ಇಂದು ಚಿತ್ರ ಮಂದಿರಗಳ ಬಂದ್ ; ರಾಜ್ ನಿವಾಸದಲ್ಲಿ ‘ಕನ್ನಡ ದೀಕ್ಷೆ’
ಬೆಂಗಳೂರು : ನಗರದ ಚಿತ್ರಮಂದಿರಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ, ಗುರುವಾರ ರಾಜ್ಯಾದ್ಯಂತ ಚಿತ್ರಮಂದಿರಗಳ ಬಂದ್ ನಡೆಸುತ್ತಿರುವುದಾಗಿ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳದ ಅಧ್ಯಕ್ಷ ಆರ್.ಆರ್. ಓದುಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಏಳು ವಾರಗಳ ನಂತರ ಹೊಸ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಬೇಕೆಂಬ ನಿಯಮ ಜಾರಿಯಲ್ಲಿಲ್ಲ. ಹೀಗಾಗಿ ಯಾವ ನಿಯಮವನ್ನು ಚಿತ್ರಮಂದಿರಗಳು ಉಲ್ಲಂಘಿಸಿಲ್ಲ ಎಂದು ಓದುಗೌಡರ್ ಹೇಲಿದ್ದಾರೆ.
ಮುಖ್ಯಮಂತ್ರಿ ಮಧ್ಯಸ್ಥಿಕೆ : ಕನ್ನಡ ಚಿತ್ರೋದ್ಯಮದ ಗಣ್ಯರಾದ ಪಾರ್ವತಮ್ಮ ರಾಜ್ಕುಮಾರ್, ಬಸಂತ್ಕುಮಾರ್ ಪಾಟೀಲ್, ಜಗ್ಗೇಶ್, ರಾಕ್ಲೈನ್ ವೆಂಕಟೇಶ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮತ್ತಿತರರು ಬುಧವಾರ ಮುಖ್ಯಮಂತ್ರಿ ಎನ್.ಧರ್ಮಸಿಂಗ್ರನ್ನು ಭೇಟಿಮಾಡಿ ಚರ್ಚೆ ನಡೆಸಿದರು.
ಪ್ರದರ್ಶಕರ ಮಹಾಮಂಡಲದೊಂದಿಗೆ ಗುರುವಾರ ಸರಕಾರ ಮಾತುಕತೆ ನಡೆಸಲಿದೆ. ಅಲ್ಲದೇ ಅಕ್ಟೋಬರ್ 18 ರಂದು ಕೆ.ಪಿ. ಪಾಂಡೆ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಗೆ ಏರ್ಪಾಡು ಮಾಡಲಾಗಿದೆ. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಭರವಸೆ ನೀಡಿದ್ದಾರೆ.
ಎಚ್ಚರಿಕೆ : ಕಾದು ನೋಡುವ ನೀತಿಯನ್ನು ಅನುಸರಿಸುತ್ತಿದ್ದು, ಶುಕ್ರವಾರ(ಅಕ್ಟೋಬರ್15) ಚಿರಂಜೀವಿ ಅಭಿನಯದ ಶಂಕರ್ದಾದಾ(ಎಂಬಿಬಿಎಸ್) ಸೇರಿದಂತೆ ಇತರ ಹೊಸ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶಿತವಾದರೆ, ಚಿತ್ರಮಂದಿರಗಳಿಗೆ ಸೂಕ್ತ ಪಾಠ ಕಲಿಸುವುದಾಗಿ ಕನ್ನಡ ಪರ ಸಂಘಟನೆಗಳು ತಿಳಿಸಿವೆ.
ಕನ್ನಡ ದೀಕ್ಷೆ : ನಟ ರಾಜ್ಕುಮಾರ್ ನಿವಾಸದಲ್ಲಿ ಕನ್ನಡ ದೀಕ್ಷೆ ಪಡೆದ 70 ಕ್ಕೂ ಅಧಿಕ ಕನ್ನಡ ಅಭಿಮಾನಿಗಳು, ನಾಡು-ನುಡಿ ಹಿತಕಾಯುವುದಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದ್ದು, ಪರ್ಯಾಯ ಮಂಡಳಿ ರಚನೆಗೆ ಸಿದ್ದತೆ ನಡೆಸಿರುವುದಾಗಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ನಟ ಅಶೋಕ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications