ಯಾರಿಗೂ ನಾನು ಹೊಡೆದಿಲ ್ಲ-ಪುನೀತ್
- ಮೈಸೂರು ಪ್ರತಿನಿಧಿಯಿಂದ
ಪೊಲೀಸರ ಕೈಲಿ ಪ್ರತಿಭಟನೆಯನ್ನು ತಣ್ಣಗಾಗಿಸಲು ಆಗಲೇ ಇಲ್ಲ. ಖುದ್ದು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಸಮಾಧಾನ ಹೇಳಬೇಕಾಯಿತು. ಒಂದು ವೇಳೆ ಪುನೀತ್ ತಪ್ಪೆಸಗಿದ್ದಲ್ಲಿ, ಪೊಲೀಸರು ವಿಚಾರಿಸಿಕೊಳ್ಳುತ್ತಾರೆ. ವಿಚಾರಣೆ ಮಾಡುವಂತೆ ಪೊಲೀಸ್ ಆಯುಕ್ತರಿಗೆ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಕೃಷ್ಣ ಭರವಸೆ ಕೊಟ್ಟ ಮೇಲೆ ಪರಿಸ್ಥಿತಿ ತಿಳಿಯಾಯಿತು.
ಆದದ್ದಾದರೂ ಏನು?
ಮುಖ್ಯಮಂತ್ರಿ ಪೂಜೆ ಸಲ್ಲಿಸಿದ ನಂತರ ವಾರ್ತಾ ಸಚಿವರು ಬೆಟ್ಟದತ್ತ ಹೊರಟರು. ಇದನ್ನು ವರದಿ ಮಾಡುವ ಭರದಲ್ಲಿ ಬೆಟ್ಟದಿಂದ ಇಳಿಯುತ್ತಿದ್ದ ಪತ್ರಕರ್ತರು ಮತ್ತೆ ವಾಹನವನ್ನು ಹಿಂದಿರುಗಿಸಿದರು. ಆದರೆ ರಸ್ತೆಯಲ್ಲಿ ಕಬ್ಬಿಣದ ತಾತ್ಕಾಲಿಕ ತಡೆಗೋಡೆ ಇತ್ತು. ಪೊಲೀಸರು ಅದನ್ನು ತೆಗೆಯಲಿಲ್ಲ.
ಮೈಸೂರಿನ ಸ್ಥಳೀಯ ಚಾನೆಲ್ ‘ಮೈ ನ್ಯೂಸ್’ ವರದಿಗಾರ ಸಂತೋಷಕುಮಾರ್ ನಡುಬೆಟ್ಟ ಕಾರಿನಿಂದಿಳಿದು, ಅದನ್ನು ಸರಿಸಿ, ವಾಹನ ಮುಂದೆ ಹೋದ ನಂತರ ಹಾಕುವಾಗ ಪುನೀತ್ ಹಾಗೂ ಗೆಳಯರು ಕೂತಿದ್ದ ಕಾರು ಬಂದಿತು. ಅದನ್ನು ಲಕ್ಷಿಸದೇ ಸಂತೋಷ್ಕುಮಾರ್ ಗೇಟು ಹಾಕಿದ್ದು, ಪುನೀತ್ ಸಹಚರರಿಗೆ ಕೋಪ ತರಿಸಿತು. ಪುನೀತ್ ಕಾರಲ್ಲಿದ್ದ ಒಬ್ಬ ಗೆಳೆಯ ಇಳಿದು ಬಂದು ಸಂತೋಷ್ಕುಮಾರ್ ಕಪಾಳಕ್ಕೆ ಹೊಡೆದ. ಮಾತಿನ ಚಕಮಕಿ ನಡೆಯಿತು. ನಡೆಯುತ್ತಿದ್ದ ಘಟನಾವಳಿಯನ್ನು ಕಾರಿಂದಲೇ ಚಿತ್ರೀಕರಿಸಿಕೊಳ್ಳಲು ಕ್ಯಾಮರಾಮನ್ ನವೀನ್ ಯತ್ನಿಸಿದ. ಇದನ್ನು ಪುನೀತ್ ಗುಂಪು ಪ್ರತಿಭಟಿಸಿತು. ಹೆಗಲ ಮೇಲಿದ್ದ ಕ್ಯಾಮರಾವನ್ನು ಪುನೀತ್ ಕಿತ್ತು ಕೆಳಗಿಟ್ಟರು. ವಿಷಯ ದೊಡ್ಡದಾಯಿತು. ಪತ್ರಕರ್ತರು ಧರಣಿ ಕೂತರು. ಪೊಲೀಸರು ಕೈಮುಗಿದರೂ ಧರಣಿ ಸಡಿಲವಾಗಲಿಲ್ಲ. ಸಮಾಧಾನ ಮಾಡಲು ಮುಖ್ಯಮಂತ್ರಿ ಕೃಷ್ಣ ಅವರೇ ಬರಬೇಕಾಯಿತು.
