ಕಾವೇರಿಯಲ್ಲಿ ವೀರ್ ಝಾರಾ ;ಮೂರು ವಾರ ಒಪ್ಪಂದ ಮೂರಾಬಟ್ಟೆ
ಬೆಂಗಳೂರು : ನಗರದ ಕಾವೇರಿ ಚಿತ್ರ ಮಂದಿರದಲ್ಲಿ ಸೋಮವಾರ(ನ.15)ಹಿಂದಿ ಚಿತ್ರ ವೀರ್ ಝಾರಾ ತೆರೆ ಕಂಡಿದೆ. ಈ ಮೂಲಕ ಪರಭಾಷಾ ಚಿತ್ರಗಳಿಗೆ ಸಂಬಂಧಿಸಿದ ಮೂರು ವಾರದ ಒಪ್ಪಂದವನ್ನು ಪ್ರದರ್ಶಕರು ಗಾಳಿಗೆ ತೂರಿದ್ದಾರೆ.
ಪೋಲೀಸರ ಬೆಂಗಾವಲಿನಲ್ಲಿ ಯಶ್ಛೋಪ್ರಾ ನಿರ್ದೇಶನದ ಹೊಸ ಚಿತ್ರ ವೀರ್ ಝಾರಾ ತೆರೆಗೆ ಬಂದಿದೆ. ನಗರದಲ್ಲಿ ಪ್ರದರ್ಶಕರ ಸಹಭಾಗಿತ್ವವಿಲ್ಲದೆ ನೇರವಾಗಿ ಮುಂಬೈನಿಂದ ಯಶ್ಛೋಪ್ರಾ ಅವರೇ ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.
ಪ್ರದರ್ಶನದ ಸುಳಿವು ಸಿಕ್ಕಿದ ತಕ್ಷಣ ಕಾವೇರಿ ಚಿತ್ರಮಂದಿರದ ಬಳಿ ಕರುನಾಡ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ನಂತರ ಅವರನ್ನು ಪೋಲೀಸರು ಬಂಧಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು ಸ್ಥಳಕ್ಕೆ ತೆರಳಿ, ಚಿತ್ರ ಮಂದಿರದ ಮಾಲೀಕರ ಮನವೊಲಿಸಲು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಈ ಸಂಬಂಧ ಚಿತ್ರಮಂದಿರದ ಮಾಲೀಕರಿಗೆ ನೋಟೀಸ್ ನೀಡಲು ನಿರ್ಧರಿಸಿರುವುದಾಗಿ ಮಂಡಳಿ ತಿಳಿಸಿದೆ.
ಸಭೆ : ಮುಂದಿನ ಬೆಳವಣಿಗೆ ಹಾಗೂ ಕನ್ನಡ ಚಿತ್ರೋದ್ಯಮದ ಉಳಿವಿಗೆ ಕಾರ್ಯತಂತ್ರ ರೂಪಿಸಲು ನಿರ್ಮಾಪಕರ ಸಂಘ ಮಂಗಳವಾರ (ನ.16) ಸಭೆ ನಡೆಸುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications