ವರದ'ನಾಯಕ' ಪಟ್ಟಕ್ಕಾಗಿ ಶಿವಣ್ಣ, ಸುದೀಪ್ ಸಮರ
ಮೊನ್ನೆ ಹುಬ್ಬಳ್ಳಿಯಲ್ಲಿ ರಾಜ್ ಕಪ್ ಕ್ರಿಕೆಟ್ ಫೈನಲ್ ನಲ್ಲಿ ನಡೆದ ಸುದೀಪ್ -ಶಿವಣ್ಣ ಕದನ ಮನಸ್ಸಿನಿಂದ ಮರೆಯಾಗುವ ಮೊದಲೇ ಇನ್ನೊಂದು ವಿವಾದ ಪ್ರಾರಂಭವಾಗಿದೆ. ಅದು ಕ್ರಿಕೆಟ್ ಅಲ್ಲ, ಸಿನಿಮಾ ಟೈಟಲ್ ಬಗ್ಗೆ. ನಿರ್ಮಾಪಕರಾದ ಆರ್ ಶಂಕರಲಿಂಗೇ ಗೌಡ ಹಾಗೂ ಸೂರಪ್ಪ ಬಾಬು ಮಧ್ಯೆ ಸುದೀಪ್ ಹಾಗೂ ಶಿವಣ್ಣ 'ನಾಯಕ'ತ್ವದ ಸಿನಿಮಾ ಟೈಟಲ್ ಮಧ್ಯೆ 'ಸಮರ' ಪ್ರಾರಂಭವಾಗಿದೆ.
ವರದನಾಯಕ ಶೀರ್ಷಿಕೆ ತನ್ನ ಹೆಸರಿನಲ್ಲಿದೆ ಹಾಗೂ ಸುದೀಪ್ ನಾಯಕತ್ವದಲ್ಲಿ ತಾನು ಅದನ್ನು ಮಾಡಿಯೇ ಸಿದ್ಧ ಎಂದು ಶಂಕರಲಿಂಗೇಗೌಡ ಹೇಳುತ್ತಿದ್ದಾರೆ. ಇನ್ನೊಂದೆಡೆ ಸೂರಪ್ಪ ಬಾಬು ಶಿವಣ್ಣನಿಗೆ 'ವರದ' ಎಂಬ ಹೆಸರಿಟ್ಟು ಸಿನಮಾ ಮಾಡಲಿದ್ದಾರೆ. ವರದ ಹಾಗೂ ವರದನಾಯಕ ಎರಡೂ ಸಿನಿಮಾಗಳು ಬಂದರೆ ಪ್ರೇಕ್ಷಕರಿಗೆ ಗೊಂದಲವಾಗುತ್ತದೆ ಎಂದಿದ್ದಾರೆ.
ಇದೇ ವೇಳೆ, ಈ ಶಂಖರಲಿಂಗೇಗೌಡ ಮಾತಿನಿಂದ ಕೆಂಡಾಮಂಡಲವಾಗಿರುವ ಸೂರಪ್ಪ ಬಾಬು, 'ಸೂಪರ್ ಸ್ಟಾರ್ ಉಪೇಂದ್ರ' ಅವರಿಗಾಗಿ ತಾನು ಇಟ್ಟುಕೊಂಡಿದ್ದ ಕೆಂಪೇಗೌಡ ಟೈಟಲ್ ಅನ್ನು ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರಕ್ಕಾಗಿ ಬಿಟ್ಟುಕೊಟ್ಟಿರುವ ವಿಷಯವನ್ನು ನೆನಪಿಸಿ ಶಂಕರಲಿಂಗೇ ಗೌಡ 'ಮಿತ್ರದ್ರೋಹಿ' ಎಂಬಂತೆ ಕಿಡಿಕಾರಿದ್ದಾರೆ.
ಇಬ್ಬರೂ ಸದ್ಯಕ್ಕೆ ತಮ್ಮ ವಾದಗಳಿಗೇ ಗಂಟುಬಿದ್ದಿದ್ದಾರೆ. ಸೂರಪ್ಪ ಬಾಬು ಕರ್ನಾಟಕ ಫಿಲಂ ಚೆಂಬರ್ ನ ಟೈಟಲ್ ಕಮಿಟಿಯಲ್ಲಿಯೂ ಇದ್ದಾರೆ. ಹಾಗಾಗಿ ಕದನ ಕುತೂಹಲ ಕೆರಳಿಸಿದೆ. ಇಬ್ಬರ ನಡುವೆ ನಡೆಯುತ್ತಿರುವ ಈ ಟೈಟಲ್ ಯುದ್ಧಕ್ಕೆ ಶಿವಣ್ಣ -ಸುದೀಪ್ ಪರೋಕ್ಷವಾಗಿ ಕಾರಣ ಆದಂತಾಗಿದೆ. ಇದು ವರದ'ನಾಯಕ'ತ್ವಕ್ಕಾಗಿ ನಡೆಯುತ್ತಿರುವ ಹೋರಾಟ. (ಒನ್ ಇಂಡಿಯಾ ಕನ್ನಡ)


Click it and Unblock the Notifications











