ಹೊಟ್ಟೆಪಾಡಿಗೆ ಕುತ್ತು ಬಂದಿದೆ -ರಾಜ್
- ದಟ್ಸ್ಕನ್ನಡ ಬ್ಯೂರೊ
ಕನ್ನಡ ಚಿತ್ರರಂಗದ ಬಿಕ್ಕಟ್ಟಿನ ಕುರಿತು ರಾಜ್ಯ ಸರ್ಕಾರ ಕೈತೊಳೆದುಕೊಳ್ಳುವ ಧೋರಣೆ ಅನುಸರಿಸುತ್ತಿರುವ ಕುರಿತು ಸ್ವತಃ ರಾಜ್ಕುಮಾರ್ ಅಸಮಾಧಾನಗೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಹೊಸ ಚಿತ್ರದ ಮುಹೂರ್ತದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್, ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡರು.
ನರಿಯ ಕೂಗು ಗಿರಿಗೆ ಮುಟ್ಟೀತೆ? ಎಂದು ಮಾರ್ಮಿಕವಾಗಿ ನುಡಿದ ರಾಜ್ಕುಮಾರ್- ತಮಗೆ ಆರೋಗ್ಯ ಸರಿಯಿದ್ದಲ್ಲಿ ಇತರರೊಂದಿಗೆ ತಾವೂ ಚಳವಳಿಯಲ್ಲಿ ಮುಕ್ತವಾಗಿ ಭಾಗವಹಿಸುತ್ತಿದ್ದೆ ಎಂದರು. ಅವಶ್ಯ ಬಿದ್ದಲ್ಲಿ ಮತ್ತೆ ಚಳವಳಿ ಪ್ರಾರಂಭಿಸುವ ಇಂಗಿತ ಅವರ ಮಾತುಗಳಲ್ಲಿತ್ತು.
ಈ ನಡುವೆ ಕನ್ನಡೇತರ ಚಿತ್ರಗಳ ಬಿಡುಗಡೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಸ್ಥಗಿತಗೊಂಡಿದೆ. ಮುಖ್ಯಮಂತ್ರಿ ಧರ್ಮಸಿಂಗ್ರವರು ಚಿತ್ರೋದ್ಯಮದೊಂದಿಗೆ ಮಾತುಕತೆ ನಡೆಸಬಹುದೆನ್ನುವ ಆಶಾವಾದ ಇನ್ನೂ ಇರುವುದರಿಂದ ಸದ್ಯಕ್ಕೆ ಪ್ರತಿಭಟನೆ ಬೇಡ ಎಂದು ಕನ್ನಡಪರ ಸಂಘಟನೆಗಳಿಗೆ ಚಿತ್ರೋದ್ಯಮ ಮನವಿ ಮಾಡಿಕೊಂಡಿದೆ.
ನ.18 ರ ಗುರುವಾರದಂದೆ ಕನ್ನಡ ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬೇಕಾಗಿತ್ತು . ಆದರೆ ಕಾರ್ಯ ಒತ್ತಡಗಳ ಕಾರಣದಿಂದಾಗಿ ಸಭೆ ರದ್ದಾಗಿತ್ತು . ಶುಕ್ರವಾರವೂ ರದ್ದಾದ ಸಭೆ, ಮತ್ತೆ ಯಾವಾಗ ನಡೆಯುತ್ತದೆನ್ನುವ ಕುರಿತು ವಿವರಗಳು ಯಾರ ಬಳಿಯೂ ಇಲ್ಲ.
ಸರ್ಕಾರದ ಕಣ್ಣಾಮುಚ್ಚಾಲೆ ನೀತಿಯ ಬಗ್ಗೆಯೂ ರಾಜ್ ಹಾಗೂ ಪಾರ್ವತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರೆದ್ರು, ಆಮೇಲೆ ರದ್ದು ಮಾಡಿದ್ರು , ಮತ್ತೆ ಯಾವಾಗ ಕರೀತಾರೋ ನೋಡೋಣ ಎಂದು ರಾಜ್ ಹೇಳುತ್ತಾರೆ.
ಹೋರಾಟ ಖಚಿತ : ಕನ್ನಡೇತರ ಚಿತ್ರಗಳ ವಿರುದ್ಧದ ಹೋರಾಟ ತಣ್ಣಗಾಗುತ್ತಿರುವ ಕುರಿತು ರಾಜ್ ಗಮನ ಸೆಳೆದಾಗ ಅವರು ಹೇಳಿದ್ದಿಷ್ಟು -
ನಮ್ಮ ಹೊಟ್ಟೆಪಾಡಿಗೇ ಸಂಚಕಾರ ಬಂದಿದೆ. ಹೀಗಾಗಿ ಹೋರಾಟ ಖಚಿತ. ಯಾರು ಜೊತೆಗೆ ಬರಲಿ, ಬಿಡಲಿ, ಹೋರಾಟ ನಿಲ್ಲುವುದಿಲ್ಲ.
ಭಾನುವಾರದ ನಂತರ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ನಿರ್ಮಾಪಕರ ಸಂಘದ ಬಸಂತಕುಮಾರ್ ಹಾಗೂ ನಿರ್ದೇಶಧಿಕರ ಸಂಘದ ಎಸ್. ವಿ.ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ. ಕರುನಾಡ ಸೇನೆ ಕೂಡ ಚಿತ್ರೋದ್ಯಮದೊಂದಿಗೆ ನಿಕಟ ಸಂಪರ್ಕದಲ್ಲಿದೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications