ಅನಿಲ್ ಅಂಬಾನಿ ಬಿಗ್ ಎಫ್ ಎಂ ವಿರುದ್ಧ ಕೆಎಫ್ ಸಿಸಿ ಫತ್ವಾ
ಅನಿಲ್ ಅಂಬಾನಿ ಒಡೆತನದ ಬಿಗ್ ಸಿನಿಮಾ ಮತ್ತು ಅದರ ಸಮೂಹ ಸಂಸ್ಥೆಗಳು ಕನ್ನಡ ಚಿತ್ರೋದ್ಯಮಕ್ಕೆ ಅಸಹಕಾರ ನೀಡುತ್ತಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆರೋಪಿಸಿದೆ. ಆಗಸ್ಟ್ 22ರಂದು 92.7 ಬಿಗ್ ಎಫ್ ಎಂ ಆಯೋಜಿಸಿರುವ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕನ್ನಡ ಚಿತ್ರೋದ್ಯಮದ ಸಂಗೀತ ನಿರ್ದೇಶಕರು , ನಟ/ನಟಿಯರು ಯಾರು ಹಾಜರಾಗಬಾರದೆಂದು ಫತ್ವಾ ಹೊರಡಿಸಿದೆ.
ಈ ಸಂಬಂಧ ಈಗಾಗಲೆ ಕೆಎಫ್ ಸಿಸಿ ಕಚೇರಿಯಿಂದಸಂಬಂಧಪಟ್ಟವರಿಗೆಲ್ಲಾ ಕಾರ್ಯಕ್ರಮಕ್ಕೆ ಹಾಜರಾಗಬೇಡಿ ಎಂದು ಎಸ್ಸೆಮ್ಮೆಸ್ ರವಾನೆಯಾಗಿದೆ. ಸಂಗೀತ ನಿರ್ದೇಶಕ ಹಂಸಲೇಖ, ಗುರುಕಿರಣ್ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್ ಈ ಕಾರ್ಯಕ್ರಮದ ತೀರ್ಪುಗಾರರು ಎಂಬುದು ವಿಶೇಷ.ಮೂಲಗಳ ಪ್ರಕಾರ ಬಸಂತ್ ಕುಮಾರ್ ಪಾಟೀಲ್ ಅವರ ಮೊಬೈಲ್ ಫೋನಿನಿಂದಲೆ ಎಸ್ಸೆಮ್ಮೆಸ್ ರವಾನೆಯಾಗಿದೆ ಎನ್ನಲಾಗಿದೆ.
ಕಾರ್ಯಕ್ರಮಕ್ಕೆ ಹಾಜರಾಗಬೇಡಿ ಎಂಬ ಪತ್ರ ತಮಗೆ ಫಿಲಂ ಚೇಂಬರ್ ನಿಂದ ತಲುಪಿರುವುದಾಗಿ ಹಂಸಲೇಖ ತಿಳಿಸಿದ್ದಾರೆ. "ಕನ್ನಡ ಚಿತ್ರೋದ್ಯಮದ ಭಾವನೆಗಳನ್ನು ಬಿಗ್ ಎಫ್ ಎಂ ರೇಡಿಯೋ ಕೆಣಕಿದೆ" ಎಂಬರ್ಥದ ಸಾಲುಗಳು ಪತ್ರದಲ್ಲಿವೆ ಎಂದು ಹಂಸಲೇಖ ಹೇಳಿದ್ದಾರೆ. ಒಂದು ವೇಳೆ ಪತ್ರ ಬರದಿದ್ದರೂ ನಾನು ಈ ಕಾರ್ಯಕ್ರಮಕ್ಕ್ಕೆ ಹಾಜರಾಗುತ್ತಿರಲಿಲ್ಲ.ಸಂಗೀತದ ಪರಿಕಲ್ಪನೆಯನ್ನೆ ಬಿಗ್ ಎಫ್ ಎಂ ರೇಡಿಯೋ ಹಾಳು ಮಾಡಿದೆ ಎಂದು ಹಂಸಲೇಖ ಖೇದ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆಯಬೇಕಿದ್ದ ಅಭ್ಯಾಸ ಕಾರ್ಯಕ್ರಮವನ್ನು ಬಿಗ್ ಎಫ್ ಎಂ ರದ್ದುಪಡಿಸಿದೆ. ಈ ರೀತಿಯ ಕಾರ್ಯಕ್ರಮಗಳಿಗೆ ಕಳೆ ಬರುವುದೇ ತಾರೆಗಳ ಆಗಮದಿಂದ. ಈಗ ತಾರೆಗಳೆ ಇಲ್ಲ ಎಂದ ಮೇಲೆ ಕಾರ್ಯಕ್ರಮ ಯಾವ ಪುರುಷಾರ್ಥಕ್ಕಾಗಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕಾರ್ಯಕ್ರಮಕ್ಕೆ ಕೆಲವೇ ದಿನಗಳಿರುವ ಕಾರಣ ಪ್ರಾಯೋಜಕರು ಚಿಂತಾಕ್ರಾಂತರಾಗಿದ್ದಾರೆ.
ಈ ಹಿಂದೆ ಬಿಗ್ ಎಫ್ ಎಂ ರೇಡಿಯೋದಲ್ಲಿ ಒಂದು ವಿಭಿನ್ನ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಆ ಕಾರ್ಯಕ್ರದಲ್ಲಿ "ಸ್ಯಾಂಡಲ್ ವುಡ್ ನ ಬಿಗ್ಗೆಷ್ಟ್ ಛತ್ರಿ ಯಾರು?" ಎಂದು ಕೇಳುಗರನ್ನು ಪ್ರಶ್ನಿಸಲಾಗಿತ್ತು. ನಟ, ನಟಿ ಸೇರಿದಂತೆ ಛಾಯಾಗ್ರಾಹಕ, ನಿರ್ದೇಶಕ, ಹಾಸ್ಯ ನಟ, ಸಂಗೀತ ನಿರ್ದೇಶಕ ಹೀಗೆ ಎಲ್ಲರ ಬಗ್ಗೆಯೂ ಈ ಪ್ರಶ್ನೆ ಕೇಳಿ ಫಿಲಂ ಚೇಂಬರ್ ಕೆಂಗಣ್ಣಿಗೆ ಗುರಿಯಾಗಿತ್ತು. ವಾಹಿನಿ ವಿರುದ್ಧ ಫಿಲಂ ಚೇಂಬರ್ ಸಮರ ಸಾರಿದ ಮೇಲೆ ಈ ಕಾರ್ಯಕ್ರಮವನ್ನು ಬಿಗ್ ಎಫ್ ಎಂ ತಡೆಹಿಡಿದಿತ್ತ್ತು.


Click it and Unblock the Notifications











