ನಟಿ ತಾರಾ ಸುರಿಸಿದ ಗಂಗಾ ಕಾವೇರಿ ಪ್ರವಾಹ
ಹಲವಾರು ವಿಷಯಕ್ಕೆ ಕುತೂಹಲ ಕೆರಳಿಸುತ್ತಿರುವ 'ಗಂಗಾ ಕಾವೇರಿ" ಚಿತ್ರ ಈಗ ಮತ್ತೊಂದು ವಿವಾದದ ಸುಳಿಯಲ್ಲಿದೆ. ನಟಿ ತಾರಾ ಹಾಗೂ ನಿರ್ದೇಶಕ ವಿಷ್ಣುಕಾಂತ್ ಅವರ ನಡುವಿನ ವೈಮನಸ್ಯ ಪತ್ರಿಕಾಗೋಷ್ಠಿಯಲ್ಲಿ ನಟಿ ತಾರಾ ಕಣ್ಣಲ್ಲಿ ನೀರಾಗಿ ಹರಿದಿದೆ.
ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆಸಿ ಯಶಸ್ವಿಯಾಗಿ ನಗರಕ್ಕೆ ಮರಳಿದ ಗಂಗಾ ಕಾವೇರಿ ಚಿತ್ರತಂಡ, ಬೌರಿಂಗ್ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ನಟಿ ತಾರಾ "'ನಾನು ನಿರ್ದೇಶಕ ವಿಷ್ಣುಕಾಂತ್ ಅವರ ಕೆಲಸವನ್ನು ಮೆಚ್ಚುತ್ತೇನೆ. ಆದರೆ ಅವರು ನನ್ನ ಹಾಗೂವೇಣುವಿನ ಮೇಲೆ ವೃಥಾ ಆರೋಪ ಮಾಡುತ್ತಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ನಿರ್ದೇಶಕರನ್ನು ಬದಲಾಯಿಸಿ ಎಂದು ನಾನೆಂದು ಪಿತೂರಿ ನಡೆಸಿಲ್ಲ. ಅದು ನಿರ್ಮಾಪಕರಿಗೆ ಬಿಟ್ಟ ವಿಚಾರ.
ಇದಲ್ಲದೆ ನಾನು ಚಿತ್ರೀಕರಣದ ವೇಳೆಯಲ್ಲಿ ಮದ್ಯ ಪೂರೈಸುತ್ತಿದ್ದೆ ಎಂದೆಲ್ಲಾ ಅವರು ಆಪ್ತರ ಸಂಗಡ ಹೇಳಿರುವುದು ತಿಳಿದುಬಂದಿದೆ. ಇದು ಅಸಹನೀಯ ವಿಚಾರವಾಗಿದೆ. ಎಸಿ ಕಾರು ಬೇಕು ಅದು ಬೇಕು ಇದು ಬೇಕು ಎಂದು ನಾನೆಂದು ನಿರ್ದೇಶಕರನ್ನು ಕೇಳಿಲ್ಲ . ಕೇಳುವಂತಿದ್ದರೆ ನಿರ್ಮಾಪಕರನ್ನು ಕೇಳುತ್ತೇನೆ. ನಿರ್ದೇಶಕರ ಬಳಿಗೆ ಹೋಗುವ ಪ್ರಮೇಯವೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ವಿಷ್ಣುಕಾಂತ್ ಅವರು ಯಾಕೆ ಈ ರೀತಿ ಆರೋಪ ಮಾಡುತ್ತಿದ್ದಾರೆಂದು ಗೊತ್ತಿಲ್ಲ "ಎಂದು ತಾರಾ ತಮ್ಮ ಗೋಳು ತೋಡಿಕೊಂಡರು.
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಡಾ. ಅಂಬೇಡ್ಕರ್ ಚಿತ್ರ ಖ್ಯಾತಿಯ ನಿರ್ದೇಶಕ ವಿಷ್ಣುಕಾಂತ್ " ಮದ್ಯ ಪೂರೈಕೆ ಬಗ್ಗೆ ನಾನು ಹೇಳಿಲ್ಲ .ಆದರೆ ತಾರಾ ಅವರು ಎ ಸಿ ಕಾರಿನ ಬೇಡಿಕೆ ಸಲ್ಲಿಸಿದ್ದು ನಿಜ ಎಂದರು. ಪ್ರತಿಕಾಗೋಷ್ಠಿಯಲ್ಲಿ ಇಬ್ಬರ ನಡುವೆ ವಾಗ್ಯುದ್ಧ ನಡೆದು, ತಾರಾ ಅವರು ಅಳುತ್ತಾ ಹೊರ ನಡೆದ ಘಟನೆ ಜರುಗಿತು.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











