ರಾಜ್ ನೇತೃತ್ವದ ಬಂದ್ ರದ್ದು, ಸಿನಿಮಾ ಪ್ರದರ್ಶನ ಪ್ರಾರಂಭ
ಬೆಂಗಳೂರು : ಸೇವಾ ಶುಲ್ಕ ಹಂಚಿಕೆ ವಿಷಯದಲ್ಲಿ ನಿರ್ಮಾಪಕರು- ಪ್ರದರ್ಶಕರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿರುವ ಕಾರಣ ಗುರುವಾರ (ಜು.17) ನಡೆಯಬೇಕಿದ್ದ ಚಿತ್ರೋದ್ಯಮ ಬಂದ್ ರದ್ದಾಗಿದೆ. ಅಷ್ಟೇ ಅಲ್ಲದೆ, ಸ್ಥಗಿತಗೊಂಡಿದ್ದ ಚಿತ್ರ ಪ್ರದರ್ಶನ ಮತ್ತೆ ಶುರುವಾಗಿದೆ.
ಡಾ.ರಾಜ್ಕುಮಾರ್ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸುವುದಾಗಿ ನಿರ್ಮಾಪಕರು ಹೇಳಿದ್ದರು. ಆದರೆ, ಬುಧವಾರ (ಜು.16) ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಚಿತ್ರೋದ್ಯಮದ ಗಣ್ಯರೊಂದಿಗೆ ಸಭೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸೇವಾ ಶುಲ್ಕ ವಿಷಯದಲ್ಲಿ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಮುಂದಿನ ಸೋಮವಾರ (ಜು.21) ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅಲ್ಲಂ ಹೇಳಿದರು.
ಸಭೆಯ ನಂತರ ಸುದ್ದಿಗಾರರ ಜೊತೆ ಮಾತಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ಕುಮಾರ್ ಪಾಟೀಲ್, ಸೇವಾ ಶುಲ್ಕ ವಸೂಲಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ್ದಾರೆ. ಮುಂದೆ ಸೇವಾ ಶುಲ್ಕ ಪದ್ಧತಿಯನ್ನೇ ರದ್ದು ಪಡಿಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಪ್ರತಿಭಟನಾ ಪ್ರದರ್ಶನ ಮತ್ತು ಬಹಿರಂಗ ಸಭೆಯನ್ನು ರದ್ದು ಮಾಡಿದೆವು ಎಂದರು.
ಸೇವಾ ಶುಲ್ಕ ಹಾಗೂ ಚಿತ್ರೋದ್ಯಮದ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಸಮಿತಿಯಾಂದು ರಚಿತವಾಗಿದೆ. ನಿರ್ಮಾಪಕರ ಪರವಾಗಿ ಬಸಂತ್ಕುಮಾರ್ ಪಾಟೀಲ್, ರಾಕ್ಲೈನ್ ವೆಂಕಟೇಶ್, ಜೋ ಸೈಮನ್ ಹಾಗೂ ವಿತರಕರ ಪರವಾಗಿ ಕೆ.ವಿ.ನಾಗೇಶ್ ಕುಮಾರ್, ನಂದರಕುಮಾರ್ ಮತ್ತು ವೆಂಕಟರಮಣ ಸಮಿತಿಯಲ್ಲಿದ್ದಾರೆ. ವಾರದೊಳಗೆ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ನಿರ್ಮಾಪಕರ ಬೆಂಬಲಕ್ಕೆ ರಾಜ್ಕುಮಾರ್ ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











