ಮೋನಾಲ್ ಆತ್ಮಹತ್ಯೆಯ ಹಿಂದೆ....
ನನ್ನ ತಂಗಿ ಲವ್ವಲ್ಲಿ ಬಿದ್ದಿದ್ದಳು. ಆಕೆಯ ಆತ್ಮಹತ್ಯೆಗೆ ಕಾರಣ ಅವಳ ಪ್ರೇಮಿ ಅನ್ನುವುದರಲ್ಲಿ ಅನುಮಾನವೇ ಬೇಡ!
ಸಿಮ್ರಾನ್ ಕ್ರುದ್ಧರಾಗಿದ್ದರು. ತಂಗಿ ಮೋನಾಲ್ ಸಾವಿನ ಹೊಡೆತದಿಂದ ಅವರಿನ್ನೂ ಚೇತರಿಸಿಕೊಂಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲೇಬೇಕೆಂಬ ಹಠ ಅವರ ಮೊಗದಲ್ಲಿ ಮನೆ ಮಾಡಿತ್ತು. ಜೊತೆಗೆ ಇತ್ತೀಚೆಗೆ ಸುದ್ದಿಗಾರರನ್ನು ಅವಾಯ್ಡ್ ಮಾಡುತ್ತಿದ್ದ ಸಿಮ್ರಾನ್ ಖುದ್ದು ಸುದ್ದಿಗೋಷ್ಠಿ ಕರೆದದ್ದು ವಿಶೇಷ.
ತರಾತುರಿಯಲ್ಲಿದ್ದಂತೆ ಕಂಡುಬಂದ ಸಿಮ್ರಾನ್ ಹೇಳಿದ್ದಿಷ್ಟು- ಮೋನಾಲ್ ಆತ್ಮಹತ್ಯೆ ಮಾಡಿಕೊಳ್ಳಲು ಡ್ಯಾನ್ಸರ್ ಪ್ರಸನ್ನನೇ ಕಾರಣ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಮೋನಾಲ್ಗೆ ಗಿಣಿಗೆ ಹೇಳಿದಂತೆ ಹೇಳಿದರೂ, ನಮ್ಮ ಮಾತು ಕೇಳಲಿಲ್ಲ. ಪ್ರಸನ್ನನನ್ನು ತುಂಬಾ ಪ್ರೀತಿಸಿದಳು. ಇಬ್ಬರೂ ಒಟ್ಟಿಗೆ ವಾಸ ಮಾಡಿದ್ದೂ ಉಂಟು. ಆದರೆ ಇದ್ದಕ್ಕಿದ್ದಂತೆ ಅವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಒಡಕಾಗಿದೆ. ಆಮೇಲೆ ಮೋನಾಲ್, ಪ್ರಸನ್ನನನ್ನು ಧಿಕ್ಕರಿಸಿದ್ದಾಳೆ. ಕೊನೆಗೆ ತನ್ನನ್ನು ತಾನೇ ಕೊಂದುಕೊಂಡಿದ್ದಾಳೆ.
ನಟಿ ಮುಮ್ತಾಜ್ ಹಾಗೂ ಆಕೆಯ ಮೇನೇಜರ್ ಮೇಲೂ ಗುಮಾನಿಯಿದೆ. ಮೋನಾಲ್ ಆತ್ಮಹತ್ಯೆ ಸುದ್ದಿ ಕೇಳಿದ ತಕ್ಷಣ ಮೊದಲು ಫ್ಲ್ಯಾಟ್ಗೆ ಓಡೋಡಿ ಬಂದದ್ದು ಈ ಇಬ್ಬರೇ. ಸಾಲದ್ದಕ್ಕೆ, ಇವರು ಮೋನಾಲ್ಳ 50 ಸಾವಿರ ರುಪಾಯಿ ಬೆಲೆಯ ಮೇಕಪ್ ಕಿಟ್ಟನ್ನು ಕದ್ದಿದ್ದರು ಎಂಬ ವಿಷಯ ನನ್ನ ಕಿವಿಗೆ ಬಿದ್ದಿತ್ತು.
ಕ್ರಾಸ್ಕ್ವಶ್ಚನ್ಗಳಿಗೆ ಮುಖ ಕೊಡದೆ, ಇಷ್ಟನ್ನೂ ಪಟಪಟನೆ ಹೇಳಿ ಸಿಮ್ರಾನ್ ಹೊರಟೇಬಿಟ್ಟರು. ಪೊಲೀಸರಿಗೆ ಈ ವಿಷಯಗಳಿಂದ ಸಿಕ್ಕ ಮಾಹಿತಿಗಿಂತ ಗೊಂದಲಗಳೇ ಹೆಚ್ಚು.
ಅಷ್ಟಕ್ಕೂ ಸಿಮ್ರಾನ್ ಪೊಲೀಸರಿಗೆ ಸಂಬಂಧಪಟ್ಟ ವಿಷಯಕ್ಕೆ ಸುದ್ದಿಗೋಷ್ಠಿ ಕರೆಯುವ ಅಗತ್ಯವಾದರೂ ಏನಿತ್ತು? ತನಗೆ ಗೊತ್ತಿರುವ ವಿಷಯವನ್ನು ನೇರವಾಗಿ ಪೊಲೀಸರಿಗೇ ಹೇಳಬಹುದಿತ್ತಲ್ಲ ? ಮುಮ್ತಾಜ್ಗೂ ಸಿಮ್ರಾನ್ಗೂ ಆಗುವುದಿಲ್ಲವೇ?- ಹೀಗೆ ಪುಂಖಾನುಪುಂಖ ಪ್ರಶ್ನೆಗಳೆದ್ದಿವೆ.
ಸಿಮ್ರಾನ್ ಮಾತುಗಳೆಲ್ಲಾ ಕೇವಲ ಮೋನಾಲ್ ಆತ್ಮಹತ್ಯೆ ವಿಷಯಗಳ ಸುತ್ತಲೇ ಗಿರಕಿ ಹೊಡೆದವು. ಕಮಲ ಹಾಸನ್ ಜೊತೆಗಿನ ಅಫೇರ್ ಬಗ್ಗೆ ಯಾರೋ ಸುದ್ದಿಗಾರ ಕೇಳಿದ ಪ್ರಶ್ನೆ ಸಿಮ್ರಾನ್ ಕಿವಿಗೆ ಬೀಳಲೇ ಇಲ್ಲ. ಈ ವಿಷಯದಲ್ಲಿ ಅವರದ್ದು ಜಾಣ ಕಿವುಡು!


Click it and Unblock the Notifications











