ಕೆಎಫ್ಸಿಸಿ ಎದಿರು ನಡೆಯದ ದಯಾಳ್ 'ಸರ್ಕಸ್'

ಎಸ್.ಮಹೇಂದರ್ ಅವರ ಬಳಿ ದಯಾಳ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾಗ ಈ ಕಥೆಯನ್ನು ಮಹೇಂದರ್ ಬರೆದಿದ್ದರು. ಅದೇ ಕಥೆಯನ್ನು ಈಗ ದಯಾಳ್ ಕದ್ದಿರುವುದು ಸಾಬೀತಾದ ಕಾರಣ ಮಹೇಂದರ್ ಅವರಿಗೆ ಮನ್ನಣೆ ನೀಡಿ ಅವರಿಗೆ ರು.1.5 ಲಕ್ಷ ಪರಿಹಾರ ಧನ ಕೊಡಬೇಕು ಎಂದು ಕೆಎಫ್ ಸಿಸಿ ಆದೇಶಿಸಿದೆ. ಈ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಕೆಎಫ್ ಸಿಸಿಗೂ ರು.25000 ದಂಡ ಕಟ್ಟುವಂತೆ ದಯಾಳ್ ಅವರಿಗೆ ತಾಕೀತು ಮಾಡಿದೆ. ಒಟ್ಟಿನಲ್ಲಿ ಕೆಎಫ್ ಸಿಸಿ ಮಧ್ಯಸ್ಥಿಕೆಯಿಂದ ನಿರ್ದೇಶಕ ಮಹೇಂದರ್ ಗೆ ನ್ಯಾಯ ದೊರಕಿದೆ.
ಈ ಕಥೆಯನ್ನು ಸ್ವತಃ ತಾವೇ ಹತ್ತು ವರ್ಷಗಳ ಹಿಂದೆ ರಚಿಸಿರುವುದಾಗಿ ದಯಾಳ್ ವಾದಿಸಿದ್ದರು. ಆದರೆ ಮಹೇಂದರ್ ಈ ಕಥೆಯನ್ನು ಮತ್ತೊಬ್ಬ ನಿರ್ಮಾಪಕ ರಮೇಶ್ ಯಾದವ್ ಸೇರಿದಂತೆ ಹಲವಾರು ನಿರ್ಮಾಪಕರ ಬಳಿ ಈ ಮುಂಚೆಯೇ ಹೇಳಿಕೊಂಡಿದ್ದರು. ಆದರೆ ದಯಾಳ್ ಇದನ್ನು ಸುತಾರಾಂ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಕಥೆಯ ಬಗ್ಗೆ ಮಹೇಂದರ್ ಪ್ರಸ್ತಾಪಿಸಿದ್ದಾಗಲೂ ದಯಾಳ್ ಕ್ಯಾರೆ ಅಂದಿರಲಿಲ್ಲ. ಇದರಿಂದ ರೋಸಿ ಹೋದ ಮಹೇಂದರ್ ಕಡೆಗೆ ಕೆಎಫ್ ಸಿಸಿ ಬಳಿ ದೂರು ದಾಖಲಿಸಿದರು. ಕೆಎಫ್ ಸಿಸಿ ವಿಚಾರಣೆ ನಡೆಸಿದಾಗ ದಯಾಳ್ ಕಥೆ ಕದ್ದಿರುವುದು ಸಾಬೀತಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











