದ್ದೇನಿದೆ?
*ಭಯೋತ್ಪಾದಕರನ್ನು ಮಂಪರು ಪರೀಕ್ಷೆ ಮಾಡುವ ಹಾಗೆ ಗರ್ಭಿಣಿ ಮೇಲೂ ಪ್ರಯೋಗ ಮಾಡಲಾಗುತ್ತದೆ.
*ನಾಯಕಿ ಹತ್ತನೇ ಕ್ಲಾಸ್ ಮುಗಿಸಿ, 16ನೇ ವಯಸ್ಸು ದಾಟುವ ಹೊತ್ತಿಗೇ ಆಕೆಗೆ ಮದುವೆ ಆಗಿಬಿಡುತ್ತದೆ.
*ಮುಗ್ದ ಹೆಣ್ಣು ಮಗಳೊಬ್ಬಳು ತನ್ನ ತಾಯಿ ಹಾಗೂ ಚಿಕ್ಕಪ್ಪನ ನಡುವಿನ ಅನೈತಿಕ ಸಂಬಂಧ ಹಾಗೂ ದುಷ್ಕರ್ಮಿಗಳು ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡುವುದನ್ನು ಕಂಡು ಆತಂಕಕ್ಕೊಳಗಾಗುತ್ತಾಳೆ.
*ದೇವಸ್ಥಾನವೊಂದರಲ್ಲಿ ಉಪನ್ಯಾಸಕ ಹಾಗೂ ಕಾಲೇಜು ಹುಡುಗಿ ಮಂದಾಕಿನಿ ಮಾತನಾಡುತ್ತಾ ಕುಳಿತಾಗ ಜನ: ನಿಮಗೆ ಚಕ್ಕಂದ ಆಡಲು ಇದೇ ಜಾಗವಾಗಬೇಕಿತ್ತಾ?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆಕೆ: ದೇವಸ್ಥಾನದಲ್ಲಿ ಹೆಣ್ಣುದೇವರಿಗೆ ಪೂಜಾರಿಗಳು ಅಭಿಷೇಕ ಮಾಡಿದರೆ ಏನೂ ತಪ್ಪಿಲ್ಲ, ದೇವರ ಬಟ್ಟೆಯನ್ನು ಬದಲಾಯಿಸಿದರೆ ಪ್ರಶ್ನಿಸುವುದಿಲ್ಲ. ಆದರೆ ಏನೂ ತಪ್ಪು ಮಾಡದಿದ್ದರೂ ನಮ್ಮ ಮೇಲೆ ದೋಷ ಹೊರಿಸುವುದು ಯಾವ ನ್ಯಾಯ ?' ಎಂದು ಮರುಪ್ರಶ್ನೆ ಹಾಕುತ್ತಾಳೆ...
ಇಂಥ ಸಾಕಷ್ಟು ದೃಶ್ಯಗಳಿರುವಾಗ ಚಿತ್ರಕ್ಕೆ ಹೇಗೆ ಯು/ಎ' ಕೊಡಲು ಸಾಧ್ಯ ಎಂದು ಚಂದ್ರಶೇಖರ್ ಮರುಪ್ರಶ್ನೆ ಹಾಕುತ್ತಾರೆ.


Click it and Unblock the Notifications











