ಜೋಗುಳ ಹಾಡಹೋಗಿ ಚಿವುಟಿಕೊಂಡವರು
ಜಗ್ಗೇಶ್ ಜತೆ ನಟಿಸಿದಾಗ ಚಪ್ಪಲಿ ಕೈಗೆತ್ತಿಕೊಂಡಿದ್ದ ಹುಡುಗಿ ವಿಜಯಲಕ್ಷ್ಮಿ ಬಿ.ಸಿ.ಪಾಟೀಲರ ಮುಖದ ಮೇಲೆ ಸ್ಕಿೃಪ್ಟ್ ಎಸೆದು ಹೋದಳಂತೆ ಎಂಬ ಸುದ್ದಿ ಗಾಂಧಿನಗರವೆಂಬ ಕೊಪ್ಪರಿಗೆಯಲ್ಲಿ ಕುದಿಯುತ್ತಿದೆ.
‘ಬಾರದೆ ಬಾರದೆ ಮತ್ತೆ ಕನ್ನಡ ಸಿನಿಮಾಗೆ ಬಂದ ಕನ್ನಡತಿ ವಿಜಯಲಕ್ಷ್ಮಿ ಹಿಂಗ್ಯಾಕೆ’ ಅಂತ ಖುದ್ದು ವಿಜಯಲಕ್ಷ್ಮಿಯವರನ್ನು ಕೇಳಲಾಗಿ, ಅವರು ಇಂತೆಂದರು...
‘ಜೋಗುಳ ಸಿನಿಮಾದ ಕೊನೆ ದಿನದ ಶೂಟಿಂಗ್ ನಡೀತಿತ್ತು. ಮಹೇಂದರ್ ಆವತ್ತು ಶೂಟಿಂಗ್ ಕ್ಯಾನ್ಸಲ್ ಆಗಿದೆ ಅಂತ ಹೇಳಿದ್ದರು. ಇದ್ದಕ್ಕಿದ್ದ ಹಾಗೆ ಬಂದ ಇಬ್ಬರು ಕುಡುಕ ಮೇನೇಜರ್ಗಳು ಶೂಟಿಂಗ್ಗೆ ಕರೆದರು. ಹರೀಬರಿಯಲ್ಲಿ ರೆಡಿಯಾಗಿ ಹೊರಟೆ. ಆ ಮೇನೇಜರ್ಗಳು ಅದಕ್ಕೂ ಮುಂಚೆ ಸಾಕಷ್ಟು ಸಲ ಕೆಟ್ಟದಾಗಿ ವರ್ತಿಸಿದ್ದರು. ಅದರ ಬಗ್ಗೆ ಕೊಟ್ಟ ದೂರನ್ನು ಪಾಟೀಲ್ ಉಪೇಕ್ಷಿಸಿದ್ದರು. ಡೈಲಾಗ್ಗಳನ್ನು ಮೊದಲೇ ಓದಿಕೊಂಡಿರಲಿಲ್ಲವಾದ್ದರಿಂದ ಒಂದು ವಾಕ್ಯ ತಪ್ಪಿದೆ. ಅದಕ್ಕೇ ಪಾಟೀಲ್, ಅವಳಿಗೆ ಸರಿಯಾಗಿ ಡೈಲಾಗ್ ಹೇಳೋಕೆ ಹೇಳು ಅಂದರು. ಅಷ್ಟು ಜನರ ಮುಂದೆ ಏಕ ವಚನದಲ್ಲಿ ಮಾತಾಡಿಸಿದ್ದಕ್ಕೆ ಮೈಯೆಲ್ಲಾ ಉರಿದುಹೋಯಿತು. ಹಾಗೆ ಮಾತಾಡಿದ್ದು ಸರಿಯಾ ಅಂತ ಕೇಳಿದರೆ, ನೀನು ಅದನ್ನೆಲ್ಲಾ ಕೇಳಬಾರದು. ನಾನು ನಿರ್ಮಾಪಕ ಅಂತ ಕೆಟ್ಟದಾಗಿ ಮಾತಾಡಿದರು. ನಾನು ಸ್ಕಿೃಪ್ಟೂ ಎಸೀಲಿಲ್ಲ... ಏನೂ ಎಸೀಲಿಲ್ಲ. ಈಗ ದುಡ್ಡು ಕೊಡೋಕೆ ಸತಾಯಿಸುತ್ತಿದ್ದಾರೆ. ಥೂ...’
ವಿಜಯಲಕ್ಷ್ಮಿ ಹೀಗಂತಾರಲ್ಲ ಪಾಟೀಲರೆ ಅಂದರೆ, ‘ನೀನ್ಯಾರೋ ಕೇಳೋಕೆ ಅಂತ ನನ್ನೇ ದಬಾಯಿಸುವ ಆಯಮ್ಮನಿಗೆ ಹೆಂಗೆ ಆಗಲೇ ಕಾಸು ಕೊಡುವ ಮನಸ್ಸು ಬರುತ್ತೆ ಹೇಳಿ’ ಅಂತ ಪಾಟೀಲರು ಕೌರವನ ಧಾಟಿಯಲ್ಲೇ ಕೆಂಡ ಕಾರಿದರು.
ತನ್ನನ್ನು ‘ಕಿರಿಕ್ ವಿಜಯಲಕ್ಷ್ಮಿ’ ಎಂದು ಕರೆಯುವುದು ವಿಜಯಲಕ್ಷ್ಮಿಗೆ ಗೊತ್ತಾಗಿದೆ. ಕಟ್ ಅಂಡ್ ರೈಟಾಗಿ ತಾನು ಮಾತಾಡುವುದರಿಂದ ತನ್ನ ಮೇಲೆ ಹೀಗೆ ಗೂಬೆ ಕೂರಿಸಿದ್ದಾರೆ ಅಂತ ಬೇಜಾರು ಮಾಡಿಕೊಳ್ಳುವ ವಿಜಯಲಕ್ಷ್ಮಿ ಕೈಲಿ ಮೂರು ತಮಿಳು ಹಾಗೂ ಒಂದೊಂದು ತೆಲುಗು ಹಾಗೂ ಮಲೆಯಾಳಿ ಚಿತ್ರಗಳಿವೆ. ಇನ್ನು ಮುಂದೆ ಸಭ್ಯರು ಕರೆದರೆ ಮಾತ್ರ ಕನ್ನಡ ಸಿನಿಮಾದಲ್ಲಿ ಆ್ಯಕ್ಟ್ ಮಾಡೋದು ಅಂತ ಸಂಕಲ್ಪ ಮಾಡಿರುವ ವಿಜಯಲಕ್ಷ್ಮಿಗೆ ಪಾಟೀಲರು ಕೊಡಬೇಕಿರುವ ಬಾಕಿ ಹಣ 95 ಸಾವಿರ ರುಪಾಯಿ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











