ಜೀ ಕನ್ನಡದಲ್ಲಿ ನರೇಂದ್ರ ಬಾಬು ಶರ್ಮಾ ಮತ್ತೆ ಪ್ರತ್ಯಕ್ಷ!

ಓತಪ್ರೋತವಾಗಿ ಭವಿಷ್ಯವನ್ನು ಹೇಳುತ್ತ ಕೇಳುಗರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಕೇಳುಗರೇ ಹೊರಿಸಿದ್ದರು. ಲಕ್ಷ ದೀಪೋತ್ಸವ ಮಾಡದಿದ್ದರೆ ಬ್ರಹ್ಮಾಂಡವೇ ಮುಳುಗಿ ಹೋಗುತ್ತದೆ ಎಂದು ಲಕ್ಷದೀಪೋತ್ಸವ ಮಾಡಿಸಿ, ಜನರಲ್ಲಿ ಮೂಢನಂಬಿಕೆ ಹೆಚ್ಚಿಸುತ್ತಿದ್ದಾರೆ ಎಂದೂ ಅವರ ಮೇಲೆ ಕೇಳುಗರು ಕೆಂಡ ಕಾರಿದ್ದರು. ಇಂಥ ಜ್ಯೋತಿಷಿಗಳನ್ನು ತೊಲಗಿಸಿ ಎಂದು ಫೇಸ್ ಬುಕ್ ನಲ್ಲಿ 'ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ' ಎಂಬ ಅಭಿಯಾನವನ್ನೇ ಆರಂಭಿಸಲಾಗಿತ್ತು.
ಅವರನ್ನು ಜೀ ಕನ್ನಡದಿಂದ ಹೊರಹಾಕದಿದ್ದರೆ ಕಚೇರಿಯ ಎದುರಿಗೇ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಲಾಗಿತ್ತು. ಜನರ ಆಕ್ರೋಶವನ್ನು ಗಮನಿಸಿದ ಜೀ ಕನ್ನಡದವರು ನರೇಂದ್ರ ಬಾಬು ಶರ್ಮಾ ಅವರನ್ನು 'ಬೃಹತ್ ಬ್ರಹ್ಮಾಂಡ'ದಿಂದಲೇ ತೊಲಗಿಸಿರುವುದಾಗಿ ಹೇಳಿದ್ದರು. ಫೇಸ್ ಬುಕ್ ಗಳಲ್ಲಿ, ಕನ್ನಡ ಬ್ಲಾಗ್ ಗಳಲ್ಲಿ ಇದಕ್ಕೆ ಹರ್ಷೋದ್ಘಾರ ಮಾಡಲಾಗಿತ್ತು ಮತ್ತು ಕೆಲ ದಿನಗಳ ನಂತರ ವಿವಾದ ತಣ್ಣಗೂ ಆಗಿ, ಜನಮಾನಸದಿಂದ ನರೇಂದ್ರ ಬಾಬು ಶರ್ಮಾ ದೂರವೂ ಆಗಿದ್ದರು.
ಆದರೆ ಇದೇನು? ನರೇಂದ್ರ ಬಾಬು ಶರ್ಮಾ ಅವರು ಜೀ ಕನ್ನಡದ ಸುಪ್ರಸಿದ್ಧ ಕಾರ್ಯಕ್ರಮ ಬೃಹತ್ ಬ್ರಹ್ಮಾಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಹಾಗಿದ್ದರೆ, ಅವರನ್ನು ಕಿತ್ತು ಹಾಕಿದ್ದೇವೆಂದು ಹೇಳಿದ್ದು ಕೇವಲ ನಾಟಕವೆ? ಅವರ ವಿರುದ್ಧ ತಿರುಗಿ ಬಿದ್ದವರ ಕಣ್ಣು ಒರೆಸುವ ತಂತ್ರವೆ? ಜನರ ಪ್ರತಿಭಟನೆಗೆ, ವೀಕ್ಷಕರ ಆಗ್ರಹಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವೆ? ಜ್ಯೋತಿಷ್ಯವನ್ನು ನಂಬುವುದು ಬಿಡುವುದು ಅವರವರ ಇಷ್ಟವಾದರೂ, ಬೃಹತ್ ಬ್ರಹ್ಮಾಂಡ ಎಷ್ಟು ಟೀಕೆಗೊಳಗಾಗಿದೆಯೋ, ಅಷ್ಟೇ ಜನಪ್ರಿಯತೆಯನ್ನೂ ಗಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿನ ದಿನಗಳಲ್ಲಿ ಚಾನಲ್ಲುಗಳು ಹೆಚ್ಚಾದಂತೆ ಜ್ಯೋತಿಷಿಗಳಿಗೂ ಭಾರೀ ಬೇಡಿಕೆ ಶುರುವಾಗಿದೆ. ಒಳ್ಳೆಯ ಘಟನೆ ಸಂಭವಿಸಲಿ, ಪ್ರಳಯವೇ ಆಗಲಿ ಟಿವಿ ಚಾನಲ್ಲಿಗೆ ಜ್ಯೋತಿಷಿಗಳ ತಂಡವನ್ನು ಕರೆಸಿ ಪೇನಲ್ ಡಿಸ್ಕಷನ್ ಮಾಡುವುದನ್ನು ಎಲ್ಲ ಚಾನಲ್ಲುಗಳೂ ರೂಢಿ ಮಾಡಿಕೊಂಡಿವೆ. ಎಲ್ಲರ ಕೈಯಲ್ಲೂ ದುಬಾರಿ ಮೊಬೈಲುಗಳು, ದುಬಾರಿ ಕಾರುಗಳು ಓಡಾಡುತ್ತಿವೆ. ಅವರ ಗತ್ತು ಗೈರತ್ತು ಬದಲಾಗಿದೆ. ಟಿವಿಯಿಂದಾಗಿ ಸಾರ್ವಜನಿಕರು ಕೂಡ ಖಾಸಗಿಯಾಗಿ ಅವರ ಹಿಂದೆ ಬೀಳುತ್ತಿದ್ದಾರೆ.


Click it and Unblock the Notifications











