‘ಪುಟ್ಟಣ್ಣ ಕಣಗಾಲ್’ ಚಿತ್ರಮಂದಿರ ಈಗ ಪೊಲೀಸ್ ಠಾಣೆಯಾಗಿದೆ !
ಬೆಂಗಳೂರು : ಜಯನಗರ ನಾಲ್ಕನೇ ಬ್ಲಾಕ್ನಲ್ಲಿರುವ ಪುಟ್ಟಣ್ಣ ಚಿತ್ರಮಂದಿರ ಇದೀಗ ಪೋಲೀಸ್ ಠಾಣೆಯಾಗಿ ಪರಿವರ್ತಿತವಾಗಿದೆ. ಕಲಾತ್ಮಕ ಚಿತ್ರಗಳ ಮುಕ್ತಿತಾಣವಾಗಿದ್ದ ಚಿತ್ರಮಂದಿರ ರೂಪ ಬದಲಿಸಿದೆ.
ಕನ್ನಡ ಚಿತ್ರರಂಗದಲ್ಲಿ ಸುವರ್ಣ ಹೆಜ್ಜೆ ಮೂಡಿಸಿ, ಅಂಬರೀಷ್-ವಿಷ್ಣುವರ್ಧನ್ರನ್ನು ಕನ್ನಡ ತೆರೆಗೆ ಪರಿಚಯಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ನಾಡಿನ ಮನೆಮಾತು. ಅವರ ನೆನಪನ್ನು ಹಸಿರಾಗಿಡುವ ಚಿತ್ರಮಂದಿರ ಇದೀಗ ವ್ಯವಸ್ಥೆಯ ನಿರ್ಲಕ್ಷ್ಯದ ಕಾರಣದಿಂದ ಪೊಲೀಸ್ ಠಾಣೆಯಾಗಿ ಬದಲಾಗಿದೆ. ಪುಟ್ಟಣ್ಣ ಕಣಗಾಲರಿಗೂ ಪೊಲೀಸ್ ಇಲಾಖೆಗೂ ಎತ್ತಣಿಂದೆತ್ತಣ ಸಂಬಂಧವಯ್ಯ!?
ಚಿತ್ರಮಂದಿರವನ್ನು ನಿರ್ವಹಿಸಲು ಕಷ್ಟವೆಂದು ಕಳೆದ ಎಂಟು ತಿಂಗಳ(ಮೇ.30) ಹಿಂದೆ ಬೀಗ ಜಡಿದ ಸರಕಾರ, ಅದನ್ನು ನವೀಕರಿಸಿ ಪುನಾರಂಭಿಸುವುದಾಗಿ ಮಾತು ಕೊಟ್ಟಿತ್ತು. ಕೊಟ್ಟ ಮಾತು ಬಹುಶಃ ಸರಕಾರಕ್ಕೆ ಮರೆತು ಹೋಗಿದೆ. ಹೀಗಾಗಿ ಪೋಲೀಸ್ ಠಾಣೆ ನಿರ್ವಹಣೆಗೆ ಅನುಮತಿ ನೀಡಲಾಗಿದೆ.
ನವೆಂಬರ್ 27, 1985 ರಂದು ಪುಟ್ಟಣ್ಣ ನಿರ್ದೇಶನದ ಮಸಣದ ಹೂವು ಚಿತ್ರದ ಮೂಲಕ ಇಲ್ಲಿ ಪ್ರದರ್ಶನ ಆರಂಭವಾಗಿತ್ತು. ಪುಟ್ಟಣ್ಣನವರ ಶಿಷ್ಯಚಂದ್ರಶೇಖರ್ ನಿರ್ದೇಶನದ ‘ಪೂರ್ವಪರ’ ಪುಟ್ಟಣ್ಣ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕಡೆಯ ಚಿತ್ರವಾಗಿದೆ.
ಹುನ್ನಾರ : ಹದಿನೈದು ದಿನಗಳ ಹಿಂದಷ್ಟೆ ಈ ಚಿತ್ರಮಂದಿರದ ಕ್ಯಾಂಟೀನನ್ನು ಸಂಚಾರಿ ಪೋಲೀಸ್ ಠಾಣೆಯಾಗಿ ಪರಿವರ್ತಿಸಲಾಗಿದೆ. ಈ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪೋಲೀಸ್ ಇಲಾಖೆಗೆ ಅನುಮತಿ ನೀಡಿದ್ದಾರೆ.
ಚಿತ್ರಮಂದಿರದ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತ ಜ್ಯೋತಿ ರಾಮಲಿಂಗಂ, ತಾತ್ಕಾಲಿಕವಾಗಿ ಮೂರು ತಿಂಗಳ ಕಾಲ ಮಾತ್ರ ಪೋಲೀಸ್ ಠಾಣೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇಲ್ಲಿ ಪುಟ್ಟಣ್ಣ ಚಿತ್ರಮಂದಿರ ಶಾಶ್ವತವಾಗಿ ಇರುತ್ತದೆ ಎನ್ನುತ್ತಾರೆ.
ಆದರೆ ಹಂತ ಹಂತವಾಗಿ ಚಿತ್ರಮಂದಿರವನ್ನು ನುಂಗುವ ಪ್ರಯತ್ನ ಇದೆಂದು ಚಿತ್ರರಸಿಕರು ಗೊಣಗುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ್ಗೆ ನಾವು ನೀಡುತ್ತಿರುವ ಗೌರವ ಇದೇನಾ ಇದೇನಾ ಎನ್ನುವ ಪ್ರಶ್ನೆ ‘ಧರ್ಮ’ ಸರಕಾರದ ಮುಂದಿದೆ. ಯಾಕೋ ಕನ್ನಡ ಚಿತ್ರೋದ್ಯಮಕ್ಕೆ ಟೈಮ್ ಚೆನ್ನಾಗಿಲ್ಲ !
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications