ಕನ್ನಡಕ್ಕೆ ಶೂರ್ಪನಖಿಯಾದ ಪ್ರಿಯಾಮಣಿ

'ಭಾಗ್ಯದ ಬಳೆಗಾರ' ಚಿತ್ರಕ್ಕೆ ಆಕೆಯೇ ಸೂಕ್ತ ಅಂತ ನಿರ್ಧರಿಸಿದ ವಿಜಯ್ ಕುಮಾರ್ ಕಾಲ್ಷೀಟ್ಗಾಗಿ ಯತ್ನಿಸಿದ್ದಾರೆ. ಆಕೆ ಮೊದಲು ಒಪ್ಪಿದರಂತೆ. ಆಮೇಲೆ ಮಣಿರತ್ನಂ ಸಿನಿಮಾ ಸಿಕ್ಕಿದ್ದೇ ಫೋನ್ ಕರೆಗಳನ್ನು ಸ್ವೀಕರಿಸಿಲ್ಲ. ಮಾತುಕತೆಗೆ ಬೆನ್ನುಮಾಡಿದ್ದಾರೆ. ಕಾದು ಕಾದು ಸಾಕಾಗಿ ಆಕೆಯ ಕಾಲ್ಷೀಟ್ನ ಆಸೆಯನ್ನೇ ವಿಜಯ್ ಕುಮಾರ್ ಕೈಬಿಟ್ಟಿದ್ದಾರೆ. ಮಣಿರತ್ನಂ ಅವರ ಮುಂದಿನ ಚಿತ್ರ ರಾವಣ್ ನಲ್ಲಿ ಶೂರ್ಪನಖಿ ಪಾತ್ರವನ್ನು ಪ್ರಿಯಾಮಣಿ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಅಂದಹಾಗೆ, 'ಭಾಗ್ಯದ ಬಳೆಗಾರ' ಶುಕ್ರವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು. ನಿರ್ದೇಶಕ ಸಾಯಿ ಪ್ರಕಾಶ್ ಎಂದಿನಂತೆ ಓಂ ಸಾಯಿ' ಎಂದು ಬರೆದ ಖಾಕಿ ಅಂಗಿ ತೊಟ್ಟಿದ್ದರು. ಬದಲಾವಣೆಗೆ ಎಂಬಂತೆ, ಈ ಸಲ ಅವರು ಓಂ ಸಾಯಿ' ಅಂತ ಹೇಳಿ ಮಾತು ಪ್ರಾರಂಭಿಸಲಿಲ್ಲ (ಹಾಗೆ ಹೇಳದೇ ಇದ್ದರೆ ಪಿಚ್ಚರ್ ಓಡುತ್ತೆ ಅಂತ ಯಾರೋ ಜ್ಯೋತಿಷಿ ಹೇಳಿದ್ದರೂ ಅಚ್ಚರಿಯಿಲ್ಲ). ಪ್ರಿಯಾಮಣಿ ಕೈಕೊಟ್ಟಿದ್ದೇ ಇದುವರೆಗೆ ನಾಯಕಿ ಗೊತ್ತಾಗಿಲ್ಲ. ಯಾರಾದರೂ ಮನಸ್ಸಿನಲ್ಲಿ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಹೇಳುವ ಸ್ಥಿತಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಸೇರಿದಂತೆ ಯಾರೂ ಇರಲಿಲ್ಲ.
ಶಿವರಾಜ್ಕುಮಾರ್ ಮಾತಿಗಿಂತ ನಸುನಕ್ಕಿದ್ದೇ ಹೆಚ್ಚು. ಅಂದಹಾಗೆ, ಆಧುನಿಕ ಜಗತ್ತಿನ ಆಯಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಹಳೆಯ ಬಳೆಗಾರನನ್ನು ಹೆಣೆಯಲಾಗಿದೆಯಂತೆ. ಈಗಲೂ ಮದುವೆ ಮನೆಗಳಲ್ಲಿ ಬಳೆಗಾರನನ್ನು ಕರೆತರುವ ರೂಢಿ ಇದ್ದೇ ಇದೆಯಲ್ಲಾ ಅಂತ ಶಿವರಾಜ್ಕುಮಾರ್ ಒಂದು ಪ್ರಶ್ನೆ ಎಸೆದು ನಕ್ಕರು.
ಬಳೆಗಾರ...'ನಿಗೆ ಇಳಯರಾಜ ಸಂಗೀತ ನಿರ್ದೇಶಿಸುತ್ತಿರುವುದು ಮುಖ್ಯಾಂಶ. ಏಳು ಹಾಡುಗಳು. ಆ ಪೈಕಿ ಎರಡು ಜಾನಪದ ಗೀತೆ- ಭಾಗ್ಯದ ಬಳೆಗಾರ' ಹಾಗೂ ಘಲ್ಲು ಘಲ್ಲೆನುತಾ ಗೆಜ್ಜೆ'- ಭಿನ್ನ ರೀತಿಯ್ಲಲಿ ಇಳಯರಾಜ ಟ್ಯೂನ್ ಮಾಡಿದ್ದಾರಂತೆ. ಆರು ಹಾಡುಗಳಿಗೆ ಈಗಾಗಲೇ ಮಟ್ಟು ಹಾಕಿರುವ ಇಳಯರಾಜ ಕಥೆ ಕೇಳಿ ತಾವೇ ಇಷ್ಟಪಟ್ಟು ಫೋನ್ ಮಾಡಿ, ಸಂಗೀತ ನಿರ್ದೇಶನಕ್ಕೆ ಒಪ್ಪಿದ ಚಿತ್ರವಿದು. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದು, ಎಂ.ಆರ್.ಸೀನು ಛಾಯಾಗ್ರಹಣವಿದೆ


Click it and Unblock the Notifications











