ಸಿನಿಮಾ ಬಿಕ್ಕಟ್ಟು ತಾರಕಕ್ಕೆ, ಹೊಸ ಕನ್ನಡ ಚಿತ್ರ ಬಿಡುಗಡೆಗೂ ಗ್ರಹಣ
ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವಂತಿಲ್ಲ. ಪರಭಾಷಾ ಚಿತ್ರಗಳನ್ನು ರಾಜ್ಯದಲ್ಲಿ ಏಳುವಾರಗಳ ನಂತರ ಬಿಡುಗಡೆ ಮಾಡುವ ಸರಕಾರದ ಧೋರಣೆ ವಿರೋಧಿಸಿ ಚಿತ್ರಮಂದಿರಗಳ ಮಾಲೀಕರು ಬಿಗಿಪಟ್ಟು ಸಡಿಲಿಸುವಂತೆ ಕಾಣುತ್ತಿಲ್ಲ .
ಕನ್ನಡ ಚಿತ್ರರಂಗ ಸಂಕಷ್ಟದ ಸ್ಥಿತಿಯಲ್ಲಿದ್ದು ಪರಿಸ್ಥಿತಿ ತಿಳಿಯಾಗುವ ತನಕ ಪರಭಾಷಾಚಿತ್ರಗಳು ಸೇರಿದಂತೆ ಕನ್ನಡದ ಹೊಸಚಿತ್ರಗಳನ್ನು ಪ್ರದರ್ಶಿಸದಿರಲು ಕರ್ನಾಟಕ ಚಲನಚಿತ್ರ ಮಾಹಾಮಂಡಳ ನಿರ್ಧರಿಸಿದೆ ಎಂದು ಮಂಡಳದ ಅಧ್ಯಕ್ಷ ಆರ್.ಆರ್. ಓದು ಗೌಡ ತಿಳಿಸಿದ್ದಾರೆ
ಇತ್ತೀಚಿಗೆ ತೆರೆ ಕಾಣುತ್ತಿರುವ ಕನ್ನಡ ಚಿತ್ರಗಳು ಕಳಪೆಯಾಗಿರುವ ಕಾರಣ, ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಪರಭಾಷಾ ಚಿತ್ರಗಳ ಬಗೆಗಿನ ಸರಕಾರದ ನೀತಿಯನ್ನು ಓದು ಗೌಡ ಖಂಡಿಸಿದ್ದಾರೆ.
ಚಿತ್ರಮಂದಿರಗಳ ಮಾಲೀಕರ ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಗಳೂರು ಸೇರಿದಂತೆ ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಅನೇಕ ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿವೆ. ಚಿತ್ರೋದ್ಯಮದ ಸಮಸ್ಯೆ ಬಗೆಗೆ ಚರ್ಚಿಸಲು ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ರಮೇಶ್ ಸೆ.8 ರಂದು ಸಭೆ ಕರೆದಿದ್ದಾರೆ. ಈ ನಡುವೆ ಸೋಮವಾರ ನಿರ್ಮಾಪಕರ ಸಂಘ ಸಭೆ ಕರೆದಿದೆ.
ರಮೇಶ್ ಕಾರಣ : ಕನ್ನಡಿಗರಾಗಿದ್ದರೂ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ರಮೇಶ್ ಪರಭಾಷಾ ಚಿತ್ರಗಳ ಹಿತ ಕಾಯಲು ನಿಂತಿದ್ದಾರೆ. ಸದ್ಯದಲ್ಲಿಯೇ ಬರಲಿರುವ ವಾಣಿಜ್ಯಮಂಡಳಿ ಚುನಾವಣೆಯಲ್ಲಿ ರಮೇಶ್ರನ್ನು ಮನೆಗೆ ಕಳುಹಿಸಿದರೆ ಮಾತ್ರ ಚಿತ್ರರಂಗ ಉಳಿಯಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಚಿತ್ರರಂಗ ಉಳಿಸಿ ಚಿಂತನಾ ಸಭೆಯಲ್ಲಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications