ನಿಖಿತಾ ಕೇಸ್: ಗಾನ್ ಕೇಸ್ ಗಳ ಹುಚ್ಚಾಟ

ದರ್ಶನ್ ವಿಜಯಲಕ್ಷ್ಮಿ ಹಾಗೂ ನಿಖಿತಾ ನಡುವಿನ ಘರ್ಷಣೆ, ಕಲಹದ ಲಾಭ ಪಡೆಯಲು ಯತ್ನಿಸಿರುವ ನಿರ್ಮಾಪಕ ಗಣೇಶ್ ಅವರು 'ನಿಕ್ಕಿ ಲವ್ಸ್ ಕಿಲಾಡಿ ನಂ. 9000' ಎಂಬ ಹೆಸರಿನ ಸಿನಿಮಾ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.
ಇದೇ ರೀತಿ ಜನಾರ್ದನ ರೆಡ್ಡಿ ಮೇಲೆ ಸಿಬಿಐ ದಾಳಿ, ಜೈಲು ಪ್ರಕರಣದ ಲಾಭ ಪಡೆಯಲು ಮುಂದಾಗಿರುವ ಸೂರಪ್ಪ ಬಾಬು ಅವರು 'ಬಳ್ಳಾರಿ ಕಿಲಾಡಿ 697' ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ಚಿತ್ರಲೋಕ.ಕಾಂ ವರದಿ ಮಾಡಿದೆ.
ಹುಚ್ಚಾಟಕ್ಕೆ ಕೆಎಫ್ ಸಿಸಿ ಏನು ಹೇಳುತ್ತೆ: ಆದರೆ, ಸಿನಿಮಾ ಶೀರ್ಷಿಕೆಗಳಿಗೆ ಇನ್ನೂ ಕೆಎಫ್ ಸಿಸಿ ಅನುಮತಿ ನೀಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಯಾದ ದರ್ಶನ್ ಗೆ ನಂ.9000 ನೀಡಲಾಗಿದೆ. ಅದೇ ರೀತಿ ಚಂಚಲಗುಡ ಜೈಲಿನಲ್ಲಿ ಜನಾರ್ದನ ರೆಡ್ಡಿಗೆ ನಂ.697 ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಕನ್ನಡ ಚಿತ್ರರಂಗ ಎಂದರೆ ಒಂದೇ ಕುಟುಂಬ ಇದ್ದಂತೆ ಎಂದು ಉದ್ದುದ್ದಾ ಭಾಷಣ ಬಿಗಿಯುವ ಸಿನಿಮಾ ಮಂದಿ ಈಗ ತಮ್ಮ ಕುಟುಂಬದ ಬಿಸಿರಕ್ತದ ಯುವ ನಟನೊಬ್ಬನ ಕುಟುಂಬ ಕಲಹದ ಲಾಭ ಪಡೆಯಲು ಯತ್ನಿಸುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿ.
ದರ್ಶನ್ ಅನ್ನು ನಿಷೇಧ ಮಾಡುವ ತಾಕತ್ತಿಲ್ಲದ ನಿರ್ಮಾಪಕರ ಸಂಘ ಒಂದು ಕಡೆ ನಿಖಿತಾ ಅವರಿಗೆ ನಿಷೇಧ ಹೇರುವ ಮೂಲಕ ಹೇಡಿತನದ ಪರಮಾವಧಿ ಮೆರೆದಿದೆ.
ಇನ್ನೊಂದೆಡೆ ನಿರ್ಮಾಪಕರ ಸಂಘದ ನಿರ್ಧಾರದಿಂದ ಇಡೀ ಚಿತ್ರರಂಗವೇ ಬೇಸರಗೊಂಡಿದ್ದರೂ ಎಲ್ಲೋ ಸಂದೇಶ್ ನಾಗರಾಜ್(ಪ್ರಿನ್ಸ್ ಚಿತ್ರದ ನಿರ್ಮಾಪಕ) ನವರಸನಾಯಕ ಜಗ್ಗೇಶ್ ಮಾತ್ರ ಬಹಿರಂಗವಾಗಿ ನಿರ್ಮಾಪಕರ ಸಂಘದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಂಬರೀಷ್ ಆಗಲಿ, ಮಹಿಳಾ ಸಂಘಟನೆಗಳಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ವಿಘ್ನ ಸಂತೋಷಿ ನಿರ್ಮಾಪಕರ ಸಂಘದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕಂಡವರ ಮನೆಗೆ ಬೆಂಕಿ ಬಿದ್ದರೆ ಅದೇ ಬೆಂಕಿಯಲ್ಲಿ ಬೀಡಿ ಹಚ್ಚಿ ದಮ್ ಎಳೆಯುವ ಚಾಲಾಕಿಗಳು ಇವರು.


Click it and Unblock the Notifications











