ಕಾಸರವಳ್ಳಿ ರಾಜಿ ; ಮಸೀದಿ ಸೆಟ್ ಇಲ್ಲದೆ ಚಿತ್ರೀಕರಣ ಮುಂದುವರಿಕೆ
ಮಡಿಕೇರಿ : ವಿಶ್ವ ಹಿಂದೂಪರಿಷತ್ ಹಾಗೂ ಭಜರಂಗದದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಅಚಲ’ ಚಿತ್ರದ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದೆ.
ವಿವಾದಕ್ಕೆ ಕಾರಣವಾಗಿದ್ದ ಮಡಿಕೇರಿಯ ಐತಿಹಾಸಿಕ ಗದ್ದುಗೆಯಲ್ಲಿಯೇ ನ.18ರ ಗುರುವಾರ ಚಿತ್ರೀಕರಣ ಮುಂದುವರೆಯಿತು. ಆದರೆ ಗದ್ದುಗೆಯನ್ನು ಮಸೀದಿಯಂತೆ ಪರಿವರ್ತಿಸಲಾಗಿದ್ದ ಸೆಟ್ ತೆಗೆದುಹಾಕಲಾಗಿದ್ದು , ಸಹಜ ಪರಿಸರದಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತಿದೆ.
ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳಗಳ ಕಾರ್ಯಕರ್ತರೊಂದಿಗಿನ ಮಾತುಕತೆಯ ನಂತರ ಚಿತ್ರೀಕರಣ ನಡೆಸಲಾಗುತ್ತಿದೆ. ತಮ್ಮ ಚಿತ್ರದ ಕಥೆಗೆ ಈ ಪರಿಸರ ಅತ್ಯಂತ ಸೂಕ್ತವಾದುದು ಎಂದು ಕಾಸರವಳ್ಳಿ ತಿಳಿಸಿದ್ದಾರೆ.
ವಿವಾದ ತಿಳಿಯಾಗಿ ಚಿತ್ರೀಕರಣ ಮುಂದುವರೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕಿ ಹಾಗೂ ನಾಯಕಿ ತಾರಾ, ಮುಂದೆಂದೂ ಮಡಿಕೇರಿ ತಮಗೆ ಅಹಿತಕರ ಅನುಭವ ನೀಡದಿರಲಿ ಎಂದು ಆಶಿಸಿದ್ದಾರೆ.
ಖಂಡನೆ : ಕಾಸರವಳ್ಳಿಯವರ ಚಿತ್ರದ ಚಿತ್ರೀಕರಣಕ್ಕೆ ಅಡ್ಡಿ ಉಂಟು ಮಾಡಿದ ಸಂಘಟನೆಗಳ ನಡವಳಿಕೆಯ ಕುರಿತು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದ ಎ.ಸಿ. ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗು ಆತಿಥ್ಯಕ್ಕೆ ಹೆಸರುವಾಸಿಯಾದ ಪ್ರದೇಶ. ಹೀಗಿರುವಾಗ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕನನ್ನು ಅವಮಾನಿಸುವುದು ಸರಿಯಲ್ಲ ಎಂದು ಕಾರ್ಯಪ್ಪ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications