ಕವಿತಾ ಕೃಷ್ಣಮೂರ್ತಿ ಪತಿ ವಿರುದ್ಧ ಅತ್ಯಾಚಾರ ಪ್ರಕರಣ
ಜನಪ್ರಿಯ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರ ಪತಿ ಹಾಗೂ ಖ್ಯಾತ ಪಿಟೀಲು ವಾದಕ ಎಲ್ ಸುಬ್ರಹ್ಮಣ್ಯಂ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿದೆ. ಮನೆಗೆಲಸದ ಹುಡುಗಿ ಭಾಗ್ಯ ಮೇಲೆ ಸುಬ್ರಹ್ಮಣ್ಯಂ ಬಲತ್ಕಾರ ಮಾಡಲು ಯತ್ನಿಸಿದ ಆರೋಪ ಕೇಳಿಬಂದಿದೆ.
ಮನೆಗೆಲಸದ ಹುಡುಗಿ ಭಾಗ್ಯ ಮೇಲೆ ಕವಿತಾ ಕೃಷ್ಣಮೂರ್ತಿ ದಂಪತಿಗಳು ಕಳ್ಳತನದ ದೂರು ನೀಡಿದಾಗ ಆಕೆ ತಮ್ಮ ಮೇಲೆ ಸುಬ್ರಹ್ಮಣ್ಯಂ ಅವರು ಅತ್ಯಾಚಾರಕ್ಕೆ ಯತ್ನಿಸಿದರು ಎಂದು ದೂರಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಮನೆಗೆಲಸ ಹುಡುಗಿ ಭಾಗ್ಯ ವಿರುದ್ಧ ಎಲ್ ಸುಬ್ರಹ್ಮಣ್ಯಂ ಅವರು ಕಳ್ಳತನ ಮಾಡಿರುವುದಾಗಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಗದು ಹಾಗೂ ಬೆಲೆಬಾಳುವ ವಸ್ತುಗಳು ಸೇರಿದಂತೆ ಒಟ್ಟು ರು.6 ಲಕ್ಷ ಕಳ್ಳತನ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಭಾಗ್ಯ ಎಂಬ ಹುಡುಗಿ ದಲಿತ ಸಂಘಟನೆಯ ಮೊರೆ ಹೋಗಿದ್ದರು. ಈ ಹುಡುಗಿಗೆ ಸುಬ್ರಹ್ಮಣ್ಯಂ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದಲಿತ ಸಂಘಟನೆ ದೂರು ಸಲ್ಲಿಸಿದೆ.
ಆದರೆ ಈ ಆರೋಪವನ್ನು ಕವಿತಾ ಕೃಷ್ಣಮೂರ್ತಿ ಅವರು ಅಲ್ಲಗಳೆದಿದ್ದಾರೆ. ತಮ್ಮ ಪತಿ ಸರಳ ಹಾಗೂ ಆಧ್ಯಾತ್ಮಿಕ ಸ್ವಭಾವದವರು. ಅವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ದೂರು ಸತ್ಯಕ್ಕೆ ದೂರವಾದ ಮಾತು. ನನ್ನ ಪರ್ಸ್ ಹಾಗೂ ನನ್ನ ಗಂಡನ ಕಪಾಟಿನಲ್ಲಿಟ್ಟಿದ್ದ ಹಣ ಸೇರಿದಂತೆ ನನ್ನ ಮಗಳ ಚಿನ್ನದ ಸರವನ್ನು ಭಾಗ್ಯ ಕದ್ದಿದ್ದಾರೆ.
ಈ ಸಂಬಂಧ ತಮ್ಮ ಪತಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಈ ಕೇಸಿನಿಂದ ಬಚಾವಾಗಲು ತಮ್ಮ ಗಂಡನ ಮೇಲೆ ಅತ್ಯಾಚಾರ ಯತ್ನ ಆರೋಪ ಹೊರಿಸುತ್ತಿದ್ದಾರೆ ಎಂದು ಕವಿತಾ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಎಲ್ ಸುಬ್ರಹ್ಮಣ್ಯಂ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಸರ್ಕಾರೇತರ ಸಂಸ್ಥೆ (ದಲಿತ ಸಂಘ) ದೂರು ಸಲ್ಲಿಸಿದೆ. ಆದರೆ ಭಾಗ್ಯ ಎಂಬ ಹುಡುಗಿ ಯಾವುದೇ ದೂರು ನೀಡಿಲ್ಲ. ಕಳ್ಳತನದ ದೂರು ಹಾಗೂ ಲೈಂಗಿಕ ಅತ್ಯಾಚಾರದ ಪ್ರಕರಣದ ಸತ್ಯಾಸತ್ಯತೆಗಳನ್ನು ತಿಳಿಯಲು ಬೆಂಗಳೂರು ಪೊಲೀಸ್ ಕಮೀಷನರ್ ಶಂಕರ್ ಬಿದರಿ ಅವರು ತನಿಖೆಗೆ ಆದೇಶಿಸಿದ್ದಾರೆ.


Click it and Unblock the Notifications











