ದುನಿಯಾ ವಿಜಯ್ ಚಿತ್ರದಿಂದ ಯೋಗರಾಜ್ ಭಟ್ ಔಟ್
ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ' ಚಿತ್ರ ಏನಾಯಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಪುನೀತ್ ಅಂತಹ ಬಾಕ್ಸಾಫೀಸ್ ಕಿಂಗ್ ಇಟ್ಟುಕೊಂಡು ಮಾಮೂಲಿ ಸಿನಿಮಾ ಮಾಡಿದರು ಎಂಬ ಘನಂದಾರಿ ಆರೋಪ ಭಟ್ಟರ ಮೇಲಿದೆ. ಈ ಮಾತುಗಳೇ ಇವರ ಪಾಲಿಗೆ ಮುಳುವಾಗಿವೆ.
ಜಯಣ್ಣ ಮತ್ತು ಭೋಗೇಂದ್ರ ಇಬ್ಬರೂ ಸೇರಿ ಪರಮಾತ್ಮ ಚಿತ್ರ ನಿರ್ಮಿಸಿದ್ದರು. ತಮ್ಮ ಇನ್ನೊಂದು ಚಿತ್ರವನ್ನೂ ಭಟ್ಟರ ಹೆಗಲಿಗೆ ಹೊರಿಸಲು ಇವರು ತೀರ್ಮಾನಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಆ ಚಿತ್ರ ಭಟ್ಟರ ಕೈತಪ್ಪಿದೆ. ಎಲ್ಲವೂ ಸರಿಹೋಗಿದ್ದರೆ, ದುನಿಯಾ ವಿಜಯ್ ನಾಯಕ ನಟನಾಗಿರುವ ಆ ಚಿತ್ರಕ್ಕೆ ಭಟ್ಟರು ಆಕ್ಷನ್ ಕಟ್ ಹೇಳಬೇಕಾಗಿತ್ತು.
ಆದರೆ ಸ್ವತಃ ದುನಿಯಾ ವಿಜಯ್ ಅವರೇ ತಮ್ಮ ಚಿತ್ರವನ್ನು ಭಟ್ ನಿರ್ದೇಶಿಸುವುದು ಬೇಡ ಎಂದಿದ್ದಾರಂತೆ. ನನ್ನಂಥಹ ಮಾಸ್ ಹೀರೋಗೆ ಯೋಗರಾಜ್ ಭಟ್ ಸಿನಿಮಾ ಮಾಡುವುದು ಕಷ್ಟ. ಪ್ಲೀಸ್ ಅವರಿಂದ ಸಿನಿಮಾ ಮಾಡಿಸಬೇಡಿ ಎಂದಿದ್ದಾರೆ ಎಂಬ ವದಂತಿ ಗಾಂಧಿನಗರದಲ್ಲಿ ಹಬ್ಬಿದೆ. ಹಾಗಾಗಿ ದುನಿಯಾ ವಿಜಯ್ ಹೊಸ ಚಿತ್ರದ ಜುಟ್ಟು ರಂಗನಾಥ್ ಕೈಗೆ ಹೋಗಿದೆ.
ಈ ಹಿಂದೆ ದುನಿಯಾ ವಿಜಯ್ ಜೊತೆ ರಂಗನಾಥ್ 'ಕಂಠೀರವ' ಚಿತ್ರವನ್ನು ಮಾಡಿದ್ದರು. ರಾಮು ನಿರ್ಮಾಣದ ಆ ಚಿತ್ರ ಮಕಾಡೆ ಮಲಗಿದ್ದು ಹಳೆಯ ಕತೆ. ಆದರೂ ವಿಜಯ್ ಚಿತ್ರ ಭಟ್ಟರ ಕೈತಪ್ಪಿದ್ಯಾಕೆ? ಭಟ್ಟರಿಗೆ ಒಬ್ಬ ಮಾಮೂಲಿ ನಟನನ್ನು ಇಟ್ಟುಕೊಂಡು ಚಿತ್ರ ಗೆಲ್ಲಿಸುವುದು ಗೊತ್ತೇ ಹೊರತು, ಸ್ಟಾರ್ ನಟನನ್ನು ಗೆಲ್ಲಿಸುವ ತಾಕತ್ತು ಅವರಿಗಿಲ್ಲ ಎಂಬುದು ಗಾಂಧಿನಗರದ ಸದ್ಯದ ಟಾಕ್. (ಏಜೆನ್ಸೀಸ್)


Click it and Unblock the Notifications











