ಬೇಡಿಕೆಗೆ ಸ್ಪಂದಿಸಿದ ಮಾಲಿಕರು, ಕಾರ್ಯನಿರತವಾದ ಕನ್ನಡ ಚಿತ್ರೋದ್ಯಮ
ಬೆಂಗಳೂರು: ಚಿತ್ರಮಂದಿರದ ಬಾಡಿಗೆ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಚಿತ್ರಮಂದಿರದ ಮಾಲಿಕರು ಸಮ್ಮತಿಸಿದ್ದು, ಕನ್ನಡ ಚಿತ್ರೋದ್ಯಮ ಬಂದ್ನ್ನು ವಾಪಾಸ್ ತೆಗೆದುಕೊಳ್ಳಲಾಗಿದೆ.
ಬುಧವಾರದಿಂದ ಎಂದಿನಂತೆ ಚಿತ್ರೀಕರಣ ಸೇರಿದಂತೆ ಕನ್ನಡ ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳು ನಡೆಯಲಿವೆ. ಚಿತ್ರಮಂದಿರದ ಬಾಡಿಗೆ ದರವನ್ನು ಶೇ 10ರಷ್ಟು ಕಡಿಮೆ ಮಾಡಲು ಕೆಂಪೇಗೋಡ ರಸ್ತೆಯಲ್ಲಿರುವ ಐದು ಚಿತ್ರಮಂದಿರಗಳ ಮಾಲಿಕರು ಒಪ್ಪಿದ್ದಾರೆ. ಸೇವಾ ತೆರಿಗೆ ಮತ್ತಿತರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ವಾರ್ತಾ ಸಚಿವೆ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.
ಕಾಗೋಡು ತಿಮ್ಮಪ್ಪ ಅವರು ನೀಡಿರುವ ಭರವಸೆಯನ್ನು ನಂಬಿ ಬಂದ್ ಕೈಬಿಡಲಾಗಿದೆ ಎಂದು ಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ಸುಂದರರಾಜ್ ತಿಳಿಸಿದ್ದಾರೆ.
ರಾಜ್ಯ ವಾಣಿಜ್ಯ ಚಲನಚಿತ್ರ ಮಂಡಳಿ ಕಚೇರಿಯಲ್ಲಿ ಮಂಗಳವಾರ ಸಂಜೆ ಸಂಘದ ಉಪಾಧ್ಯಕ್ಷ ಹಾಗೂ ವೀರೇಶ್ ಚಿತ್ರಮಂದಿರದ ಮಾಲಿಕ ಚಂದ್ರು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕೆಂಪೇಗೌಡ ರಸ್ತೆಯಲ್ಲಿರುವ ಐದು ಚಿತ್ರಮಂದಿರಗಳು ಬಾಡಿಗೆಯನ್ನು ಶೇ 10ರಷ್ಟು ಕಡಿಮೆ ಮಾಡಲು ಒಪ್ಪಿಕೊಂಡಿವೆ.
ಈ ಸಭೆಯ ನಂತರ ಚಿತ್ರಕಲಾವಿದ ಸಂಘದ ಪ್ರತಿನಿಧಿಗಳ ನಿಯೋಗ ಮುಂದಿಟ್ಟ ಬೇಡಿಕೆಗಳ ಬಗ್ಗೆ ಕಾಗೋಡು ತಿಮ್ಮಪ್ಪ ಅವರೊಂದಿಗೆ ಚರ್ಚೆ ನಡೆಸಿತು. ಚಿತ್ರೋದ್ಯಮದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಯಾಂದಿಗೆ ಸದ್ಯದಲ್ಲೇ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಕಾಗೋಡು ತಿಮ್ಮಪ್ಪ ನಿಯೋಗಕ್ಕೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬಂದ್ನ್ನು ಕೈಬಿಡಲಾಯಿತು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಚಿತ್ರೋದ್ಯಮ ಬಂದ್ : ಫಲ ಕೊಡದ ಕಾಗೋಡು ಕಾಜಿ ನ್ಯಾಯ
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











