ಸೆನ್ಸಾರ್ ಮಂಡಳಿಯ ಅಡಕತ್ತರಿಯಲ್ಲಿ ಬುದ್ಧಿವಂತ!
ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಬುದ್ಧಿವಂತ' ಚಿತ್ರ ಸೆನ್ಸಾರ್ ಮಂಡಳಿಯ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ. ಸೆ.18ರಂದು ಉಪೇಂದ್ರ ಹುಟ್ಟುಹಬ್ಬದ ದಿನ ಬಿಡುಗಡೆಯಾಗಬೇಕಿದ್ದ ಚಿತ್ರ ಅನಾಮತ್ತಾಗಿ ಮುಂದೂಡಲ್ಪಟ್ಟಿದೆ. ಚಿತ್ರೋದ್ಯಮದ ಮೂಲಗಳ ಪ್ರಕಾರ, ಸೆನ್ಸಾರ್ ಮಂಡಳಿ ಮೈಸೂರಿನಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿದ್ದು ಅದರ ಅಧ್ಯಕ್ಷರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣಕ್ಕೆ 'ಬುದ್ಧಿವಂತ'ನಿಗೆ ಸೆನ್ಸಾರ್ ಆಗಲು ಇನ್ನು ಒಂದು ವಾರ ಕಾಲ ತಡವಾಗುತ್ತದೆ.
ಇದಿಷ್ಟೆ ಅಲ್ಲದೆ ಸೆನ್ಸಾರ್ ಮಂಡಳಿ ಮುಂದೆ ಸೆನ್ಸಾರ್ ಆಗಬೇಕಿರುವ ಚಿತ್ರಗಳ ಉದ್ದುದ್ದ ಪಟ್ಟಿಯೇ ಇದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಚಿತ್ರಗಳನ್ನು ವೀಕ್ಷಿಸಲಾಗುತ್ತಿದೆ. ಬುದ್ಧಿವಂತನ ಸರದಿ ಬಂದಾಗ ಸೆನ್ಸಾರ್ ಮಾಡಲಾಗುತ್ತದೆ ಎಂಬುದು ಸೆನ್ಸಾರ್ ಮಂಡಳಿಯ ವಿವರಣೆ. ಈ ಎಲ್ಲ ಕಾರಣಗಳಿಗಾಗಿ 'ಬುದ್ಧಿವಂತ' ತಡವಾಗಿ ತೆರೆಗೆ ಬರುತ್ತಿದ್ದಾನೆ.
''ಬುದ್ಧಿವಂತನ ಪ್ರಥಮ ಪ್ರತಿ ಎರಡು ತಿಂಗಳ ಹಿಂದೆಯೆ ಸಿದ್ಧವಾಗಿತ್ತು. ಚಿತ್ರಕ್ಕೆ ಸಮಯಕ್ಕೆ ಸರಿಯಾಗಿ ಪ್ರಾಣಿ ಸಂರಕ್ಷಣಾ ಮಂಡಳಿಯ ಅನುಮತಿ ಸಿಕ್ಕಿಲ್ಲ. ಅನುಮತಿ ಪತ್ರಕ್ಕಾಗಿ ನಾವು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿದ್ದೆವು ಆದರೂ ನಮಗೆ ಅನುಮತಿ ಸಿಗಲು ತಡವಾಯಿತು'' ಎನ್ನುತ್ತಾರೆ ಬುದ್ಧಿವಂತ ಚಿತ್ರದ ನಿರ್ಮಾಪಕ ಮೋಹನ್. ಸೆ.16ರೊಳಗೆ ಬುದ್ಧಿವಂತ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮುಕ್ತಿ ಕಲ್ಪಿಸಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಮನವಿ ಸಲ್ಲಿಸಿತ್ತು. ಈ ಮನವಿಯೂ ಫಲಿಸದ ಕಾರಣ ಬುದ್ಧಿವಂತ ಸೆ.18ಕ್ಕೆ ತೆರೆ ಕಾಣುತ್ತಿಲ್ಲ. ಸೆ. 26 ರಂದು ನರ್ತಕಿ ಮುಂದೆ ಸಾಲುಗಟ್ಟಿ ನಿಂತಿರುವ ಅಭಿಮಾನಿಗಳನ್ನು ಕಾಣಬಹುದು.
(ದಟ್ಸ್ ಕನ್ನಡ ಸಿನಿವಾರ್ತೆ)
'ಬುದ್ಧಿವಂತ' ಉಪೇಂದ್ರರನ್ನು ಒಪ್ಪಿಕೊಂಡವರು ದಡ್ದರಲ್ಲ!


Click it and Unblock the Notifications











