ಅರ್ಜುನ್ ಸರ್ಜಾ, ಅಳಿಯ ಚಿರಂಜೀವಿಗೂ ಜಟಾಪಟಿ?
"ಅವನ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ನಂಗೆ ಕಾನ್ಫಿಡೆನ್ಸ್ ಇರುವುದು ಧ್ರುವನ ಮೇಲೆ. ಚಿರಂಜೀವಿ ನನ್ನ ಮಾತು ಕೇಳುವ ಹಂತ ಮೀರಿದ್ದಾನೆ. ಅವನ ದಾರಿ ಅವನೇ ಕಂಡುಕೊಳ್ಳುತ್ತಿದ್ದಾನೆ. ನಾನು ಮಧ್ಯೆ ಹೋಗಿ ಅವನಿಗ್ಯಾಕೆ ತೊಂದರೆ ಮಾಡಲಿ. ದಯವಿಟ್ಟು ಅವನ ಬಗ್ಗೆ ನನ್ನಲ್ಲಿ ಏನನ್ನೂ ಕೇಳಬೇಡಿ" ಹೀಗೆಂದು ನಟ ಅರ್ಜುನ್ ಸರ್ಜಾ ಮಾಧ್ಯಮದ ಮಂದೆ ಹೇಳಿದ್ದಾರೆಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ.
ನಟ ಚೀರಂಜೀವಿ, ಅರ್ಜುನ್ ಸರ್ಜಾರ ಅಕ್ಕನ ಮಗ ಎಂಬುದು ಹೆಚ್ಚಿನ ಜನರಿಗೆ ಗೊತ್ತಿದೆ. ಚಿರಂಜೀವಿಯ ತಮ್ಮ ಧ್ರುವ. ಸದ್ಯದಲ್ಲೇ ಬಿಡುಗಡೆ ಆಗಲಿರುವ 'ಅದ್ದೂರಿ' ಚಿತ್ರದ ನಾಯಕ ಧ್ರುವ. ಚಿತ್ರ ಬಿಡುಗಡೆಯಾದ ಮೇಲೆ 'ಹೀರೊ' ಎನಿಸಿಕೊಳ್ಳಲಿರುವವ. ಆದರೆ ಚಿರು ಈಗಾಗಲೇ ವಾಯುಪುತ್ರ, ಚಿರು, ದಂಡಂ ದಶಗುಣಂ ಹಾಗೂ ಗಂಡೆದೆ ಮುಂತಾದ ಚಿತ್ರಗಳಲ್ಲಿ ನಾಯಕರಾಗಿ ನಟಿಸಿ ಈಗಾಗಲೇ ಒಂದು ಹಂತ ಮುಟ್ಟಿರುವ ನಟ.
ಆದರೆ ಈ ಮಧ್ಯೆ ಮಾವ-ಅಳಿಯನ ಮಧ್ಯೆ ಅದ್ಯಾಕೆ ಮನಸ್ತಾಪ ಆಗಿದೆಯೋ ಗೊತ್ತಿಲ್ಲ. ಆದರೆ ತೀರಾ ಇತ್ತೀಚಿಗೆ ಅರ್ಜುನ್ ಸರ್ಜಾ, ತಮ್ಮ ತಾಯಿ ತುಮಕೂರಿನ ಮಧುಗಿರಿಯಲ್ಲಿ ಕಟ್ಟಿಸಿರುವ ದೇವಸ್ಥಾನದ ಪ್ರಾರಂಭೋತ್ಸವಕ್ಕೆ ಬಂದಿದ್ದರು. ಆಗ ಅವರ ಜೊತೆ ಇದ್ದಿದ್ದು ಕೂಡ ಧ್ರುವನೇ ಹೊರತೂ ಚಿರಂಜೀವಿ ಅಲ್ಲ. 'ಯಾಕೆ ಹೀಗಾಯ್ತೋ...' ಎಂಬ ಹಾಡನ್ನು ಇದೀಗ ಸಿನಿಪ್ರೇಕ್ಷಕರು ಹಾಡಲಾರಂಭಿಸಿದ್ದಾರೆ. ಈಗಲೇ ಎಚ್ಚೆತ್ತುಕೊಂಡರೆ ಚಿರು ಭವಿಷ್ಯಕ್ಕೆ ಒಳ್ಳೆಯದು ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











