ವಾಣಿಜ್ಯ ಮಂಡಳಿ ಮೇಲೆ ದಾಳಿ...
ಬೆಂಗಳೂರು: ನಗರದ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳಿಗೆ ಸಿಗುತ್ತಿರುವ ಹೆಚ್ಚಿನ ಆದ್ಯತೆಯನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮೂವಿಲ್ಯಾಂಡ್ ಚಿತ್ರ ಮಂದಿರ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪರಭಾಷಾ ಚಿತ್ರಗಳ ಓರ್ವ ಹಂಚಿಕೆದಾರರ ಕಚೇರಿ ಮೇಲೆ ದಾಳಿ ನಡೆಸಿದರು.
ಬುಧವಾರ ಬೆಳಗ್ಗೆ ತೆಲುಗು ಚಲನಚಿತ್ರ ಪ್ರದರ್ಶಿಸಲಾಗುತ್ತಿದ್ದ ಮೂವಿಲ್ಯಾಂಡ್ ಚಿತ್ರಮಂದಿರಕ್ಕೆ ಕನ್ನಡ ಬಾವುಟದೊಂದಿಗೆ ನುಗ್ಗಿದ ಕನ್ನಡ ಕಾರ್ಯಕರ್ತರು ಏಕಾಏಕಿ ದಾಳಿನಡೆಸಿ ಕಲ್ಲು ತೂರಾಟ ನಡೆಸಿದರು ಮತ್ತು ಕನ್ನಡ ಚಿತ್ರವನ್ನು ಪ್ರದರ್ಶಿಸುವಂತೆ ಒತ್ತಾಯಿಸಿದರು ಎಂದು ಪೋಲಿಸರು ತಿಳಿಸಿದ್ದಾರೆ.
ಆಕ್ರೋಶಭರಿತ ಕಾರ್ಯಕರ್ತರು ಅಲ್ಲಿಂದ ತಮ್ಮ ಗಮನವನ್ನು ಗಾಂಧಿನಗರದ ಸಂದೇಶ್ ಎಂಟರ್ ಪ್ರೆೃಸಸ್ ಕಟ್ಟಡದಲ್ಲೇ ಇರುವ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯತ್ತ ಹೋಗಿ ಅಲ್ಲಿನ ಕಂಪ್ಯೂಟರ್, ಕುರ್ಚಿಗಳು ಮತ್ತಿತ್ತರ ವಸ್ತುಗಳನ್ನು ಪುಡಿಮಾಡಿದ್ದಾರೆ.
ಕುಮಾರಕೃಪಾ ರಸ್ತೆಯಲ್ಲಿರುವ ಅಹುಜಾ ಛೇಂಬರ್ನಲ್ಲಿರುವ ಪರಭಾಷಾ ಚಿತ್ರಗಳ ವಿತರಕ ಪಾಲ್ ಚಂದಾನಿ ಕಚೇರಿಯ ಮೇಲೂ ಉದ್ರಿಕ್ತರ ಗುಂಪು ದಾಳಿ ನಡೆಸಿದೆ. ಕಚೇರಿಯ ಗಾಜುಗಳನ್ನು ಕೈಯಿಂದ ಚೂರು ಮಾಡಿದ ಕೆಲವರು ಗಾಯಗೊಂಡಿದ್ದಾರೆ. 10 ರಿಂದ 15 ನಿಮಿಷಗಳ ಒಳಗೆ ಈ ಮೂರೂ ಘಟನೆಗಳು ನಡೆದುಹೋದವು.
ಇದೇ ವೇಳೆ ಕನ್ನಡ ಕಾರ್ಯಕರ್ತರ ದಾಳಿಯ ಭೀತಿಯಿಂದ ಪರಭಾಷಾ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಮಾಲೀಕರು ಬುಧವಾರ ದಿನದ ಪ್ರದರ್ಶನ ರದ್ದು ಪಡಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ರಮೇಶ್ ಚಿತ್ರ ರಂಗದ ಪ್ರಮುಖ ವ್ಯಕ್ತಿಗಳೊಂದಿಗೆ ಮಂಗಳವಾರ ಮುಖ್ಯಮಂತ್ರಿಧರ್ಮಸಿಂಗ್ ಅವರನ್ನು ಭೇಟಿ ಮಾಡಿ,ಪರಭಾಷಾ ಚಿತ್ರಗಳ ಪ್ರದರ್ಶನಕ್ಕೆ ಎಂದಿನಂತೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕನ್ನಡ ಪರ ಕಾರ್ಯಕರ್ತರು ಗಾಂಧಿನಗರ ಸುತ್ತಮುತ್ತ ದಾಂಧಲೆ ನಡೆಸಿ ಪ್ರತಿಭಟನೆ ನಡೆಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications