ಥಿಯೇಟರ್ ಮಾಲೀಕರ ತಿರುಗೇಟು : ಬಾಬು ಚಿತ್ರಗಳಿಗೆ ಬಹಿಷ್ಕಾರ
ಬೆಂಗಳೂರು : ಚಿತ್ರ ಪ್ರದರ್ಶಕರು ಹಾಗೂ ಚಿತ್ರಮಂದಿರ ಮಾಲೀಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಕರ್ನಾಟಕ ಚಿತ್ರಮಂದಿರಗಳ ಮಾಲೀಕರ ಸಂಘವು ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ಬಾಬು ಚಿತ್ರಗಳನ್ನು 5 ವರ್ಷಗಳ ಕಾಲ ಬಹಿಷ್ಕರಿಸಿದೆ.
ಬಹಿಷ್ಕಾರದಿಂದಾಗಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ, ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿರುವ ‘ಕಾಂಚನಗಂಗಾ’ ಸಿನಿಮಾ ಬಿಡುಗಡೆಗೆ ತೊಂದರೆಯಾಗಲಿದೆ. ಬಾಬು ಅವರ ಮಗ ಆದಿತ್ಯ ಅವರಿಗಾಗಿ ನಿರ್ಮಿಸಲಿರುವ ‘ಆದಿ’ ಹಾಗೂ ‘ಲವ್’ ಸಿನಿಮಾದ ತೆಲುಗು ಅವತರಣಿಕೆಗೂ ತೊಂದರೆಯಾಗುವ ನಿರಿಕ್ಷೆಯಿದೆ.
ಬಾಬು ಅವರ ಮೇಲಿನ ಬಹಿಷ್ಕಾರ 2004 ರ ಸೆ.8 ರಿಂದ ಆರಂಭಗೊಂಡು 2009 ರ ಸೆ.8 ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಚಿತ್ರಮಂದಿರಗಳ ಮಾಲೀಕರ ಸಂಘದ ಪ್ರಕಟನೆ ತಿಳಿಸಿದೆ.
ಈ ಬಹಿಷ್ಕಾರವು ಬಾಬು ಅವರು ಕನ್ನಡ ಸಿನಿಮಾಗಳಿಗೆ ಮಾತ್ರ ಸೀಮಿತವಲ್ಲ. ಅವರ ಇತರ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುತ್ತದೆ. ಬಾಬು ಆವರು ಯಾವುದೇ ರೀತಿಯಲ್ಲಿ ಭಾಗಿಯಾಗಿರುವ(ಸಲಹೆ, ನಿರ್ಮಾಣ, ನಿರ್ದೇಶನ, ಸಹಕಾರ, ಆರ್ಥಿಕ ಪಾಲುದಾರಿಕೆ) ಸಿನಿಮಾಗಳನ್ನು ಬಹಿಷ್ಕರಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ರಾಜೇಂದ್ರಸಿಂಗ್ಅವರಿಗೆ ಈ ರೀತಿಯ ಬಹಿಷ್ಕಾರ ಹಾಕುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ನಾಲ್ಕು ವರ್ಷಗಳ ಹಿಂದೆ ಅವರು ನಿರ್ಮಿಸಿದ್ದ ಭಾರತ್2002 ಸಿನಿಮಾವನ್ನು ತೆಲುಗುನಿಂದ ಕನ್ನಡಕ್ಕೆ ಡಬ್ಮಾಡಲಾಗಿದೆ ಎಂದು ಆರೋಪಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಬಹಿಷ್ಕಾರ ವಿಧಿಸಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications