ವಿಷ್ಣು ಹುಟ್ಟುಹಬ್ಬ ಮರೆತ ಕೆಎಫ್ಸಿಸಿ ಕಚೇರಿಗೆ ಮುತ್ತಿಗೆ
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸೆ.18 ಮರೆಯಲಾಗದ ದಿನ. ಕಾರಣ ಗೊತ್ತೆ ಇದೆ. ಇಂದು ಅವರ 60ನೇ ಹುಟ್ಟುಹಬ್ಬ. ಆದರೆ ಅವರ ಹುಟ್ಟುಹಬ್ಬವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಚರಿಸದೆ ಇರುವುದು ವಿಷ್ಣು ಅಭಿಮಾನಿಗಳನ್ನು ಕೆರಳಿಸಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯ ಈ ಘಟನೆಯನ್ನು ಖಂಡಿಸಿ ವಿಷ್ಣು ಅಭಿಮಾನಿಗಳು ಇಂದು ಕಚೇರಿಗೆ ಮುತ್ತಿಗೆ ಹಾಕಿದರು. ಬಳಿಕ ವಿಷ್ಣು ಭಾವಚಿತ್ರಕ್ಕೆ ಮಾಲೆ ಹಾಕಿ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬನ್ನು ಫಿಲಂ ಚೇಂಬರ್ನಲ್ಲಿ ಆಚರಿಸಿ ಸಂಭ್ರಮಿಸಿದರು.
"ಕನಿಷ್ಠ ವಿಷ್ಣು ಅವರ ಭಾವಚಿತ್ರಕ್ಕೆ ಮಾಲೆಯನ್ನು ಹಾಕಿ ಅವರ ಹುಟ್ಟುಹಬ್ಬವನ್ನು ಕೆಎಫ್ ಸಿಸಿ ಸರಳವಾಗಿ ಆಚರಿಸಬಹುದಿತ್ತು. ನಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಅವರು ಆಚರಿಸದೆ ನಮ್ಮ ಮನಸ್ಸಿಗೆ ನೋವು ತಂದಿದ್ದಾರೆ" ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿರುವ ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆ ಬಳಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದರು. ಈ ಸಂಬಂಧ ಈಗಾಗಲೆ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಕೆಎಫ್ಸಿಸಿಯಲ್ಲಿ ವಿಷ್ಣು ಹುಟ್ಟುಹಬ್ಬ ಯಾಕೆ ಆಚರಿಸಲಿಲ್ಲ? ಈ ಪ್ರಶ್ನೆಗೆ ಬಸಂತಕುಮಾರ್ ಪಾಟೀಲ್ ಕೊಟ್ಟಿರುವ ಉತ್ತರ ಹೀಗಿದೆ. ಪಂಡಿತ ಪುಟ್ಟರಾಜ ಗವಾಯಿಗಳ ನಿಧನದಿಂದ ಶೋಕತಪ್ತರಾಗಿರುವ ನಾವು ವಿಷ್ಣು ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ ಎಂದು ತಮಗೆ ತಿಳಿಸಿದ್ದಾಗಿ ವಿಷ್ಣು ಅಭಿಮಾನಿಗಳು ಹೇಳಿದ್ದಾರೆ.


Click it and Unblock the Notifications











