ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಾದಿಗೆ ತಲ್ಲಂ ರಾಜೀನಾಮೆ
ಬೆಂಗಳೂರು : ಚಿತ್ರಮಂದಿರಗಳ ಬಾಡಿಗೆ ಇಳಿಸಬೇಕೆಂಬ ನಿರ್ಮಾಪಕರ ಬೇಡಿಕೆ ಈಡೇರಿಸಲಾಗದ ಕಾರಣ ನೈತಿಕ ಹೊಣೆ ಹೊತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಗಾದಿಗೆ ತಲ್ಲಂ ನಂಜುಂಡ ಶೆಟ್ಟಿ ರಾಜೀನಾಮೆ ಕೊಟ್ಟಿದ್ದಾರೆ.
ಬುಧವಾರ ನಡೆದ ಮಂಡಳಿಯ ಸಭೆಯಲ್ಲಿ ನಿರ್ಮಾಪಕರಾದ ಕೆ.ಮಂಜು ಮತ್ತು ರಾಕ್ಲೈನ್ ವೆಂಕಟೇಶ್ ಸಮ್ಮುಖದಲ್ಲಿ ತಲ್ಲಂ ತಮ್ಮ ರಾಜೀನಾಮೆ ನಿರ್ಣಯವನ್ನು ಹೊರ ಹಾಕಿದರು.
ಕೆಂಪೇಗೌಡ ರಸ್ತೆಯ ಐದು ಚಿತ್ರಮಂದಿರಗಳ ಬಾಡಿಗೆಯನ್ನು ತಗ್ಗಿಸಬೇಕೆಂಬುದು ನಿರ್ಮಾಪಕರ ಸಂಘದ ಬೇಡಿಕೆಯಾಗಿತ್ತು. ಇದಕ್ಕೆ ತಲ್ಲಂ ನಂಜುಂಡಪ್ಪ ಸ್ಪಂದಿಸಿ, ಪ್ರದರ್ಶಕರು ಮತ್ತು ವಿತರಕರನ್ನು ಸಭೆಗೆ ಕರೆದರು. ಮೂರು ಬಾರಿ ಸಭೆ ಕರೆದರೂ ಪ್ರದರ್ಶಕರು ಗೈರು ಹಾಜರಾದರು. ಪ್ರದರ್ಶಕರು ಮತ್ತು ವಿತರಕರ ಲಾಬಿ ಮುಂದೆ ನಂಜುಂಡಶೆಟ್ಟಿಯವರ ಮಾತಿಗೆ ಚಿಕ್ಕಾಸೂ ಬೆಲೆ ಸಿಗಲಿಲ್ಲ. ನಿರ್ಮಾಪಕರ ಬೇಡಿಕೆ ಈಡೇರಿಸಲಾಗದ ಕಾರಣ ತಲ್ಲಂ ಹತಾಶರಾದರು. ವಿತರಕರ ಈ ಧೋರಣೆಯಿಂದ ನೊಂದಿರುವ ಕಾರಣ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮಂಡಳಿ ಮೂಲಗಳು ಸ್ಪಷ್ಟಪಡಿಸಿವೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











