ಹೊಸ ವಿವಾದದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ
ಸಂಗೀತ ನಿರ್ದೇಶಕ, ಗೀತ ಸಾಹಿತಿ ಹಂಸಲೇಖ ಅವರು ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಅವರು ಜಾನಪದ ಕಲಾವಿದರನ್ನು ವಿನಾ ಕಾರಣ ಅವಮಾನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆಪಾದನೆಯನ್ನು ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾಡಿದ್ದಾರೆ.
ಬೆಳಗಾವಿ ಸಮ್ಮೇಳನಕ್ಕೆ ಜಾನಪದ ಗಾಯಕರನ್ನು ಆಹ್ವಾನಿಸಲಾಗಿತ್ತು. ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನ್ನಿ, ಬಸವಲಿಂಗಯ್ಯ ಹಿರೇಮಠ, ವೇಮಗಲ್ ನಾರಾಯಣ ಸ್ವಾಮಿ ಸೇರಿದಂತೆ ಹಲವಾರು ಕಲಾವಿದರನ್ನು ಆಹ್ವಾನಿಸಲಾಗಿತ್ತು. ಮಾರ್ಚ್11ರಂದು ಇವರೆಲ್ಲಾ ಕಾರ್ಯಕ್ರಮ ನಡೆಸಬೇಕಾಗಿತ್ತು.
ಜಾನಪದ ಕಾರ್ಯಕ್ರಮದ ಬಳಿಕ ಹಂಸಲೇಖ ಕಾರ್ಯಕ್ರಮವಿತ್ತು. ಆದರೆ ಹಂಸಲೇಖ ಅವರು ಪೊಲೀಸರ ಮೇಲೆ ಒತ್ತಡ ಹೇರಿ ನಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದರು ಎಂದು ಪಿಚ್ಚಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ. ಅಂದು ಉದ್ಘಾಟನಾ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಮುಕ್ತಾಯವಾದ್ದರಿಂದ ನಮಗೆ 11.30ಕ್ಕೆ ಅವಕಾಶ ಕಲ್ಪಿಸಲಾಗಿತ್ತ್ತು.
ಸಮಯಾಭಾವದಿಂದ ಒಂದು ಗಂಟೆ ಸಮಯ ನಿಗದಿಪಡಿಸಿದ ಕಾರಣ ತಮಟೆ ವಾದ್ಯಗಳೊಂದಿಗೆ ವೇದಿಕೆ ಏರುತ್ತಿದ್ದಂತೆ ಹಂಸಲೇಖ ಅವರು ಜಗಳ ಮಾಡಿ ತೊಂದರೆ ನೀಡಿದರು. ಹತ್ತು ಜನ ಗಾಯಕರಿದ್ದ ನಾವು ಕೇವಲ ಐದು ಗಾಯಕರಿಂದ ಹಾಡುಗಳನ್ನು ಹಾಡಿಸಿ ಕಾರ್ಯಕ್ರಮ ಮುಗಿಸಿದೆವು. ಕಾರ್ಯಕ್ರಮ ಮುಗಿಸಿ ಹೊರ ನಡೆಯುತ್ತಿರಬೇಕಾದರೆ ಹಂಸಲೇಖ ನನ್ನನ್ನು ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
"ನೀವೇನು ಮಹಾನ್ ಕಲಾವಿದರೆ. ವೇದಿಕೆ ಬಿಟ್ಟುಕೊಡಬಹುದಿತ್ತಲ್ಲಾ" ದೇಸಿ ಸಂಸ್ಥೆ ಕಟ್ಟಿರುವ ನೀವೇ ವೇದಿಕೆ ಬಿಟ್ಟುಕೊಡಬಹುದಿತ್ತಲ್ಲಾ ಎಂದು ಕೇಳಿದ್ದಕ್ಕೆ, ನಾವೇನು ನಿಮ್ಮ ತರಹ ಬೀದಿಯಲ್ಲಿ ಹಾಡುವವರೇನು ಎಂದಿದ್ದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸವಿತಾ ಸಮಾಜದವರ ಮನಸ್ಸಿಗೆ ನೋವುಂಟಾಗುವಂತೆ ನಿಂದಿಸಿದ್ದಾರೆ ಎಂಬ ಆರೋಪ ಹಂಸಲೇಖ ಅವರ ಮೇಲೆ ಕೇಳಿಬಂದಿದೆ.


Click it and Unblock the Notifications