‘ಅಪರಾಧಿ ನಾನಲ್ಲ’
ನಾನೇನೂ ಮಾಡ್ಲಿಲ್ಲ. ಮುಖ್ಯವಾಗಿ ನಾನು ಯಾರಿಗೂ ಹೊಡೆಯಲಿಲ್ಲ. ನನ್ನ ಫ್ಯಾನ್ಸ್ ಹಾಗೆ ಮಾಡಿರಬಹುದು. ಹೊಡೆಯಲು ಹೋದವರನ್ನು ನಾನು ತಡೆದಿದ್ದೇನೆ. ಅವರು ಪತ್ರಕರ್ತರು ಅಂತ ನನಗೆ ಖಂಡಿತ ಗೊತ್ತಿರಲಿಲ್ಲ. ನಮ್ಮ ಫ್ಯಾಮಿಲಿ ಬಗ್ಗೆ ಏನೋ ಕೆಟ್ಟದಾಗಿ ಮಾತಾಡಿದಾರೆ. ಅದಕ್ಕೇ ಕೋಪ ಬಂದು ನನ್ನ ಫ್ಯಾನ್ಸ್ ಅವರ ಮೇಲೆ ಹಲ್ಲೆ ಮಾಡಿರಬಹುದು. ನಡೆಯುತ್ತಿದ್ದ ಘಟನೆಯನ್ನು ಕಾರಿಂದ ಕದ್ದು ಚಿತ್ರೀಕರಿಸುತ್ತಿದ್ದರು. ಅದಕ್ಕೇ ಕೋಪ ಬಂದು ಒಬ್ಬ ವ್ಯಕ್ತಿಯ ಹೆಗಲ ಮೇಲಿದ್ದ ಕ್ಯಾಮರಾ ಕಿತ್ತು ಕೆಳಕ್ಕಿಟ್ಟೆ, ಅಷ್ಟೆ. ನಾನು ಕ್ಷಮಾಪಣೆ ಕೇಳುವ ಮಾತೇ ಇಲ್ಲ ಅಂತ ಪುನೀತ್ ರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನಿರ್ಮಾಪಕ ಎಚ್.ಡಿ.ಕುಮಾರ ಸ್ವಾಮಿ ಚಿತ್ರಮಂದಿರದ ವಿಷಯದಲ್ಲಿ ರಾಜ್ ಕುಟುಂಬದ ಮೇಲೆ ಕೆಂಡ ಕಾರಿದ್ದರು. ಈಗ ಪತ್ರಕರ್ತರ ಪಾಳಿ. ಒಟ್ಟಿನಲ್ಲಿ ರಾಜ್ ಕುಟುಂಬದ ಗ್ರಹಚಾರ ಚೆನ್ನಾಗಿದ್ದಂತಿಲ್ಲ !
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











