ವಿಎಚ್ಪಿ, ಭಜರಂಗದಳದ ವಿರೋಧ; ಕಾಸರವಳ್ಳಿ ‘ಅಚಲ’ ಪ್ಯಾಕಪ್
ಮಡಿಕೇರಿ : ವಿಶ್ವಹಿಂದು ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರ ಪ್ರತಿರೋಧದ ಪರಿಣಾಮ ಗಿರೀಶ್ ಕಾಸರವಳ್ಳಿ ನಿರ್ದೇಶನದ ಅಚಲ ಚಿತ್ರದ ಚಿತ್ರೀಕರಣಕ್ಕೆ ಅಡಚಣೆಯಾಗಿದೆ.
ಮಡಿಕೇರಿಯ ಐತಿಹಾಸಿಕ ಗದ್ದುಗೆಯಲ್ಲಿ ಕಳೆದ ಎರಡು ದಿನಗಳಿಂದ ಚಿತ್ರೀಕರಣವನ್ನು ನಡೆಸಲಾಗುತ್ತಿತ್ತು. ಗದ್ದುಗೆಯಲ್ಲಿ ಮಸೀದಿಯ ಸೆಟ್ ಹಾಕಲಾಗಿದೆ ಎನ್ನುವ ಸುದ್ದಿ ಕಿವಿಗೆ ಬೀಳುತ್ತಲೇ ಹಿಂದೂ ಸಂಘಟನೆಗಳು ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು.
ಗದ್ದುಗೆಯನ್ನು ಮಸೀದಿಯಂತೆ ಮಾರ್ಪಾಡಿಸಿರುವುದರಿಂದ ಸ್ಥಳದ ಐತಿಹ್ಯಕ್ಕೆ ಧಕ್ಕೆಯಾಗಿದೆ. ಚಿತ್ರತಂಡ ಗದ್ದುಗೆಗೆ ಪಾದರಕ್ಷೆಯಾಂದಿಗೆ ಒಳಪ್ರವೇಶಿಸಿ ಹಿಂದುಗಳ ಭಾವನೆಗೆ ಚ್ಯುತಿ ತಂದಿದೆ. ಕೂಡಲೇ ಮಸೀದಿಯ ಸೆಟ್ನ್ನು ತೆಗೆಯುವಂತೆ ಕಾರ್ಯಕರ್ತರು ಒತ್ತಾಯಿಸಿದರು.
ಚಿತ್ರ ಸಾಹಿತಿ ಭಾನು ಮುಷ್ತಾಕ್ ಅವರ ಕರಿನಾಗ ಕತೆ ಆಧರಿಸಿ ತಯಾರಾಗುತ್ತಿರುವ ಅಚಲ ಚಿತ್ರ ಮುಸ್ಲಿಂ ಮಹಿಳೆ ಕಂದಾಚಾರಗಳ ವಿರುದ್ಧ ಪ್ರತಿಭಟಿಸುವ ಕತೆಯನ್ನು ಹೊಂದಿದೆ. ಮಸೀದಿಯಲ್ಲಿ ಚಿತ್ರೀಕರಣಕ್ಕೆ ಪರವಾನಗಿ ದಕ್ಕದ ಕಾರಣ, ಈ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯ ಪ್ರಾಚ್ಯವಸ್ತು ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು.
ಆಚಲ ಚಿತ್ರದ ನಾಯಕಿ, ನಿರ್ಮಾಪಕಿ ತಾರಾ ಪ್ರತಿಭಟನೆಯಿಂದ ಬೇಸರವಾಗಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications