ಸಾಹುಕಾರ, ಓಂಕಾರ ಎಲ್ಲಕ್ಕೂ ಶ್ರೀಕಾರದ ಅನುಮಾನ
ಬೆಂಗಳೂರು: ಸೆ.17ರಿಂದ ಕನ್ನಡವೂ ಸೇರಿದಂತೆ ಯಾವ ಹೊಸ ಚಿತ್ರಗಳ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಚಲನಚಿತ್ರ ಪ್ರದರ್ಶಕರ ಮಹಾಸಭೆಯ ಅಧ್ಯಕ್ಷ ಓದು ಗೌಡ ತಿಳಿಸಿದ್ದಾರೆ.
ಸೇವಾ ತೆರಿಗೆಯನ್ನು ಮತ್ತೆ ವಿಧಿಸುವುದು, ಚಿತ್ರಮಂದಿರಗಳಿಗೆ ವಿದ್ಯುತ್ ದರ ಕಡಿತ, ಕನ್ನಡ ಚಿತ್ರಗಳ ಪ್ರದರ್ಶನದ ತೆರಿಗೆ ಹಾಗೂ ಹೆಚ್ಚುವರಿ ತೆರಿಗೆ ಕಡಿತ ಮತ್ತಿತರ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವ ತನಕ ಹೋರಾಟ ಮುಂದು ವರೆಸುವುದಾಗಿ ಓದು ಗೌಡ ಪಟ್ಟು ಹಿಡಿದಿದ್ದಾರೆ.
ನಗರದ ಜೆ.ಪಿ.ನಗರದಲ್ಲಿರುವ ನಟ ಅಂಬರೀಷ್ ನಿವಾಸದಲ್ಲಿ ಮಂಗಳವಾರದಂದು ದಿನವಿಡೀ ಬಿಕ್ಕಟ್ಟು ತಿಳಿಗೊಳಿ ಸಲು ನಡೆಸಲಾದ ಮಾತುಕತೆಗಳು ಫಲ ನೀಡಿಲ್ಲ. ಬುಧವಾರ ಮಾತುಕತೆ ಮುಂದುವರೆಯುವ ಸಾಧ್ಯತೆಗಳಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸೆ.17ರಂದು ತೆರೆ ಕಾಣಬೇಕಿದ್ದ ಉಪೇಂದ್ರ ಅಭಿನಯದ ‘ಓಂಕಾರ’ ಹಾಗೂ ವಿಷ್ಣುವರ್ಧನ್ ಆಭಿನಯದ ‘ಸಾಹುಕಾರ’ಚಿತ್ರಗಳು ತೆರೆ ಕಾಣುವುದಿಲ್ಲ. ರಾಜ್ಯ ಉನ್ನತ ಮಟ್ಟದ ಸಮಿತಿ ನಿರ್ಧಾರದ ಹಿನ್ನೆಲೆಯಲ್ಲಿ ಬಾಲಿವುಡ್ನ ಕ್ಯೊಂ ಹೋ ಗಯಾ ನಾ, ಧೂಮ್ ಹಾಗೂ ಫಿರ್ ಮಿಲೇಂಗೆ ಚಿತ್ರಗಳು ತೆರೆ ಕಾಣುವಲ್ಲಿ ಅನುಮಾನಗಳಿವೆ.
ಸೆ.15 ರಂದು ಕರ್ನಾಟಕ ಚಲನ ಚಿತ್ರವಾಣಿಜ್ಯ ಮಂಡಳಿ ಅಧ್ಯಕ್ಷರ ಚುನಾವಣೆ ನಡೆಯಲಿರುವ ಬೆನ್ನಲ್ಲಿ ಚಿತ್ರೋದ್ಯಮ ದಲ್ಲಿನ ಬಿಕ್ಕಟ್ಟು ತಿಳಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಆವರೆಗೆ ಕೆ.ಪಿ.ಪಾಂಡೆ ನೇತೃತ್ವದ ಉನ್ನತಮಟ್ಟದ ಸಮಿತಿ ಸಭೆ ಸೇರದಿರಲು ನಿರ್ಧರಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications