ಪರಭಾಷೆ ಚಿತ್ರಗಳಿಗೆ ಪೋಲಿಸ್ ಕಾವಲು ; ತಿಪ್ಪೆ ಸಾರಿಸಿದ ಗಂಗರಾಜು
ಬೆಂಗಳೂರು : ಪ್ರತಿಭಟನೆ ಹಾಗೂ ವಿರೋಧಗಳ ನಡುವೆಯೇ ಹೊಸ ಪರಭಾಷಾ ಚಿತ್ರಗಳ ಪ್ರದರ್ಶನ ರಾಜಧಾನಿ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಮುಂದುವರೆದಿದೆ.
ನಗರದ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಬ್ರೆೃಡ್ ಅಂಡ್ ಪ್ರಿಜುಡೀಸ್ ಚಿತ್ರದ ಪ್ರದರ್ಶನವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಶನಿವಾರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದ ಪರಿಣಾಮ ಭಾನುವಾರ ಪ್ರದರ್ಶನ ನಡೆಯಲಿಲ್ಲ. ಚಿತ್ರ ಮಂದಿರದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಹನ್ನೆರಡು ಮಂದಿಯನ್ನು ಪೋಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿ ಪರಭಾಷಾ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದ ಪ್ರಕರಣ ಸೋಮವಾರ(ಅ.11) ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ವಿವಾದ ನ್ಯಾಯಾಲದ ಅಂಗಳದಲ್ಲಿರುವ ಕಾರಣ, ಯಾರೂ ಏನೂ ಮಾಡುವಂತಿಲ್ಲ. ಅಲ್ಲದೇ ಪರಭಾಷಾ ಚಿತ್ರಗಳ ಪ್ರದರ್ಶನವನ್ನು ತಡೆಯುವ ಅಧಿಕಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಲ್ಲ ಎಂದು ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು ತಿಳಿಸಿದ್ದಾರೆ.
ಅತೃಪ್ತಿ : ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ರೂಪಿಸಲಾಗಿದ್ದ ನಿರ್ಧಾರವನ್ನು ಗಾಳಿಗೆ ತೂರುವ ಪ್ರಕ್ರಿಯೆಗಳ ಬಗೆಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್, ಸರಕಾರ ಕೂಡಲೇ ಕೆ.ಪಿ.ಪಾಂಡೆ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಪ್ರದರ್ಶನ : ಬ್ರೆೃಡ್ ಅಂಡ್ ಪ್ರಿಜುಡೀಸ್, ಧೂಮ್ ಮತ್ತಿತರ ಪರಭಾಷಾ ಚಿತ್ರಗಳನ್ನು ನಗರದ ಅಭಿನಯ್, ಊರ್ವಶಿ, ಪರಿಮಳ, ರೆಕ್ಸ್ ಇತರ ಚಿತ್ರಮಂದಿರಗಳು ಪೋಲೀಸರ ಬೆಂಗಾವಲಿನಲ್ಲಿ ಪ್ರದರ್ಶಿಸುತ್ತಿವೆ.
(ಇನ್ಪೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications