ತಡರಾತ್ರಿ 'ರಕ್ತಚರಿತ್ರ' ನೋಡಿದ ಗೃಹಸಚಿವ, ಮೇಯರ್!
ಕೋರಮಂಗಲದ ಪಿವಿಆರ್ ಸಿನಿಮಾ ಹಾಲ್ ನಲ್ಲಿ ಗೃಹ ಸಚಿವ ಆರ್ ಅಶೋಕ್ ಮತ್ತು ಬೆಂಗಳೂರು ಮೇಯರ್ ಎಸ್ ಕೆ ನಟರಾಜ್ ತೆಲುಗಿನ 'ರಕ್ತ ಚರಿತ್ರ' ಚಿತ್ರ ವೀಕ್ಷಿಸಿರುವ ಬಗ್ಗೆ ಅಪಸ್ವರಗಳು ಮಿಡಿದಿವೆ. ಚಿತ್ರಮಂದಿರಕ್ಕೆ ಗೃಹಸಚಿವರು ಹಾಗೂ ಮೇಯರ್ ಅರ್ಧ ಗಂಟೆ ತಡವಾಗಿ(ಎರಡನೇ ಶೋಗೆ) ಬಂದರೂ ಅದಾಗಲೇ ಆರಂಭವಾಗಿದ್ದ ಚಿತ್ರವನ್ನು ಪುನಃ ಪ್ರಸಾರ ಮಾಡಿದ್ದಾರೆ ಎಂಬ ವಿಷಯ ಬೆಂಗಳೂರಿನ ಆಂಗ್ಲ ದೈನಿಕದಲ್ಲಿ ಪ್ರಮುಖ ಸುದ್ದಿಯಾಗಿದೆ.
"ಸಚಿವರು ಅರ್ಧ ಗಂಟೆ ತಡವಾಗಿ ಬಂದ ಕಾರಣ 'ರಕ್ತ ಚರಿತ್ರ' ಚಿತ್ರವನ್ನು ಪುನಃ ಮೊದಲಿನಿಂದ ಪ್ರಸಾರ ಮಾಡಲಾಯಿತು. ಇದರಿಂದ ಪ್ರೇಕ್ಷಕರು ಕಿರಿಕಿರಿ ಅನುಭವಿಸಿದರು. ಪ್ರೇಕ್ಷಕರ ಮನರಂಜನೆಗೂ ಕಲ್ಲು ಹಾಕಿದ್ದೀರಲ್ಲಾ ಸಚಿವರೇ?" ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಗೃಹ ಸಚಿವ ಆರ್ ಅಶೋಕ್ ಮೌನಕ್ಕೆ ಶರಣಾಗಿದ್ದಾರೆ.
ಆದರೆ ಮೇಯರ್ ನಟರಾಜ್ ಅವರು ಮಾತನಾಡುತ್ತಾ, ನಾವು ಸರಿಯಾದ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಿದ್ದೆವು ಎಂದಿದ್ದಾರೆ. ಸಚಿವರು ಹಾಗೂ ಮೇಯರ್ ಜೊತೆ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಮಾತ್ರ ನಮಗೆ ಸಿಕ್ಕಾಪಟ್ಟೆ ತೊಂದರೆಯಾಯಿತು. ಪಿವಿಆರ್ ಸಿಬ್ಬಂದಿ ಪದೇ ಪದೇ ಸಚಿವರು ಹಾಗೂ ಮೇಯರ್ ಅವರಿಗೆ ಪಾನೀಯ ಹಾಗೂ ಕುರುಕಲು ತಿಂಡಿಯನ್ನು ಸರಬರಾಜು ಮಾಡುತ್ತಿದ್ದದ್ದು ಕಿರಿಕಿರಿ ಉಂಟು ಮಾಡಿತು ಎಂದು ದೂರಿದ್ದಾರೆ.


Click it and Unblock the Notifications











