ಪತ್ನಿಪೀಡಕ ದರ್ಶನನನ್ನು ತರಾಟೆಗೆ ತೆಗೆದುಕೊಂಡ ರಮೇಶ್

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯಿಸಿದ ರೀತಿ ಇದು. ನಗರದ ವಿಕ್ರಂ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 'ಉತ್ತಮ ಶಿಕ್ಷಕರು' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ದರ್ಶನ್ ಉತ್ತಮ ನಟ. ಅದಕ್ಕಿಂತ ಹೆಚ್ಚಾಗಿ ಒಬ್ಬ ಕಲಾವಿದ. ನಟನೆ, ನೃತ್ಯ, ಫೈಟಿಂಗ್ ಎಲ್ಲದರಲ್ಲೂ 'ಸೈ' ಎನ್ನಿಸಿಕೊಂಡವರು. ಅದರಲ್ಲಿ ಅನುಮಾನವೇ ಇಲ್ಲ. ಪ್ರತಿ ಹಂತದಲ್ಲೂ ಇಷ್ಟವಾಗುತ್ತಿದ್ದರು. ಆದರೆ ಪತ್ನಿ ಮೇಲೆ ಕೈ ಮಾಡಬಾರದಿತ್ತು. ಇದು ತಪ್ಪು. ಈ ವಿಚಾರ ನನಗೂ ಬೇಸರ ತಂದಿದೆ' ಎಂದು ಹೇಳಿದರು.
'ಸಾಮಾನ್ಯರಿಗಿಂತ ನಮ್ಮ ಜವಾಬ್ದಾರಿ ಸ್ವಲ್ಪ ಹೆಚ್ಚಿರುತ್ತದೆ. ಪ್ರತಿಯೊಬ್ಬರೂ ನಮ್ಮನ್ನು ನೋಡುತ್ತಿರುತ್ತಾರೆ, ಅನುಕರಿಸುತ್ತಾರೆ. ಈ ವಿಚಾರ ಸದಾ ನಮ್ಮ ಎಚ್ಚರದಲ್ಲಿರಬೇಕು. ನಾವು ತಪ್ಪಿದರೆ, ಅವರೂ ತಪ್ಪುತ್ತಾರೆ. ನಾವು ನಡೆಯುವ ಶೈಲಿ, ಉಡುಗೆ-ತೊಡುಗೆ, ಹೇರ್ ಸ್ಟೈಲ್ ಹೀಗೆ ಎಲ್ಲವನ್ನೂ ಅನುಕರಿಸುವ ಅಭಿಮಾನಿಗಳಿರುತ್ತಾರೆ. ಹೊಡೆದುದನ್ನೂ ಅನುಕರಿಸಿದರೇ?' ಎಂದು ಕಿವಿಮಾತು ಹೇಳಿದರು.
ಹಾಗಾಗಿ, ಪ್ರತಿ ಹಂತದಲ್ಲೂ ನಾವು ಎಚ್ಚರ ವಹಿಸಬೇಕಾಗುತ್ತದೆ. ದರ್ಶನ್ ಪ್ರಕರಣ ಕೆಟ್ಟ ಗಳಿಗೆಯಲ್ಲಿ ಆಗಿದೆ. ಬಹುಶಃ ಅವರಿಗೂ ಈಗ ಮನವರಿಕೆ ಆಗಿರುತ್ತದೆ. ಆದರೆ ಯಾರೇ ಆಗಲಿ, ಕೋಪ ಬಂದಾಗ ನಮ್ಮನ್ನು ನಾವು ನಿಗ್ರಹಿಸಿಕೊಳ್ಳುವ ಶಕ್ತಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅನಾಹುತ ಆಗುತ್ತದೆ. ನನ್ನ ವಿಚಾರಕ್ಕೆ ಬಂದರೆ, ನಾನು ಶಾಂತವಾಗಿರುವುದೇ ಹೆಚ್ಚು' ಎಂದು ನಗೆಯಾಡಿದರು.


Click it and Unblock the Notifications











