ಅನ್ನದಾತರಾದ ನಿರ್ಮಾಪಕರಿಗೆ ಕಿರಿಕ್ ಬೇಡ -ದ್ವಾರಕೀಶ್
ಬೆಂಗಳೂರು : ಡಾ.ರಾಜ್ಕುಮಾರ್ರಂತಹ ಹಿರಿಯ ನಟರೇ, ನಿರ್ಮಾಪಕರನ್ನು ಅನ್ನದಾತ ಎನ್ನುತ್ತಿದ್ದರು. ಆದರೆ ಇಂದಿನ ಕಲಾವಿದರು ಮತ್ತು ಕಾರ್ಮಿಕರು ನಿರ್ಮಾಪಕರಿಗೆ ಬಹಿಷ್ಕಾರ ಹಾಕುತ್ತಾರೆ ಎಂದು ನಟ ಮತ್ತು ನಿರ್ಮಾಪಕ ದ್ವಾರಕೀಶ್ ಹೇಳಿದರು.
ಸದ್ಯದ ಸಿನಿಮಾ ಬಿಕ್ಕಟ್ಟಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾರ್ಮಿಕರ ಒಕ್ಕೂಟ ಧೋರಣೆ ಬದಲಿಸಬೇಕು. ನಿರ್ಮಾಪಕರಿಲ್ಲದಿದ್ದರೆ, ಚಿತ್ರೋದ್ಯಮವೇ ಇಲ್ಲ. ಸಮಸ್ಯೆಗಳಿದ್ದರೆ ಕೂತು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜ.15ರ ನಂತರ ತಮ್ಮ ಹೊಸ ಚಿತ್ರ ಆಲದ ಮರ ಆರಂಭಿಸುವುದಾಗಿ ಪ್ರಕಟಿಸಿದ ದ್ವಾರಕೀಶ್, ಈ ಚಿತ್ರದಲ್ಲಿ ಪಾಲ್ಗೊಳ್ಳುವ ಕಲಾವಿದರು ಮತ್ತು ಕಾರ್ಮಿಕರು ರಾಜ್ಕುಮಾರ್ ಸಮಾಧಿಯ ಮುಂದೆ ಪ್ರಮಾಣ ಸ್ವೀಕರಿಸಬೇಕು. ಅಂತಹವರಿಗೆ ಮಾತ್ರ ಆದ್ಯತೆ ಎಂದು ಹೇಳಿದರು.
ರೀಮೇಕ್ ಮತ್ತು ಡಬ್ಬಿಂಗ್ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ಒಳ್ಳೆ ಚಿತ್ರಗಳು ರೀಮೇಕ್ ಆದರೆ ತಪ್ಪೇನಿಲ್ಲ. ನಾಯಕ ನಟರು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ದ್ವಾರಕೀಶ್ ಅಭಿಪ್ರಾಯಪಟ್ಟರು.
ಮಧ್ಯ ಪ್ರವೇಶ : ಕಾರ್ಮಿಕರು ಮತ್ತು ನಿರ್ಮಾಪಕರ ಬಿಕ್ಕಟ್ಟು ಬಗೆಹರಿಸಲು ಮುಂದಾಗುವುದಾಗಿ ನಟ ಮತ್ತು ಕೇಂದ್ರ ಸಚಿವ ಅಂಬರೀಷ್ ಭರವಸೆ ನೀಡಿದ್ದಾರೆ.
ರಾಜ್ ಸಮಾಧಿ ಮುಂದೆ ಧರಣಿ : ನಿರ್ಮಾಪಕರು ಮತ್ತು ವಾಣಿಜ್ಯ ಮಂಡಳಿ ಧೋರಣೆ ವಿರೋಧಿಸಿ ನಟ ಡಾ.ರಾಜ್ಕುಮಾರ್ ಸಮಾಧಿ ಮುಂದೆ ಕಾರ್ಮಿಕರು ಮತ್ತು ಕಲಾವಿದರು ನ.12ರಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ನಟ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











